ಮೈಸೂರು: ಪರಿಸರ ಸ್ನೇಹಿ ದೀಪಾವಳಿ ಆಚರಣೆಗಾಗಿ ರಥಯಾತ್ರೆ
ಮೈಸೂರು, ಅಕ್ಟೋಬರ್ 12 : ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಪಟಾಕಿಯಿಂದಾಗುವ ಅನಾಹುತ ಮತ್ತು ಪರಿಸರ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿಯೇ 'ಪರಿಸರದ ಪಥದೆಡೆಗೆ ದೀಪಾವಳಿ' ರಥಕ್ಕೆ ಚಾಲನೆ ನೀಡಿದ್ದು, ಈ ರಥ ಅ.16ರವರೆಗೆ ವಿವಿಧೆಡೆ ಸಂಚರಿಸಲಿದೆ.
ಕರ್ನಾಟಕದಲ್ಲೂ ಪಟಾಕಿ ನಿಷೇಧಿಸಬೇಕಾ? ಒನ್ ಇಂಡಿಯಾ ಓದುಗರು ಏನಂತಾರೆ?
ದೀಪಾವಳಿ ಹಬ್ಬ ಬರುತ್ತಿರುವ ಹಿನ್ನಲೆಯಲ್ಲಿ ಮೈಸೂರು ಸೈನ್ಸ್ ಫೌಂಡೇಷನ್ ಹಾಗೂ ಬನ್ನೂರು ರೋಟರಿ ಸಂಸ್ಥೆಯ ವತಿಯಿಂದ ಈ ರಥಯಾತ್ರೆ ನಡೆಯುತ್ತಿದ್ದು, ಇಂದು ಬನ್ನೂರಿನ ರೋಟರಿ ಶಾಲೆಯಲ್ಲಿ ಪುರಸಭೆಯ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್ ಅವರು ರಥಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ ಅವರು, "ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಆದರೆ, ಅವು ಯಶಸ್ವಿಗೊಳ್ಳ ಬೇಕಾದರೆ ಮೊದಲಿಗೆ ಮಕ್ಕಳನ್ನು ತಲುಪಬೇಕು. ಆ ನಿಟ್ಟಿನಲ್ಲಿ ಈ ರಥವು ಅತ್ಯಂತ ಪರಿಣಾಮಕಾರಿಯಾಗಲಿದೆ" ಎಂದರು..
ರೋಟರಿ ಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್.ಯೋಗೇಂದ್ರ ಮಾತನಾಡಿ, ಜಾಗೃತಿ ಕಾರ್ಯಕ್ರಮ ಮಕ್ಕಳಲ್ಲಿ ಹೆಚ್ಚಿನ ಪರಿಣಾಮ ಬೀರುತ್ತವೆ. ಸುಪ್ರೀಂಕೋರ್ಟ್ ದೆಹಲಿಯಲ್ಲಿ ಪಟಾಕಿಯನ್ನು ನಿಷೇಧಿಸಿದೆ. ಅದರಂತೆ ಎಲ್ಲಾ ಸರ್ಕಾರಗಳು ಪಟಾಕಿ ನಿಷೇಧಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪಟಾಕಿ ಹೊಡೆಯುವುದಿಲ್ಲವೆಂದು ಪ್ರತಿಜ್ಞೆ ಸ್ವೀಕರಿಸಿದರು. ಮೈಸೂರ್ ಸೈನ್ಸ್ ಫೌಂಡೇಷನ್ ಕಾರ್ಯದರ್ಶಿ ಜಿ.ಬಿ.ಸಂತೋಷ್ಕುಮಾರ್ ಅವರು ಮಕ್ಕಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಪರಿಸರದ ಪಥದೆಡೆಗೆ ದೀಪಾವಳಿ ರಥವು ಬನ್ನೂರು ಮತ್ತು ತಿ.ನರಸಿಪುರದ ಸುತ್ತಮುತ್ತಲಿನ ಎಲ್ಲ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಿದೆ.
ಅಲ್ಲದೆ, ಇದೇ ವೇಳೆ ಪಟಾಕಿ ಸಿಡಿಸುವುದರಿಂದ ಆಗುವ ಅನಾಹುತಗಳ ಕುರಿತು ಮಾಹಿತಿ ಹಾಗೂ ದೀಪಾವಳಿಯನ್ನು ಹೇಗೆ ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂಬುದರ ಬಗ್ಗೆ ಕರಪತ್ರವನ್ನು ಹಂಚಲಾಗುತ್ತದೆ.
ಈ ರಥದಲ್ಲಿ ಧ್ವನಿವರ್ಧಕ ಅಳವಡಿಸಿದ್ದು ಅದರಲ್ಲಿ ದೀಪಾವಳಿಯ ಹಿನ್ನಲೆ ಮತ್ತು ಆಚರಣೆ ಕುರಿತು ಮುದ್ರಿಸಿದ ಧ್ವನಿಯನ್ನು ಬಿತ್ತರಿಸಲಾಗುತ್ತದೆ. ಅಲ್ಲದೆ ವಿವಿಧ ಶಾಲೆ ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದೆ.