KSOU ಮಾನ್ಯತೆ ಬಗ್ಗೆ ಅನುಮಾನ ಹುಟ್ಟಿಸುವ ರತ್ನಪ್ರಭಾ ಟ್ವೀಟ್
ಮೈಸೂರು, ಸೆಪ್ಟೆಂಬರ್ 12 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(KSOU)ಕ್ಕೆ ಸದ್ಯಕ್ಕೆ ಮಾನ್ಯತೆ ದೊರೆಯುವ ಸಂಭವವಿಲ್ಲ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾರವರು ಟ್ವೀಟ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕೆಎಸ್ ಓಯು ನಕಲಿ ಅಂಕಪಟ್ಟಿ ಹಗರಣ : 850 ವಿದ್ಯಾರ್ಥಿ ಸ್ಥಿತಿ ಅಧೋಗತಿ
ಹೌದು, ಈ ಸುದ್ದಿ ಲಕ್ಷಾಂತರ ಶಿಕ್ಷಣಾರ್ಥಿಗಳ ಕನಸನ್ನು ಭಗ್ನಗೊಳಿಸಿದೆ. ಕೆಲ ದಿನಗಳಲ್ಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಸಿಗಲಿದೆ. ಬಳಿಕ ತಮಗೆಲ್ಲಾ ಪದವಿ ಪ್ರಮಾಣಪತ್ರ ದೊರೆಯಲಿದೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ದೊಡ್ಡ ಆಘಾತ ಎದುರಾಗಿದೆ. ಅಷ್ಟೇ ಅಲ್ಲ ಸಾವಿರಾರು ವಿದ್ಯಾರ್ಥಿಗಳ, ಪದವೀಧರರ ಭವಿಷ್ಯ ಅತಂತ್ರವಾಗಿದೆ. ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ)ದ ನಿಯಮಾವಳಿಗಳಡಿ ಹೊರಡಿಸಲಾದ ಆದೇಶದ ಪ್ರಕಾರ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಾನ್ಯತೆ ದೊರೆಯುವ ಸಾಧ್ಯತೆ ಇಲ್ಲವಾಗಿದೆ.
VCs statement is abt recognition of the univ in future. Im refering to students who have written exams & waitig for their degree
— Ratna Prabha (@Ratnaprabha_IAS) September 11, 2017
ಈಗಾಗಲೇ ವಿವಿಧ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವವರು, ಪರೀಕ್ಷೆ ಎದುರಿಸಲು ತಯಾರಾಗಿದ್ದವರು ದಿಕ್ಕು ಕಾಣದಂತಾಗಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಾನ್ಯತೆ ಸಿಗುವುದು ಅಸಾಧ್ಯ ಎಂಬುದನ್ನು ಒತ್ತಿ ಹೇಳಿರುವ ಅವರು, ಮಾನ್ಯತೆ ಸಿಗದಿದ್ದಲ್ಲಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಯಮ ಉಲ್ಲಂಘನೆ ಕಾರಣವೊಡ್ಡಿ 2012-13ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಬರುವಂತೆ ಮುಕ್ತ ವಿವಿ ಮಾನ್ಯತೆಯನ್ನು ರದ್ದುಪಡಿಸಿ ವಿಶ್ವವಿದ್ಯಾನಿಲಯ ಅನುದಾನ ಆಯೋಗವು 2015ರ ಜೂ.16ರಂದು ಆದೇಶ ಹೊರಡಿಸಿತ್ತು. ಅಷ್ಟರಲ್ಲಾಗಲೇ ವಿವಿಧ ಕೋರ್ಸ್ ಗಳಿಗೆ ಪ್ರವೇಶ ಪಡೆದಿದ್ದ ಸಾವಿರಾರು ವಿದ್ಯಾರ್ಥಿಗಳ ವ್ಯಾಸಂಗ ಅವಧಿ ಇತ್ತೀಚೆಗಷ್ಟೇ ಮುಗಿದಿದೆ.
ಮುಕ್ತ ವಿವಿ ವಿದ್ಯಾರ್ಥಿಗಳ ಮೇಲೆ ಯುಜಿಸಿ ಚಪ್ಪಡಿಕಲ್ಲು
ಕೆಲವರು ಕೊನೆಯ ಸೆಮಿಸ್ಟರ್ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದರು. 2015- 16 ಮತ್ತು 2016-17ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಿರಲಿಲ್ಲ. ಸದ್ಯ 95 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಯುಜಿಸಿ ಕಾರ್ಯದರ್ಶಿ ರಾಕೇಶ್ ಶುಕ್ಲಾ ಅವರು ಹೊಸ ನಿಯಮಾವಳಿ ಜಾರಿಗೆ 6 ತಿಂಗಳ ಹಿಂದೆಯೇ ಆದೇಶ ಹೊರಡಿಸಿದ್ದರು. ವಿಶ್ವವಿದ್ಯಾಲಯಗಳ ಹೊಸ ನಿಯಮಾವಳಿಯಂತೆ ಶೈಕ್ಷಣಿಕ ವಾತಾವರಣ, ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾ ಧ್ಯಾಪಕರ ನೇಮಕ, ಪ್ರವೇಶಾತಿ ಕೋರ್ಸ್ ಗೆ ನಿಯಮಿತ ಸಿಬ್ಬಂದಿ ನೇಮಕ, ಸಮರ್ಪಕ ಪಠ್ಯಕ್ರಮ ರೂಪಿಸದೇ ಇದ್ದಲ್ಲಿ ಮಾನ್ಯತೆ ಇಲ್ಲ ಎಂದು ಹೇಳಿದ್ದರು.
ಮುಕ್ತ ವಿವಿಗೆ ಮಾನ್ಯತೆ ರದ್ದಾಗಿರುವುದರಲ್ಲಿ ಸರ್ಕಾರದ ತಪ್ಪಿಲ್ಲ. ಹಿಂದಿನ ಉಪಕುಲಪತಿಗಳು ಮಾಡಿದ ತಪ್ಪಿನಿಂದಾಗಿ ಈ ಸ್ಥಿತಿ ಬಂದಿದೆ ಎಂದು ನೇರವಾಗಿ ಆರೋಪಿಸಲಾಗಿದೆ. ಈಗಾಗಲೇ ಉನ್ನತ ಶಿಕ್ಷಣ ಇಲಾಖೆಯಿಂದ ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ಯುಜಿಸಿ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ. ಸರ್ಕಾರದ ಕಡೆಯಿಂದ ಮಾನ್ಯತೆ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಹ ತಿಳಿಸಿದ್ದರು.
ಒಟ್ಟಾರೆ ಯುಜಿಸಿ ಮಾನ್ಯತೆ ಲಭಿಸದಿದ್ದರೆ ಪದವಿ ಪಡೆದರೂ ಸಿಂಧುವಾಗುವುದಿಲ್ಲ ಎಂಬ ಆತಂಕ ವಿದ್ಯಾರ್ಥಿಗಳಲ್ಲಿದೆ. 55 ವಿದ್ಯಾರ್ಥಿಗಳು ಸಂಶೋಧನೆಗೆ ನೋಂದಾಯಿಸಿ ಎರಡು ವರುಷಗಳೇ ಕಳೆದಿವೆ. ಅಲ್ಲದೇ, ಹೊರ ರಾಜ್ಯದ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಮತಿಗಾಗಿ ಕಾದು ಕುಳಿತಿದ್ದಾರೆ. ಇದಕ್ಕೆಲ್ಲಾ ಪರಿಹಾರ ಹುಡುಕುವ ಬದಲಿಗೆ ಸಮಸ್ಯೆಗಳ ಸರಮಾಲೆ ಹೆಚ್ಚುತ್ತಿರುವುದು ಬೇಸರದ ಸಂಗತಿ.