ಮಂಡ್ಯದಲ್ಲಿ ರಮ್ಯಾ, ಎಂಎಲ್ಸಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರಾ?
ರಮ್ಯಾ ಮಂಡ್ಯದಲ್ಲಿ ಮತ್ತೆ ತನ್ನ ಛಾಪು ಮೂಡಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ವಿಧಾನಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕೆ ಹೈಕಮಾಂಡ್ ನ ಅಭಯವೂ ಇದೆ ಎಂಬುದು ಸದ್ಯದ ಮಾಹಿತಿ.
ಮೈಸೂರು, ನವೆಂಬರ್ 12: ಮಾಜಿ ಸಂಸದೆ, ನಟಿ ರಮ್ಯಾ ಕಾವೇರಿ ವಿವಾದದ ಬಿಸಿ ತಣ್ಣಗಾದ ನಂತರ ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದು ಜನರ ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಶುಕ್ರವಾರ ಮಂಡ್ಯದ ವಿ.ವಿ. ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯ ಕಚೇರಿಗೆ ಭೇಟಿ ನೀಡಿ ಹಣ ಬದಲಾಯಿಸಿಕೊಳ್ಳಲು ನೂಕುನುಗ್ಗಲಿನಲ್ಲಿದ್ದ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದರು.
ಜನರ ಹಣದ ಸಮಸ್ಯೆ ಬಗ್ಗೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಜನರ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿ ಸುದ್ದಿಯಾಗಿದ್ದಾರೆ. ಅವರು ಇದ್ದಕ್ಕಿದ್ದಂತೆಯೇ ಮಂಡ್ಯದಲ್ಲಿ ಕಾಣಿಸಿಕೊಳ್ಳುವುದಕ್ಕೂ ಕಾರಣವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸ್ಥಾನವನ್ನು ಕಿತ್ತುಕೊಂಡ ಬಳಿಕ ಮಂಡ್ಯದಲ್ಲಿ ಭೂತಕನ್ನಡಿಯಿಟ್ಟು ಹುಡುಕಾಡಿದರೂ ಅಂಬರೀಶ್ ಅವರು ಸಿಗುತ್ತಿಲ್ಲ.[ಕದ್ದುಮುಚ್ಚಿ ಗೃಹಪ್ರವೇಶ ಮಾಡಿದ ಮಾಜಿ ಸಂಸದೆ ರಮ್ಯಾ]
ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಾರಣ ಜನ ಅವರನ್ನು ಇನ್ನು ಕೆಲವೇ ದಿನಗಳಲ್ಲಿ ಮರೆತು ಬಿಡುವುದರಲ್ಲಿ ಸಂಶಯವಿಲ್ಲ. ಇವೆಲ್ಲವನ್ನೂ ಗಮನಿಸುತ್ತಿರುವ ರಮ್ಯಾ ಮಂಡ್ಯದಲ್ಲಿ ಮತ್ತೆ ತನ್ನ ಛಾಪು ಮೂಡಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ವಿಧಾನಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕೆ ಹೈಕಮಾಂಡ್ ನ ಅಭಯವೂ ಇದೆ ಎಂಬುದು ಸದ್ಯದ ಮಾಹಿತಿ.
ಮಂಡ್ಯದಲ್ಲಿ ಶುಕ್ರವಾರ ಬ್ಯಾಂಕ್ ನಲ್ಲಿ ಮುಗಿಬಿದ್ದು ಹಣ ವಿನಿಮಯ ಮಾಡಿಕೊಳ್ಳುತ್ತಿದ್ದ ಗ್ರಾಹಕರ ನಡುವೆ ಕಾಣಿಸಿಕೊಂಡು, ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿ, ಒಂದಷ್ಟು ವ್ಯವಸ್ಥೆ ಮಾಡಿಕೊಟ್ಟು ಬೀಗಿರುವುದು ಇತರೆ ನಾಯಕರಿಗೆ ಅಚ್ಚರಿ ತಂದಿದೆ. ಮಂಡ್ಯದಲ್ಲಿ ಕಾಣಿಸಿಕೊಳ್ಳುವ ಮುನ್ನ ಗುರುವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಾರದಾದೇವಿನಗರದ ಮನೆಯಲ್ಲಿ ಭೇಟಿ ಮಾಡಿ, ಕೆಲ ಸಮಯ ಮಾತುಕತೆ ನಡೆಸಿದ್ದರು ಎಂಬ ಸುದ್ದಿಯಿದೆ.[ಅಧ್ಯಯನ ತಂಡದ ಜತೆ ರಮ್ಯಾ, ಅಂಬಿಯಣ್ಣ ಎಲ್ಲಿ?]
ರಾತ್ರಿ ಸುಮಾರು 11 ಗಂಟೆ ವೇಳೆಗೆ ಸಿಎಂ ಭೇಟಿ ಮಾಡಿರುವ ರಮ್ಯಾ ಒಂದಷ್ಟು ಮಾತುಕತೆ ನಡೆಸಿದ್ದಾರೆ. ಮಂಡ್ಯದಲ್ಲಿ ಅಂಬರೀಶ್ ತಟಸ್ಥವಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ರಮ್ಯಾ ಅವರನ್ನು ಫೋಕಸ್ ಮಾಡುವ ಮೂಲಕ ವಿಧಾನಪರಿಷತ್ ಸದಸ್ಯತ್ವ ನೀಡುವ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತೀರ್ಮಾನಿಸಿದ್ದು, ಆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂತೂ ರಮ್ಯಾ ಸಾರ್ವಜನಿಕವಾಗಿ ಕಾಣಿಸಿಕೊಂಡು ಎಲ್ಲರಿಗೆ ಅಚ್ಚರಿ ಹುಟ್ಟಿಸುತ್ತಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಕಾಲವೇ ಹೇಳಬೇಕಾಗಿದೆ.