ಜೀವವನ್ನೇ ಪಣವಿಟ್ಟು ಶ್ರಮಿಸುವ ಮಾವುತ-ಕಾವಾಡಿಗರಿಗೊಂದು ಸಲಾಮ್
ಮೈಸೂರು, ಸೆಪ್ಟೆಂಬರ್ 16: ನಾಡಹಬ್ಬ ದಸರಾಕ್ಕೆ ದಿನಗಣನೆ ಆರಂಭವಾಗಿದೆ. ವಿಶ್ವವಿಖ್ಯಾತ ದಸರಾವನ್ನು ಕಣ್ತುಂಬಿಸಿಕೊಳ್ಳುವ ಕೋಟ್ಯಂತರ ಜನ ಜಂಬೂಸವಾರಿಯಲ್ಲಿ ಸಾಗುವ ಗಜಪಡೆಗಳತ್ತ ಹೆಮ್ಮೆಯ ನೋಟ ಬೀರುತ್ತಾರೆ.
ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದ ಹೆಜ್ಜೆಯನ್ನು ಅರ್ಜುನ ಹಾಕುತ್ತಿದ್ದರೆ, ಅದರ ಅಕ್ಕಪಕ್ಕ ಮತ್ತು ಹಿಂದೆ, ಮುಂದೆ ಸಾಗುವ ಇತರೆ ಗಜಪಡೆ ಜಂಬೂ ಸವಾರಿಗೆ ಕಳೆ ಕಟ್ಟುತ್ತವೆ. ವಿಜಯದಶಮಿಯಂದು ಒಂದು ದಿನ ನಡೆಯುವ ಈ ವೈಭವದ ಮೆರವಣಿಗೆಗೆ ಸುಮಾರು ಎರಡು ತಿಂಗಳಿನಿಂದಲೇ ತಯಾರಿ ನಡೆಸಲಾಗುತ್ತದೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ.
ಇವರೇ ಮೈಸೂರು ದಸರಾ ಜಂಬೂಸವಾರಿಯ ತೆರೆಮರೆಯ ಹೀರೋ
ವರ್ಷ ಪೂರ್ತಿ ಕಾಡಿನಲ್ಲಿ ಹಸಿರು ಸೊಪ್ಪು ತಿನ್ನುತ್ತಾ, ಅರಣ್ಯ ಇಲಾಖೆ ಚಟುವಟಿಕೆಯಲ್ಲಿ ಭಾಗಿಯಾಗುತ್ತಾ ಕಾಲ ಕಳೆಯುತ್ತಿದ್ದ ಗಜಪಡೆಗಳನ್ನು ಅವುಗಳು ವಾಸ್ತವ್ಯ ಹೂಡಿರುವ ಆನೆ ಶಿಬಿರಗಳಿಂದ ತಂದು ನಗರದಲ್ಲಿ ಲಕ್ಷಾಂತರ ಜನರ ನಡುವೆ ಸಿಡಿಮದ್ದಿಗೆ ಬೆದರದೆ, ಜನರ ಸದ್ದುಗದ್ದಲಕ್ಕೆ ವಿಚಲಿತರಾಗದಂತೆ ಗಂಭೀರವಾಗಿ ಮತ್ತು ಶಿಸ್ತುಬದ್ಧವಾಗಿ ಸಾಂಪ್ರದಾಯಿಕ ಮೆರವಣಿಗೆಗೆ ಹೆಜ್ಜೆ ಹಾಕುವಂತೆ ಮಾಡುವುದು ಸುಲಭದ ಕೆಲಸವೇನಲ್ಲ.
ಅದರ ಹಿಂದೆ ಮಾವುತರ, ಕಾವಾಡಿಗಳ ಶ್ರಮವಿರುವುದನ್ನು ನಾವು ಗಮನಿಸಬಹುದು. ಸದಾ ಕಾವಡಿ ಮತ್ತು ಮಾವುತರ ನಡುವೆ ಇರುವ ಗಜಪಡೆ ಅವರು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುತ್ತವೆ. ಇಷ್ಟಕ್ಕೂ ತಮ್ಮದೇ ಭಾಷೆಯಿಂದ ಅವುಗಳಿಗೆ ತಾವು ಹೇಳಿದಂತೆ ಕೇಳುವಂತೆ ಮಾಡುವುದು ಅಷ್ಟು ಸುಲಭವಲ್ಲ.
ಆನೆಗಳ ಜತೆಗೆ ಭಾವನಾತ್ಮಕ ಸಂಬಂಧ
ಆ ಕೆಲಸವನ್ನು ಮಾವುತರು ಮಾಡುತ್ತಾ ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ಬಹುತೇಕ ಸಂದರ್ಭಗಳಲ್ಲಿ ಆನೆಗಳ ದಾಳಿಗೊಳಗಾಗಿ ಮಾವುತರು ಅಥವಾ ಕಾವಾಡಿಗರು ಪ್ರಾಣವನ್ನೇ ಕಳೆದುಕೊಂಡ ನಿದರ್ಶನಗಳಿವೆ. ಆದರೂ ಆನೆಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿ ಬದುಕು ಕಟ್ಟಿಕೊಳ್ಳುವುದು ಸಲೀಸಲ್ಲ.
ಮುಂದಿನ ದಿನಗಳಲ್ಲಿ ಕಠಿಣ ತಾಲೀಮು
ಈಗಾಗಲೇ ಮೈಸೂರಲ್ಲಿ ತಾಲೀಮು ನಡೆಸುತ್ತಿರುವ ಗಜಪಡೆ ಸೆಪ್ಟೆಂಬರ್ 30ರಂದು ನಡೆಯಲಿರುವ ಜಂಬೂಸವಾರಿಗೆ ಸಿದ್ಧಗೊಳ್ಳುತ್ತಿವೆ. ಈಗಾಗಲೇ ಭಾರದ, ಸಿಡಿಮದ್ದಿನ ತಾಲೀಮು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಅವುಗಳಿಗೆ ಕಠಿಣ ತಾಲೀಮು ಆರಂಭವಾಗಲಿವೆ.
ಅರಮನೆ ಆವರಣದಲ್ಲಿ ವಾಸ್ತವ್ಯ
ಅರಮನೆ ಆವರಣದಲ್ಲಿ ಗಜಪಡೆಗಳೊಂದಿಗೆ ವಾಸ್ತವ್ಯ ಹೂಡಿರುವ ಕಾವಾಡಿ, ಮಾವುತರ ಕುಟುಂಬ ಗಜಪಡೆಗಳನ್ನು ಜತನದಿಂದ ಆರೈಕೆ ಮಾಡುತ್ತಿದೆ. ಆನೆಗಳನ್ನು ಕಟ್ಟಿಹಾಕುವುದರಿಂದ ಆರಂಭವಾಗಿ ಅವುಗಳು ಹಾಕುವ ಲದ್ದಿಯನ್ನು ತೆಗೆಯುವುದು, ಆಹಾರ ತಯಾರಿಸುವುದು, ಮಜ್ಜನ ಮಾಡಿಸುವುದು ಹೀಗೆ ಎಲ್ಲವನ್ನೂ ಮಾಡಿಸುತ್ತಾ ಅವುಗಳನ್ನು ಜತನದಿಂದ ನೋಡಿಕೊಳ್ಳುತ್ತಿದೆ.
ಸಾಂಪ್ರದಾಯಿಕ ಪೋಷಾಕು
ಪ್ರತಿಯೊಂದು ಆನೆಗೂ ಒಬ್ಬ ಮಾವುತ ಮತ್ತು ಕಾವಾಡಿ ಇರಲಿದ್ದು, ಅವರು ಅವುಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಇದುವರೆಗೆ ಕಾಡಿನಲ್ಲಿ ಆನೆಗಳೊಂದಿಗಿದ್ದ ಮಾವುತರಿಗೂ ಈಗ ರಾಜವೈಭವ ಜಂಬೂಸವಾರಿಯಂದು ಸಾಂಪ್ರದಾಯಿಕ ಪೋಷಾಕು ಧರಿಸಿ ಗಜಪಡೆಯೊಂದಿಗೆ ಮೆರವಣಿಗೆಯಲ್ಲಿ ಸಾಗುವ ಅವರು ಎಲ್ಲರ ಗಮನಸೆಳೆಯುತ್ತಾರೆ.
ಅವರ ಶ್ರಮಕ್ಕೆ ಸಲಾಂ
ದಸರಾ ಮುಗಿಯುತ್ತಿದ್ದಂತೆಯೇ ಕಾಡು ಸೇರುವ ಅವರು ಮತ್ತೆ ಬರುವುದು ಮುಂದಿನ ದಸರಾಕ್ಕೆ. ಅದೇನೇ ಇರಲಿ, ಮೈಸೂರು ದಸರಾದಲ್ಲಿ ಮಾವುತರು ಮತ್ತು ಕಾವಾಡಿಗಳ ಶ್ರಮವನ್ನು ನಾವ್ಯಾರು ಮರೆಯಬಾರದು. ಅವರಿಗೊಂದು ಸಲ್ಯೂಟ್!