ಎಸ್ಸೆಂ ಕೃಷ್ಣ ಬಿಜೆಪಿಗೆ ಸೇರಿದರೆ ಪಕ್ಷದ ಶಕ್ತಿ ಹೆಚ್ಚಲಿದೆ: ಶ್ರೀನಿವಾಸ ಪ್ರಸಾದ್
ಮೈಸೂರು, ಫೆಬ್ರವರಿ ೩: ನಂಜನಗೂಡು ಉಪಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಗೊಂದಲದಲ್ಲಿದೆ. ಪ್ರಸ್ತುತ ಎಸ್ಸೆಂ ಕೃಷ್ಣ ಅವರು ಪಕ್ಷವನ್ನು ತೊರೆದಿದ್ದು, ಕಾಂಗ್ರೆಸ್ ದಿವಾಳಿಯಾಗಿದೆ. ಕೃಷ್ಣ ಅವರ ಒಲವು ಬಿಜೆಪಿ ಪಕ್ಷದತ್ತಲೇ ಇರುವಂತಿದೆ, ಬಿಜೆಪಿ ಸೇರಿದರೆ ಶಕ್ತಿ ಮತ್ತಷ್ಟು ಹೆಚ್ಚಲಿದೆ ಎಂದು ಶ್ರೀನಿವಾಸ ಪ್ರಸಾದ್ ತಿಳಿಸಿದರು.
ಬಿಜೆಪಿಗೆ ಸೇರಿ ಮೊದಲ ಬಾರಿಗೆ ಮೈಸೂರು ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ ವಿ. ಶ್ರೀನಿವಾಸ ಪ್ರಸಾದ್ ಮಾತನಾಡಿ, ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅತ್ಯಂತ ಹಿರಿಯ ರಾಜಕಾರಣಿ. ಅವರೂ ಸಹ ನನ್ನಂತೆಯೇ ನೋವಿನಿಂದ ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಜನನಾಯಕರಿಗೆ ಬೆಲೆ ಇಲ್ಲವೆಂದು ಕೃಷ್ಣ ಹೇಳಿದ್ದಾರೆ. ಕೃಷ್ಣರವರ ಒಲವು ಕೂಡ ಬಿಜೆಪಿ ಪಕ್ಷದತ್ತಲೇ ಇರುವಂತಿದೆ. ಆದರೆ ಇದನ್ನು ಅವರು ಹೇಳಬೇಕಿದೆ. ಕೃಷ್ಣರವರು ಬಿಜೆಪಿ ಗೆ ಬಂದರೆ ಬಿಜೆಪಿ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ ಎಂದರು.[ನೂರು ಶ್ರೀನಿವಾಸ ಪ್ರಸಾದ್ ಹುಟ್ಕೋತಾರೆ, ಕಾಂಗ್ರೆಸ್ ಶಕ್ತಿ ಪ್ರದರ್ಶನ]
ನಂಜನಗೂಡು ಕ್ಷೇತ್ರದ ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜ್ಯ ಸರ್ಕಾರ ಏಕೆ ಈಗ ಭರಪೂರ ಯೋಜನೆಗಳನ್ನು ಪ್ರಕಟಿಸುತ್ತಿದೆ ಎಂಬುದು ಜನರಿಗೆ ಮನವರಿಕೆ ಆಗಿದೆ. ನಾನು ಇದುವರೆಗೂ ಸ್ಪರ್ಧಿಸಿರುವ ಹತ್ತು ಚುನಾವಣೆಗಳಲ್ಲಿ ನಂಜನಗೂಡಿನ ಮತದಾರರು ಮುನ್ನಡೆ ದೊರಕಿಸಿಕೊಟ್ಟಿದ್ದಾರೆ. ಮುಂಬರುವ ಉಪಚುನಾವಣೆಯಲ್ಲೂ ನಂಜನಗೂಡು ಕ್ಷೇತ್ರದ ಜನರು ನನ್ನ ಕೈಬಿಡುವುದಿಲ್ಲ ಎಂದರು.
ನನ್ನೊಬ್ಬನ ಸೇರ್ಪಡೆಯಿಂದಲೇ ಬಿಜೆಪಿ ಬಲ ಹೆಚ್ಚುತ್ತದೆ ಎಂಬ ಭ್ರಮೆ ನನ್ನಲ್ಲಿಲ್ಲ. ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ರಾಜ್ಯದಲ್ಲೂ ಅಧಿಕೃತ ವಿರೋಧ ಪಕ್ಷವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮೈಸೂರು ಚಾಮರಾಜನಗರ ಜಿಲ್ಲೆಗಳ ಎಲ್ಲಾ ಹದಿನೈದು ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಗೆಲ್ಲಿಸಲು ಶ್ರಮಿಸುತ್ತೇನೆ. ಅಕ್ಕಪಕ್ಕದ ಜಿಲ್ಲೆಗಳಲ್ಲೂ ಬಿಜೆಪಿ ಬಲವರ್ಧನೆಗೆ ಶ್ರಮಿಸುತ್ತೇನೆಂದು ತಿಳಿಸಿದರು.