ಮೊದಲ ಮಳೆಗೆ ಬಯಲಾದ ತಿ.ನರಸೀಪುರ ಮಿನಿ ವಿಧಾನ ಸೌಧದ ಕರ್ಮಕಾಂಡ
ತಿ.ನರಸೀಪುರ, ಅಕ್ಟೋಬರ್ 1: ಹೊರ ನೋಟ ಬಲು ಸುಂದರ; ಒಳ ಹೊಕ್ಕರೆ ಕಳಪೆ ಕಾಮಗಾರಿಯ ಕರ್ಮಕಾಂಡದ ದರ್ಶನ, ಅವೈಜ್ಞಾನಿಕ ಕಟ್ಟಡ ನಿರ್ಮಾಣ ಹೀಗೆ ಹಲವು ಅವ್ಯವಸ್ಥೆಗಳ ಚಿತ್ರಣ ಒಂದೊಂದಾಗಿ ಬಿಚ್ಚಿಕೊಳ್ಳುತ್ತದೆ.
ಇದು ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ ಪ್ರತಿನಿಧಿಸುವ ತಿ.ನರಸೀಪುರದಲ್ಲಿ ನಿರ್ಮಾಣವಾಗಿರುವ ನೂತನ ಮಿನಿ ವಿಧಾನಸೌಧ ಕಟ್ಟಡದ ಕರ್ಮಕಾಂಡ.
ಪಟ್ಟಣದಲ್ಲಿ ನೂತನವಾಗಿ ನಿರ್ಮಿತವಾಗಿ ಇತ್ತೀಚೆಗೆ ಉದ್ಘಾಟನೆಗೊಂಡ ಮಿನಿ ವಿಧಾನ ಸೌಧ ಕಟ್ಟಡ ಅಧಿಕಾರಿಗಳ ನಿರ್ಲಕ್ಷ್ಯತನ, ಭ್ರಷ್ಟಾಚಾರ ಹಾಗೂ ಗುತ್ತಿಗೆದಾರನ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ಲೋಕೋಪಯೋಗಿ ಸಚಿವರ ಕ್ಷೇತ್ರದಲ್ಲೇ ಹೀಗೆ!
ಇಂತಹ ಅವ್ಯವಸ್ಥೆ, ಅಕ್ರಮ ಲೋಕೋಪಯೋಗಿ ಸಚಿವರ ಕ್ಷೇತ್ರದಲ್ಲೇ ನಿರ್ಮಾಣವಾದರೆ ಉಳಿದ ತಾಲೂಕುಗಳಲ್ಲಿ ಇನ್ನೆಷ್ಟರ ಮಟ್ಟಿಗೆ ಕಾಮಗಾರಿಗಳು ನಡೆದಿರಬಹುದು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಮೊದಲ ಮಳೆಗೇ ಬಯಲಾಯ್ತು ಕಳಪೆ ಕಾಮಗಾರಿ
ಮಳೆ ಬಂದರೆ ಕಚೇರಿ ಸುತ್ತ ನೀರು ಶೇಖರಣೆಗೊಳ್ಳುತ್ತದೆ. ನೆಲ ಅಂತಸ್ತಿನಲ್ಲಿ ಎರಡು ಅಡಿಯಷ್ಟು ಮಳೆಯ ನೀರು ಆವೃತ್ತಿಯಾಗುತ್ತದೆ. ಸಿಬ್ಬಂದಿ ಹಾಗೂ ಸಾರ್ವಜನಿಕರು ಕಚೆೀರಿ ಪ್ರವೇಶಿಸಲು ದುಸ್ಸಾಹಸ ಪಡಬೇಕು.
ಅವ್ಯವಸ್ಥೆ ಒಂದಾ ಎರಡಾ..
ನೆಲಕ್ಕೆ ಅಳವಡಿಸಿರುವ ನೆಲಹಾಸು ಮೂರು ತಿಂಗಳಲ್ಲೇ ಕಿತ್ತು ಬಂದಿದೆ. ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಸುಸಜ್ಜಿತ ಒಳ ಚರಂಡಿ ವ್ಯವಸ್ಥೆಯಿಲ್ಲ. ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ತೆರಳಲು ನಿರ್ಮಿಸಿರುವ ಮೆಟ್ಟಿಲುಗಳು ಮಳೆಯ ನೀರಿನಿಂದ ಪಾಚಿಕಟ್ಟಿ ಜಾರುತ್ತಿವೆ. ಇನ್ನು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಶೌಚಾಲಯವಿದ್ದರೂ ಅಧಿಕಾರಿಗಳು ಬೀಗ ಜಡಿದು ಸಾರ್ವಜನಿಕರ ಅನುಕೂಲಕ್ಕೆ ದೊರೆಯದಂತೆ ಮಾಡಿದ್ದಾರೆ.
ಕ್ರಮ ಯಾವಾಗ?
ಇಂತಹ ಅವ್ಯವಸ್ಥೆ ಹಾಗೂ ಅಕ್ರಮಗಳಲ್ಲಿ ಶಾಮೀಲಾಗಿರುವ ಅಧಿಕಾರಿಗಳು ಹಾಗೂ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಬೇಕು. ಅಲ್ಲದೆ ಇಂತಹ ಗುತ್ತಿಗೆದಾರರ ಪರವಾನಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಆಗಲಾದರೂ ಮುಂದಿನ ದಿನಗಳಲ್ಲಿ ಸುಧಾರಣೆಯನ್ನು ಕಾಣಬಹುದೇನೋ. ಆದರೆ ಕ್ರಮ ಜರುಗಿಸುತ್ತಾರಾ ಎಂಬುದೇ ಪ್ರಶ್ನೆಯಾಗಿದೆ.