ದಸರಾ ಸಂಭ್ರಮಕ್ಕಾಗಿ ಅರಮನೆ ಪ್ರವೇಶಿಸಿದ ಎರಡನೇ ಗಜಪಡೆ
ಮೈಸೂರು, ಸೆಪ್ಟೆಂಬರ್ 12: ಎರಡನೇ ತಂಡದ ಗಜಪಡೆ ಅರಮನೆ ಆವರಣವನ್ನು ಭಾನುವಾರ ಪ್ರವೇಶಿಸಿದ್ದು, ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು.
ಹರ್ಷ ನೇತೃತ್ವದ ವಿಕ್ರಮ, ಗೋಪಿ, ಪ್ರಶಾಂತ, ದುರ್ಗಾಪರಮೇಶ್ವರಿ, ಗೋಪಾಲ ಸ್ವಾಮಿ ಒಳಗೊಂಡ ಆರು ಆನೆಗಳಿದ್ದ ಗಜಪಡೆಗೆ ಶಾಸಕ ಎಂ.ಕೆ.ಸೋಮಶೇಖರ್ ಅವರು ಜಯಮಾರ್ತಾಂಡ ದ್ವಾರದ ಬಳಿ ಪೂಜೆ ಸಲ್ಲಿಸಿದರು. ನಂತರ ಅರಮನೆ ಆವರಣಕ್ಕೆ ಕರೆತರಲಾಯಿತು.
ಗಜಪಡೆಯನ್ನು ಬರಮಾಡಿಕೊಂಡ ನಂತರ ಮಾತನಾಡಿದ ಶಾಸಕ ಎಂ.ಕೆ.ಸೋಮಶೇಖರ್, ಈ ಬಾರಿಯ ದಸರಾ ಮಹೋತ್ಸವವನ್ನು ರಾಜ್ಯ ಸರಕಾರ ಸಾಂಪ್ರದಾಯಿಕವಾಗಿ ಹಾಗೂ ಹಸಿರು ದಸರಾವಾಗಿ ಆಚರಿಸಲು ನಿರ್ಧರಿಸಿದ್ದು, ಅದರಂತೆ ಇಂದು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳು ನಗರಕ್ಕೆ ಆಗಮಿಸಿವೆ. ದಸರಾದ ಪೂರಕ ಕೆಲಸಗಳನ್ನು ಸರಕಾರ ಪ್ರಾರಂಭಿಸಿದೆ ಎಂದರು.[ದಸರಾ ಆನೆ ಮಾವುತ, ಕಾವಾಡಿಗರ ಆರೋಗ್ಯ ತಪಾಸಣೆ]
ಇದೇ ವೇಳೆ ಎರಡನೇ ಗಜಪಡೆಯ ಮಾವುತರ ಕುಟುಂಬಕ್ಕೆ ಗ್ಯಾಸ್ ಸ್ಟೌವ್ ಸೇರಿದಂತೆ ಅಗತ್ಯ ದಿನಬಳಕೆ ವಸ್ತುಗಳನ್ನು ನೀಡಲಾಯಿತು.
ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ, ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸಲು ಅಗತ್ಯವಾದ ಎಲ್ಲ ಪೂರ್ವ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ. ದಸರಾ ಮಹೋತ್ಸವದ ಜಾಹೀರಾತು ಫಲಕಗಳನ್ನು ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಬಿಡುಗಡೆ ಮಾಡಲಿದ್ದಾರೆ ಎಂದರು.[ಕವಿ ಚನ್ನವೀರ ಕಣವಿರವರಿಗೆ ಮೈಸೂರು ದಸರಾಗೆ ಆಹ್ವಾನ]
ಎರಡನೇ ತಂಡದ ಗಜಪಡೆಯಲ್ಲಿ ಪ್ರಶಾಂತ ಹಿರಿಯನಾಗಿದ್ದು, 6 0ವರ್ಷ ವಯಸ್ಸಾಗಿದೆ. ಹೆಣ್ಣಾನೆ ದುರ್ಗಾ ಪರಮೇಶ್ವರಿಗೆ 49 ವರ್ಷವಾಗಿದೆ. ಗೋಪಾಲ ಸ್ವಾಮಿ ತಿತಿಮತಿಯ ಮತ್ತಿಗೋಡು ಆನೆಶಿಬಿರದಿಂದ ಬಂದಿದೆ. ವಿಕ್ರಮನಿಗೆ 43 ವರ್ಷ ವಯಸ್ಸಾಗಿದೆ. ಗೋಪಿ ದುಬಾರೆ ಆನೆ ಶಿಬಿರದ್ದಾಗಿದೆ. 14ನೇ ಬಾರಿಗೆ ದಸರಾದಲ್ಲಿ ಹರ್ಷ ಪಾಲ್ಗೊಳ್ಳುತ್ತಿದ್ದಾನೆ. ಸೋಮವಾರದಿಂದಲೇ 12 ಆನೆಗಳು ತಾಲೀಮು ನಡೆಸಲಿವೆ.