ಮೈಸೂರು ಸ್ವಚ್ಛತಾ ರಾಯಭಾರಿಗಳಾಗಿ ಜ್ಞಾನಾನಂದ ಸ್ವಾಮೀಜಿ, ಯೋಗಪಟು ಖುಷಿ
ಮೈಸೂರು, ನವೆಂಬರ್ 11 : ಮೈಸೂರು ಮಹಾನಗರ ಪಾಲಿಕೆಯು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಆತ್ಮ ಜ್ಞಾನಾನಂದ ಸ್ವಾಮೀಜಿ ಮತ್ತು ವಿಶ್ವ ಗಿನ್ನಿಸ್ ದಾಖಲೆ ಯೋಗಪಟು ಖುಷಿ ಹೆಚ್ ಅವರನ್ನು ಸ್ವಚ್ಛತಾ ರಾಯಭಾರಿಯನ್ನಾಗಿ ನಿಯೋಜಿಸಲಾಗಿದೆ ಎಂದು ಪಾಲಿಕೆ ಆರೋಗ್ಯ ಅಧಿಕಾರಿ ರಾಮಚಂದ್ರ ತಿಳಿಸಿದ್ದಾರೆ.
ಇದರನ್ವಯ ಈಗಾಗಲೇ ನಿಯೋಜಿಸಿರುವ ಸ್ವಚ್ಛತಾ ರಾಯಭಾರಿಗಳಾದ ರಾಜಮಾತೆ ಪ್ರಮೋದಾದೇವಿ ಹಾಗೂ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಭಾರತದ ಅಂತಾರಾಷ್ಟ್ರೀಯ ವೇಗದ ಬೌಲರ್ ಹಾಗೂ ಹಾಲಿ ಅಂತಾರಾಷ್ಟ್ರೀಯ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ರವರ ಜೊತೆಗೆ ಹೊಸದಾಗಿ ನೇಮಕಗೊಂಡಿರುವ ಸ್ವಚ್ಛತಾ ರಾಯಭಾರಿಗಳ ಮುಖಾಮುಖಿ ಪರಿಚಯ ನ.12ರಂದು ಬೆಳಿಗ್ಗೆ 10 ಮೈಸೂರಿನ ಅರಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಮೈಸೂರು ನಗರವು ದೇಶದ ಪ್ರಥಮ ಸ್ವಚ್ಛನಗರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡು, 2016-17ನೇ ಸಾಲಿನಲ್ಲಿ ಐದನೇ ಸ್ವಚ್ಛನಗರವೆಂಬ ಗರಿಮೆಯನ್ನು ಪಡೆದುಕೊಂಡಿದೆ. ಮೈಸೂರು ನಗರವು ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳದೇ ಐದನೇ ಸ್ಥಾನವನ್ನು ಪಡೆಯಲು ಸಾರ್ವಜನಿಕರ ಸಹಕಾರ ದೊರೆಯದ ಕಾರಣ ಮೈಸೂರು ಐದನೇ ಸ್ಥಾನವನ್ನು ಪಡೆದುಕೊಂಡಿದೆ.
ಆದರೆ ಮೈಸೂರು ನಗರವು ದೇಶದ ಸ್ವಚ್ಛ ನಗರವೆಂಬ ಗರಿಮೆಯನ್ನು ನಿರಂತರವಾಗಿ ಉಳಿಸಿಕೊಳ್ಳಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.