ಡೆತ್ ನೋಟ್ ಬರೆದಿಟ್ಟು ಆರ್ ಎಸ್ಎಸ್ ಕಾರ್ಯಕರ್ತ ಆತ್ಮಹತ್ಯೆ
ಮೈಸೂರು, ಜನವರಿ 12 : ವಿವೇಕಾನಂದರ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದ ಸಿವಿಲ್ ಎಂಜಿನಿಯರ್, ಆರ್ಎಸ್ಎಸ್ ಕಾರ್ಯಕರ್ತ ಡೆತ್ ನೋಟ್ ಬರೆದಿಟ್ಟು ಸಾವಿಗೀಡಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿವೇಕಾನಂದರ ಜನುಮದಿನದ ಹಿಂದಿನ ದಿನ ಈ ಘಟನೆ ನಡೆದಿರುವುದು ವಿಪರ್ಯಾಸ.
ಮೃತ ಯುವಕನನ್ನು ಜೆ.ಪಿ.ನಗರ ನಿವಾಸಿ ಬಾಬು (22) ಎಂದು ಗುರುತಿಸಲಾಗಿದೆ. ಚಿಕ್ಕಂದಿನಿಂದಲೇ ಅಣ್ಣನ ಜೊತೆ ಮೈಸೂರಿನ ಮಾವನ ಮನೆಯಲ್ಲಿ ಬಂದಿದ್ದು ವ್ಯಾಸಂಗ ಮಾಡುತ್ತಿದ್ದ. ಸಿವಿಲ್ ಇಂಜಿನಿಯರಿಂಗ್ ಓದಿದ್ದ ಈತ ಆರ್ಎಸ್ಎಸ್ ನ ಸಕ್ರಿಯ ಕಾರ್ಯಕರ್ತನಾಗಿದ್ದ.[ಶೃಂಗೇರಿ ವಿದ್ಯಾರ್ಥಿ ಆತ್ಮಹತ್ಯೆ: ಮಂಗ್ಳೂರಲ್ಲಿ ಎಬಿವಿಪಿ ಬೃಹತ್ ಪ್ರತಿಭಟನೆ]
ನಗರದಲ್ಲಿ ನಡೆಯುವ ಆರ್ಎಸ್ಎಸ್ ಹಾಗೂ ಬಿಜೆಪಿ ಕಾರ್ಯಕ್ರಮದಲ್ಲಿ ಸಕ್ರಿಯನಾಗಿ ಭಾಗವಹಿಸುತ್ತಿದ್ದು, ಇತ್ತೀಚೆಗೆ ಜೀವನ ನಡೆಸಲು ತುಂಬಾ ಕಷ್ಟ ಪಡುತ್ತಿದ್ದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ. ಈತ ಆರೆಸ್ಸೆಸ್ ನಲ್ಲೂ ಸಕ್ರಿಯನಾಗಿದ್ದು, ವಿವೇಕಾನಂದರ ಚಿಂತನೆಗಳಿಂದ ಪ್ರಭಾವಿತನಾಗಿದ್ದ ಎನ್ನಲಾಗಿದೆ.[ರುದ್ರೇಶ್ ಕೊಲೆ ಪ್ರಕರಣ: ಭುಗಿಲೆದ್ದ ಬಿಜೆಪಿ ಆಕ್ರೋಶ]
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಈ ದೇಹ ನಶ್ವರ, ವಿವೇಕಾನಂದರಂತೆ ನಾನು ನನ್ನ ದೇಹವನ್ನು ತ್ಯಜಿಸುತ್ತಿದ್ದೇನೆ. ಮರಣಾನಂತರ ಚಾಮುಂಡೇಶ್ವರಿ ದೇವಿಯ ತೀರ್ಥವನ್ನು ನನ್ನ ದೇಹಕ್ಕೆ ಪ್ರೋಕ್ಷಣೆ ಮಾಡಬೇಕು. ದೇಹಕ್ಕೆ ಕೇಸರಿ ಬಟ್ಟೆ ಹೊದಿಸಿ ಅಂತ್ಯಕ್ರಿಯೆ ನಡೆಸಿ. ದೇಹ ದಹಿಸಿದ ನಂತರ ಚಿತಾಭಸ್ಮವನ್ನು ಕನ್ಯಾಕುಮಾರಿಯಲ್ಲಿ ವಿಸರ್ಜಿಸಿ ಎಂದು ಬರೆಯಲಾಗಿದೆ.[ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣ, ವಿಡಿಯೋ]
ಈತ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆವ್ಯಕ್ತವಾಗಿದ್ದು, ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.