ರಥಸಪ್ತಮಿಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡ ಅರಮನೆ.!
ಮೈಸೂರು, ಫೆಬ್ರವರಿ 3 : ಮೈಸೂರು ಅರಮನೆ ಆವರಣದಲ್ಲಿ ರಥ ಸಪ್ತಮಿ ಪ್ರಯುಕ್ತ ಇಂದು(ಫೆ.3) ವಿವಿಧ ದೇವಾಲಯಗಳ ಉತ್ಸವ ಮೂರ್ತಿಗಳನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ವಿಶೇಷ ಪೂಜಾಕೈಂಕರ್ಯಗಳು ಜರುಗಿದವು.
ಇಂದು ಬೆಳಗಿನ ಜಾವ 6 ಗಂಟೆಯಿಂದಲೇ ಅರಮನೆ ಆವರಣದಲ್ಲಿ ಶ್ರೀ ಭುವನೇಶ್ವರಿ, ಶ್ರೀ ತ್ರಿನೇಶ್ವರ ಸ್ವಾಮಿ ಶ್ರೀ ಲಕ್ಷ್ಮಿರಮಣ ಸ್ವಾಮಿ, ಶ್ರೀ ಮಹಾಲಕ್ಷ್ಮಿ ದೇವಿ, ಶ್ರೀ ಪ್ರಸನ್ನ ಕೃಷ್ಣ, ಶ್ರೀ ವೇದವರಹಸ್ವಾಮಿ, ಶ್ರೀ ಖಿಲ್ಲೆ ವೆಂಕಟರಮಣಸ್ವಾಮಿ, ಹಾಗೂ ಶ್ರೀ ಗಾಯಿತ್ರಿ ಅಮ್ಮನವರ ಉತ್ಸವ ಮೂರ್ತಿಗಳನ್ನು ಸಾರ್ವಜನಿಕರ ದರ್ಶನಕ್ಕೆ ಕರೆತರಲಾಗಿತ್ತು. ಸೂರ್ಯ ಜನ್ಮದಿನ ಹಾಗೂ ಸೂರ್ಯ ಸಪ್ತಾಶ್ವದ ರಥ ಏರುವ ದಿನವಾದ ಇಂದು ಎಲ್ಲ ದೇವರಿಗೂ ವಿಶೇಷ ಪೂಜೆಗಳು ನಡೆದವು.[ರಥಸಪ್ತಮಿ : ಸಪ್ತಕುದುರೆಗಳ ರಥವೇರುವ ಸೂರ್ಯನಿಗೆ ನಮಸ್ಕಾರ]
ಸಪ್ತಮಿ ತಿಥಿಯ ಅಧಿದೇವತೆ ಸೂರ್ಯ, ಈ ದಿನ ಸಪ್ತಾಶ್ವದ ರಥವೇರಿ ಉತ್ತರ ದಿಕ್ಕಿಗೆ ಚಲಿಸುತ್ತಾನೆ. ಉತ್ತರಾಯಣದಲ್ಲಿ ಸೂರ್ಯ ತನ್ನ ಪಥ ಬದಲಾಯಿಸುವುದರಿಂದ ಬಿಸಿಲಿನ ಪ್ರಕರತೆ ಹೆಚ್ಚಾಗುತ್ತದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿದೆ. ರೋಗ ನಿವಾರಣ, ದೇಹದಾಢ್ಯ ಹಾಗೂ ಆರೋಗ್ಯ ಬಯಸುವವರು ಸೂರ್ಯ ಆರಾಧನೆಯನ್ನು ಮಾಡಿದರೆ ಗುಣಮುಕ್ತರಾಗುತ್ತಾರೆ ಎಂದು ಅರಮನೆ ಪುರೋಹಿತ ರಾಘವನ್ ತಿಳಿಸಿದರು.
ರಾಜ ಮಹಾರಾಜರುಗಳು ಈ ರಥಸಪ್ತಮಿ ಶುಭದಿನದಂದು ಅರಮನೆ ಆವರಣದಲ್ಲಿರುವ 8 ದೇವಾಲಯಗಳ ಉತ್ಸವ ಮೂರ್ತಿಗಳನ್ನು ಅರಮನೆ ಆವರಣದಲ್ಲಿ ಇರಿಸಿ ವಿಶೇಷ ಪೂಜೆ ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡುತ್ತಿದ್ದರು. ಆ ಸಂಪ್ರದಾಯ ಇಂದಿಗೂ ಸಹ ಮುಂದುವರಿದಿದೆ ಎಂದು ವ್ಯವಸ್ಥಾಪಕ ಗೋವಿಂದರಾಜು ತಿಳಿಸಿದರು.