ತಮಿಳುನಾಡಿನ ಪೋತಿಸ್ ವಿರುದ್ಧ ಋಷಿಕುಮಾರ ಸ್ವಾಮಿ ತಿರುಗಿಬಿದ್ದಿದೇಕೆ?
Recommended Video
ಮೈಸೂರು, ಮಾರ್ಚ್ 6 : ಋಷಿಕುಮಾರ ಸ್ವಾಮೀಜಿ ಎಂದರೆ ಥಟ್ಟನೆ ನೆನಪಾಗುವುದು ಅವರ ನೇರ ನುಡಿ, ಖಡಕ್ ಮಾತುಗಾರಿಕೆ. ಈ ಕಾಳಿ ಸ್ವಾಮೀಜಿ ಸದ್ಯ ತಮಿಳುನಾಡಿನ ಸಂಸ್ಥೆಯೊಂದರ ವಿರುದ್ಧ ತಿರುಗಿಬಿದ್ದು, ಇದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹೌದು, ನಿತ್ಯವೂ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ಜಾಹೀರಾತಿನ ವಿಚಾರವಾಗಿ ಪೋತಿಸ್ ಸಂಸ್ಥೆಯ ವಿರುದ್ಧ ಋಷಿಕುಮಾರ ಸ್ವಾಮೀಜಿ ಸದ್ಯಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಆ ಜಾಹೀರಾತಿನಲ್ಲಿ ಏನಿದೆ? ಕೋರ್ಟ್ ಮೆಟ್ಟಿಲೇರಿದ್ದೇಕೆ? ಈ ಪ್ರಶ್ನೆಗಳಿಗೆ ಖುದ್ದು ಋಷಿಕುಮಾರ ಶ್ರೀಗಳು ಉತ್ತರಿಸಿದ್ದಾರೆ.
ಬಿಬಿಎಂಪಿ ಬಜೆಟ್ ಪುಸ್ತಕದಲ್ಲಿ ಕೆಂಪೇಗೌಡರಿಗೆ ಅಪಮಾನ
ನಾಡ ಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ನಾಲ್ಕೂ ದಿಕ್ಕಿಗೆ ಗಡಿ- ಗೋಪುರಗಳನ್ನು ಕಟ್ಟಿದರು. ಎಲ್ಲ ಕಡೆ ಕೆರೆ- ಕಟ್ಟೆಗಳನ್ನು ಕಟ್ಟಿಸಿದರು. ಆದರೆ ಒಂದೇ ಒಂದು ಕೊರತೆ ಎಂದರೆ ಅವರ ಪತ್ನಿಗೆ ಒಳ್ಳೆಯ ಸೀರೆ ಸಿಗುವ ಒಂದು ಮಳಿಗೆಯನ್ನು ಮಾತ್ರ ಕಟ್ಟಿಸಲಾಗಲಿಲ್ಲ. ಕೊನೆಗೆ ತಮಿಳು ನಾಡು ಮೂಲದ ಪೋತಿಸ್ ನವರು ಒಂದು ಮಳಿಗೆಯನ್ನು ಕಟ್ಟಿಸಿದರು. ಆಗ ಕೆಂಪೇಗೌಡರ ಪತ್ನಿ ಹಾಗೂ ಅವರ ಆಸ್ಥಾನದವರು ಸಂತೋಷಗೊಂಡರು.
ಕೆಂಪೇಗೌಡರ ಹೆಸರೇ ಏಕೆ ಬೇಕಿತ್ತು?
ಆ ಜಾಹೀರಾತಿನಲ್ಲಿ ಕೇವಲ ಯಾರೋ ಒಬ್ಬ ರಾಜನ ಆಸ್ಥಾನವನ್ನು ತೋರಿಸಬಹುದಾಗಿತ್ತು. ಆದರೆ ಕೆಂಪೇಗೌಡರ ಹೆಸರು ಬಳಸಿಕೊಳ್ಳುವ ಮೂಲಕ ಬೆಂಗಳೂರಿನೊಂದಿಗೆ ನಮ್ಮದು ಐತಿಹಾಸಿಕ ಸಂಬಂಧ ಎನ್ನುವುದನ್ನು ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಪೋತಿಸ್ ನವರು ಮಾಡಿದ್ದಾರೆ ಎಂಬುದು ಸ್ವಾಮೀಜಿ ವಾದ.
ಗುರಾಣಿಯಾಗಿ ಪುನೀತ್ ರಾಜಕುಮಾರ್ ಬಳಕೆ
ಹಾಗೆಯೇ ಕನ್ನಡಿಗರ ವಿರೋಧ ಎದುರಾಗದಂತೆ ಪುನೀತ್ ರಾಜಕುಮಾರ್ ಅವರನ್ನು ಗುರಾಣಿಯಾಗಿ ಬಳಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಇಂತಹದ್ದೊಂದು ಸೂಕ್ಷ್ಮ ಅರ್ಥವಾಗದೆ ಹೋದದ್ದು ದುಃಖದ ಸಂಗತಿ ಎನ್ನುತ್ತಾರೆ ಶ್ರೀಗಳು. ಈ ಜಾಹೀರಾತು ದಿನಕ್ಕೆ ಐವತ್ತು ಸಾರಿ ಎಲ್ಲಾ ವಾಹಿನಿಗಳಲ್ಲೂ ಪ್ರಸಾರವಾಗುತ್ತಿದೆ.
ಇತರ ಕಂಪೆನಿಯವರೂ ದುರುಪಯೋಗ ಮಾಡಿದರೆ..
ಆ ಜಾಹೀರಾತಿನಲ್ಲಿ ನಾಡಪ್ರಭು ಕೆಂಪೇಗೌಡರಾಗಿ ಕಾಣಿಸಿಕೊಂಡಿರುವವರು ಪುನೀತ್ ರಾಜಕುಮಾರ್. ಅವರ ಬಗ್ಗೆ ಕನ್ನಡಿಗರಿಗೆ ಬಹಳ ಪ್ರೀತಿ ಇದೆ. ಪರಿಸ್ಥಿತಿ ಹೀಗೇ ಮುಂದುವರೆದು, ಮುಂದೊಂದು ದಿನ ನಮ್ಮ ಕಂಪೆನಿಯ ಪೈಪುಗಳಿಂದಲೇ ಕೆಂಪೇಗೌಡರು ಕೆರೆ ತುಂಬಿಸಿದರು, ನಮ್ಮ ಕಂಪೆನಿಯ ಸಿಮೆಂಟ್ ಬಳಸಿದ್ದರೆ ಕೆಂಪೇಗೌಡರು ಕಟ್ಟಿಸಿದ್ದ ಕಟ್ಟಡ ಇನ್ನಷ್ಟು ಬಾಳಿಕೆ ಬರುತ್ತಿತ್ತು ಎನ್ನುವಂತಹ ಜಾಹೀರಾತುಗಳು ಬಂದರೂ ಆಶ್ಚರ್ಯವಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಉಗ್ರ ಸ್ವರೂಪದ ಹೋರಾಟದ ಎಚ್ಚರಿಕೆ
ತಕ್ಷಣವೇ ಈ ದೂರನ್ನು ಪರಿಗಣಿಸಿ ಪೋತಿಸ್ ನವರು ಈ ಜಾಹೀರಾತನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಕೆಂಪೇಗೌಡರಿಗೆ ಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಅಪಚಾರ ಎಸಗುವ ಜಾಹೀರಾತುದಾರರು ಯೋಚಿಸಬೇಕು ಎನ್ನುವುದು ಋಷಿಕುಮಾರ ಸ್ವಾಮೀಜಿ ವಾದ.