ಉಕ್ಕುತ್ತಿರುವ ಕಪಿಲ, ಕಾವೇರಿ: ಪ್ರವಾಹ ಭೀತಿಯಲ್ಲಿ ನದಿಪಾತ್ರದ ಜನ
ಮೈಸೂರು, ಆಗಸ್ಟ್ 18 : ಕಬಿನಿಯಿಂದ 80,500 ಕ್ಯೂಸೆಕ್ಸ್ ನೀರು, ಹಾರಂಗಿಯಿಂದ, ಕೆಆರ್ಎಸ್ನಿಂದ ಸಾವಿರಾರು ಕ್ಯೂಸೆಕ್ಸ್ ನೀರು ಹೊರಬಿಟ್ಟಿದ್ದರಿಂದ ನಂಜಗೂಡು ಸೇರಿದಂತೆ ನದಿಪಾತ್ರಗಳಲ್ಲಿ ಇರುವ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯ ಸ್ನಾನಘಟ್ಟ, 16 ಕಾಲು ಮಂಟಪ, ಪರಶುರಾಮ ಕ್ಷೇತ್ರ, ಹಳ್ಳದ ಕೇರಿ, ಸರಸ್ವತಿ ಕಾಲೋನಿ, ತೋಪಿನಬೀದಿ, ವಕ್ಕಲಗೇರಿ, ಕತ್ಯಾಡಿ ಪುರ, ಹೆಜ್ಜಿಗೆ, ತೊರೆಮಾವು, ಬೊಕ್ಕಳ್ಳಿ, ಕುಳ್ಳಂಕನ ಹುಂಡಿ, ಸುತ್ತೂರು ಮೊದಲಾದ ಜನವಸತಿ ಪ್ರದೇಶ ಜಲಾವೃತವಾಗಿ ಜನರು ಸಮಸ್ಯೆಗೆ ಸಿಲುಕಿದ್ದಾರೆ.
ಕಣ್ಣೆದುರಲ್ಲೇ ಬಿತ್ತು ಮನೆ... ಯಾರಿಗೆ ಹೇಳೋದು ಈ ಯಮಯಾತನೆ?!
ದೇವಾಲಯದ ಗಿರಿಜಾ ಕಲ್ಯಾಣ ಮಂಟಪದಲ್ಲಿನ ಗಂಜಿ ಕೇಂದ್ರದಲ್ಲಿ ತೋಪಿನ ಬೀದಿಯ 41, ವಕ್ಕಲಗೇರಿಯ 8, ಹಳ್ಳದಕೇರಿಯ 18 ಮಂದಿ ಸೇರಿದಂತೆ 75ಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದಾರೆ. ಬೊಕ್ಕಳ್ಳಿಯಲ್ಲಿ 7 ದಿನ ಹಿಂದಿನ ಪ್ರವಾಹದಲ್ಲಿ ನಿರಾಶ್ರಿತರಾದವರಿಗಾಗಿ ಆರಂಭಿಸಿದ್ದ ಶಿಬಿರ ಮುಂದುವರಿಸಲಾಗಿ ಸದ್ಯ ಅಲ್ಲಿ 57 ಜನ ಆಶ್ರಯ ಪಡೆದಿದ್ದಾರೆ. ಉಪ ತಹಸಿಲ್ದಾರ್ ಬಾಲಸುಬ್ರಹ್ಮಣ್ಯಂ ಬೊಕ್ಕಳ್ಳಿಯಲ್ಲಿ ಬೀಡುಬಿಟ್ಟಿದ್ದಾರೆ.
ಕಬಿನಿಯಿಂದ 85,500 ಕ್ಯೂಸೆಕ್ಸ್ ನೀರು ಬಿಡುಗಡೆ
ಕಬಿನಿ (82,500 ಕ್ಯೂ.) ಮತ್ತು ನುಗು (7,500 ಕ್ಯೂ.) ಜಲಾಶಯದಿಂದ ಈವರೆಗಿನ ದಾಖಲೆ ಮೀರಿ ನೀರನ್ನು ಹೊರಹರಿಸಲಾಗುತ್ತಿದ್ದು, ನದಿಯ ಪ್ರವಾಹದ ಮಟ್ಟ ಏರುತ್ತಲೇ ಇದ್ದು, ಸಂತ್ರಸ್ತರ ಸಂಖ್ಯೆಯೂ ಹೆಚ್ಚುವ ಭೀತಿ ಎದುರಾಗಿದೆ. ನುಗು ಜಲಾಶಯದ ಹೊರಹರಿವು 15 ಸಾವಿರ ಕ್ಯೂಸೆಕ್ಸ್ಗೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧ ಮುಂದುವರಿದಿದೆ.
ಮಳೆಯಿಂದ ಮನೆ ಕಳೆದುಕೊಂಡವರಿಗೆ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ
80 ಮನೆಗೆ ನುಗ್ಗಿದ ನೀರು
ಕೊಳ್ಳೇಗಾಲ ತಾಲ್ಲೂಕಿನ ದಾಸನಪುರ ಕಾವೇರಿ ನದಿ ಪ್ರವಾಹದಿಂದಾಗಿ ಜಲಾವೃತ್ತಗೊಂಡಿದೆ. 80 ಮನೆಗಳಿಗೆ ನೀರು ನುಗ್ಗಿದೆ. ಆದರೆ, ನಿವಾಸಿಗಳು ಗ್ರಾಮ ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಲು ಸಿದ್ಧರಿಲ್ಲ! ಪ್ರವಾಹಪೀಡಿತವಾದ ಮುಳ್ಳೂರು, ಹಳೆಹಂಪಾಪುರ, ದಾಸನಪುರ ಹಾಗೂ ಹರಳೆ ಗ್ರಾಮಗಳಿಗೆ ಪ್ರಾಥಮಿಕ-ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹಳೆಅಣಗಳ್ಳಿಗೂ ನೀರು ನುಗ್ಗಿದ್ದು, ಕೃಷಿಭೂಮಿ ಜಲಾವೃತವಾಗಿದೆ.
ಮುಳುಗಿದ ಕಪ್ಪಡಿ ಕ್ಷೇತ್ರ
ಸುರಿಯುತ್ತಿರುವ ಮಹಾಮಳೆಯಿಂದಾಗಿ ಹಾರಂಗಿ ಜಲಾಶಯದಿಂದ ಗುರುವಾರ 80 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಟ್ಟ ಪರಿಣಾಮ ಕಾವೇರಿ ನದಿ ನೀರಿನಲ್ಲಿ ಹೆಚ್ಚಳ ವಾಗಿ, ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ವಾಗಿರುವ ಕಪ್ಪಡಿ ಕ್ಷೇತ್ರವು ದೇವಾಲಯದ ಗರ್ಭಗುಡಿಯನ್ನು ಹೊರತುಪಡಿಸಿ ಉಳಿದೆ ಎಲ್ಲವೂ ಸಂಪೂರ್ಣವಾಗಿ ಜಲಾವೃತವಾಗಿದೆ.
ಸಿದ್ದಪ್ಪಾಜಿ ಗದ್ದುಗೆಗೆ ನೀರು
ತಾಲ್ಲೂಕಿನ ಹೆಬ್ಬಾಳು ಹೋಬಳಿಯಲ್ಲಿ ಬರುವ ಜಿಲ್ಲೆಯ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿರುವ ಶ್ರೀ ಕಪ್ಪಡಿ ರಾಚಪ್ಪಾಜಿ ಕ್ಷೇತ್ರವು ಹೆಬ್ಬಾಳು ಬಸ್ ನಿಲ್ದಾಣದಿಂದ 5 ಕಿ.ಮೀ. ದೂರದ ಕಾವೇರಿ ನದಿ ದಂಡೆಯಲ್ಲಿದೆ. ಮಂಗಳವಾರವೇ ಇದರ ಆವರಣಕ್ಕೆ ನೀರು ನುಗ್ಗಿದ್ದು ಅಕ್ಕ ಪಕ್ಕದ ಕೆಲ ಭತ್ತದ ಗದ್ದೆಗಳು ನೀರಿನಿಂದ ಮುಳುಗಡೆಯಾಗಿದ್ದವು. ಸಿದ್ದಪ್ಪಾಜಿ ಗದ್ದಿಗೆ ಮತ್ತು ಸ್ವಾಮೀಜಿ ಕೂರುವ ಉರಿಗದ್ದಿಗೆ ಸಮೀಪಕ್ಕೆ ನೀರು ಬಂದಿದ್ದು, ಇದರ ಮುಂದಿರುವ ಕೊಂಡವು ನೀರಿನಿಂದ ಜಲಾವೃತವಾಗಿದೆ.
ಕಾವೇರಿ ನದಿ ತೀರದ ಪ್ರದೇಶಗಳ ಮುಳುಗಡೆ ಭೀತಿ
ಸತತ ಒಂದು ವಾರ ದಿಂದ ಬಿಡುವಿಲ್ಲದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲ್ಲೂಕಿನ ಹಂಪಾಪುರ ಗ್ರಾಮ ಮತ್ತು ಪಟ್ಟಣದ ಹೊರವಲಯದಲ್ಲಿರುವ ಹಳೆ ಎಡತೊರೆಯ ಅರ್ಕೇಶ್ವರಸ್ವಾಮಿ ದೇವಾಲಯ ಸುತ್ತಮುತ್ತಲ ಪ್ರದೇಶ ಸೇರಿದಂತೆ ಕೆಲವು ಕಾವೇರಿ ನದಿ ತೀರದ ಪ್ರದೇಶಗಳು ಮುಳುಗಡೆಯಾಗುವ ಹಂತ ತಲುಪಿವೆ.
ರೈತನಿಗೆ ಭಾರಿ ಸಂಕಷ್ಟ
ಕೃಷ್ಣರಾಜನಗರ ತಾಲ್ಲೂಕಿನ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದಿಂದಾಗಿ ಸಹಸ್ರಾರು ಎಕರೆ ಬೆಳೆ ಜಲಾವೃತವಾಗಿದ್ದು, ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ. ಬಹಳ ವರ್ಷಗಳ ನಂತರ ಕಾವೇರಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ರಕ್ಕಸ ಪ್ರವಾಹದಿಂದಾಗಿ ಸಹಸ್ರಾರು ಎಕರೆ ಭತ್ತ, ಕಬ್ಬು, ತೆಂಗು, ಮೆಣಸು, ಸಿಲ್ವರ್ ತೋಟ ಜಲಾವೃತವಾಗಿದೆ. ತಾಲ್ಲೂಕಿನಲ್ಲೂ ಕರ್ತಾಳು ಗ್ರಾಮದಿಂದ ಲಕ್ಷ್ಮೀಪುರ, ಬೈಲಾಪುರ ಗ್ರಾಮದವರೆಗೂ ನದಿಯ ಎರಡೂ ಕಡೆ ಕಿಮೀಗಟ್ಟಲೆ ನೀರು ಆವೃತವಾಗಿದ್ದು, ಭತ್ತದ ಬೆಳೆಯಂತೂ ಸಂಪೂರ್ಣ ಮುಳುಗಿದೆ. ಸಾಲ-ಸೋಲ ಮಾಡಿ ಇತ್ತೀಚೆಗೆ ನಾಟಿ ಮಾಡಿದ್ದ ಭತ್ತ ಸಂಪೂರ್ಣ ಮುಳುಗಡೆಯಾಗಿರುವುದು ರೈತರನ್ನು ಕಂಗಾಲು ಮಾಡಿದೆ.