ಕೆಎಸ್ಓಯು ನಲ್ಲಿ ಎಂಬಿಎ, ಬಿಎಡ್ ಕೋರ್ಸ್ ಗೆ ಶೀಘ್ರ ಅರ್ಜಿ ಆಹ್ವಾನ
ಮೈಸೂರು, ನವೆಂಬರ್ 23:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕರಾಮುವಿ) ಅತ್ಯಲ್ಪ ಅವಧಿಯಲ್ಲೇ ಸಾಧನೆ ಮಾಡಿದ್ದು, ಸೀಮಿತ ಅವಧಿಯಲ್ಲಿ 11 ಸಾವಿರಕ್ಕೂ ಹೆಚ್ಚು ಮಂದಿ ವಿವಿಧ ಕೋರ್ಸ್ ಗಳಿಗೆ ಪ್ರವೇಶ ಪಡೆದಿದ್ದಾರೆ.
ಮುಕ್ತ ವಿವಿಗೆ ಮಾನ್ಯತೆ ದೊರೆತ ಕೆಲವೇ ದಿನಗಳಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿತ್ತು. ಕಾಲಾವಕಾಶ ಕಡಿಮೆ ಇದ್ದರೂ ಇದೀಗ ಉತ್ತಮ ಪತಿಕ್ರಿಯೆ ದೊರೆತಿದ್ದು, ಯುಜಿಸಿ ನಿಯಮಾನುಸಾರ ಪ್ರವೇಶಾತಿ ಆರಂಭವಾಗಿದೆ. 2018-19ನೇ ಶೈಕ್ಷಣಿಕ ಸಾಲಿನಿಂದ ಯುಜಿಸಿ ಮಾನ್ಯತೆ ನೀಡಿದ ಹಿನ್ನಲೆಯಲ್ಲಿ ಜನವರಿ ಮತ್ತು ಜುಲೈ ಎರಡು ಅವಧಿಯಲ್ಲಿ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ. ಮೂರು ವರ್ಷ ಮಾನ್ಯತೆ ರದ್ದಾದ ಕಾರಣ ತೊಡಕಾಗಿತ್ತು. ಇದೀಗ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತಿದ್ದು, ವಿದ್ಯಾರ್ಥಿಗಳು ಆತಂಕ ಪಡಬೇಕಾಗಿಲ್ಲ.
ಕೆಎಸ್ಓಯು ದೂರ ಶಿಕ್ಷಣ ಕೋರ್ಸ್, ಹೆಚ್ಚು ಅರ್ಜಿ ಬಂದಿರುವುದು ಎಂ.ಕಾಂಗೆ!
ಎಂಎ ಉರ್ದು ಮತ್ತು ಎಂಎಸ್ಸಿ ಜೈವಿಕ ತಂತ್ರಜ್ಞಾನ, ಜೀವ ರಸಾಯನ ಶಾಸ್ತ್ರ , ಮಾಹಿತಿ ವಿಜ್ಞಾನ, ಎಂಎ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೋರ್ಸ್ ಗಳಿಗೆ 20ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿಂದ ಪ್ರವೇಶಾತಿ ಬಂದಿದೆ. ನಿಯಮಾನುಸಾರ ಯಾವುದೇ ಕೋರ್ಸ್ ಆರಂಭಿಸಬೇಕಾದರೆ 20ಕ್ಕಿಂತ ಹೆಚ್ಚಿನ ದಾಖಲಾತಿ ಅಗತ್ಯವಿರುತ್ತದೆ.
ಈ ಹಿನ್ನೆಲೆಯಲ್ಲಿ ಆ ಕೋರ್ಸ್ ಗಳನ್ನು ಆರಂಭಿಸಿಲ್ಲ. ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ನೋಡಿಕೊಂಡು ಆರಂಭಿಸಲಾಗುತ್ತದೆ ಎನ್ನುತ್ತಾರೆ ಮುಕ್ತ ವಿವಿ ಕುಲಪತಿ ಶಿವಲಿಂಗಯ್ಯ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2018-19ನೇ ಶೈಕ್ಷಣಿಕ ಸಾಲಿನಲ್ಲಿ ಬಿ.ಇಡಿ, ಎಂಬಿಎ ಕೋರ್ಸ್ ಗಳಿಗೆ ಜನವರಿಯಿಂದ ಪ್ರವೇಶ ಪ್ರಕ್ರಿಯೆ ಆರಂಭಿಸಲಿದ್ದು, ಜನವರಿ 30ಕ್ಕೆ ಮುಕ್ತಾಯವಾಗಲಿದೆ.
ಆನ್ ಲೈನ್ ಪ್ರಕ್ರಿಯೆಗೆ ಚಾಲನೆ
ಇನ್ನು ಮುಕ್ತ ವಿವಿಯಲ್ಲಿ ಆನ್ ಲೈನ್ ಮೂಲಕ ಪ್ರವೇಶಾತಿಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ತಮ್ಮ ವೆಬ್ ಸೈಟ್ ನಲ್ಲಿ ಎಸ್ ಬಿಐ ಕಲೆಕ್ಟ್ ಸಹಾಯದಿಂದ ರಜೆ ದಿನದಲ್ಲಿಯೂ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ. ಎಲ್ಲವೂ ಪಾರದರ್ಶಕವಾಗಿರಬೇಕೆಂಬ ಕಾರಣದಿಂದ ಆನ್ ಲೈನ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ವಿದ್ಯಾರ್ಥಿಗಳು ತಾವಿರುವ ಸ್ಥಳದಲ್ಲಿಯೇ ತಮಗೆ ಇಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಂಡು ದಾಖಲಾಗಬಹುದು. ಆನ್ ಲೈನ್ ಮೂಲಕವೇ ಶುಲ್ಕ ಪಾವತಿಸಿ ಅದೇ ದಿನ ಪ್ರವೇಶ ಪತ್ರವನ್ನು ಪಡೆದುಕೊಳ್ಳಬಹುದಾಗಿದೆ.
ಆನ್ ಲೈನ್ ಮೂಲಕ ಪತ್ರ ವ್ಯವಹಾರ
ಇದಾದ ಬಳಿಕ ವಿದ್ಯಾರ್ಥಿಗಳಿಗೆ ಬೃಹತ್ ಪ್ರಮಾಣದ ಬಲ್ಕ್ ಮೆಸೇಜ್ ಪದ್ಧತಿಯ ಮೂಲಕ ಮಾಹಿತಿ ನೀಡಲಾಗುವುದು. ಅಭ್ಯರ್ಥಿಗಳ ಪಟ್ಟಿ , ಆಯ್ಕೆ , ಕಾಯ್ದಿಟ್ಟ ಪಟ್ಟಿ ಮುಂತಾದ ವಿಷಯವನ್ನು ವಿವಿ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಇದನ್ನು ನಿರಂತರವಾಗಿ ವೀಕ್ಷಿಸಬಹುದು.
ಇದರಲ್ಲಿ ವಿವಿ ಎಲ್ಲಾ ಅಧಿಕಾರಿಗಳು, ವಿಭಾಗಗಳ ಮುಖ್ಯಸ್ಥರು ಪ್ರತಿಯೊಬ್ಬ ಬೋಧಕರು - ಬೋಧಕೇತರರ ಇಮೇಲ್ ವಿಳಾಸ ನೀಡಿದ್ದು, ಎಲ್ಲಾ ಪತ್ರ ವ್ಯವಹಾರಗಳನ್ನು ಆನ್ ಲೈನ್ ಮೂಲಕ ಮಾಡಲಾಗುವುದು.
ಕೆಎಸ್ಓಯು ಹಾಸನ ಕೇಂದ್ರದಲ್ಲಿ ಅ.21ರ ತನಕ ಪ್ರವೇಶಕ್ಕೆ ಅವಕಾಶ
ಡಿ.1ರಂದು ಉದ್ಘಾಟನೆ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನವನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಡಿ.1ರಂದು ಬೆಳಗ್ಗೆ 11ಕ್ಕೆ ಉದ್ಘಾಟಿಸುತ್ತಾರೆ. ಮುಂದಿನ ಘಟಿಕೋತ್ಸವವೂ ಇದೇ ಸಭಾಂಗಣದಲ್ಲಿ ನಡೆಯಲಿದೆ.
ಹವಾನಿಯಂತ್ರಿತ ವ್ಯವಸ್ಥೆ
"ಘಟಿಕೋತ್ಸವ ಭವನವನ್ನು ನಿರ್ಮಿಸಿ ಕೆಲ ವರ್ಷಗಳು ಕಳೆದಿವೆ. ಆದರೆ, ವಿ.ವಿ.ಗೆ ಯುಜಿಸಿ ಮಾನ್ಯತೆ ರದ್ದುಪಡಿಸಿದ್ದ ಸಂದರ್ಭದಲ್ಲಿ ಉದ್ಘಾಟಿಸುವುದು ಸರಿಯಲ್ಲ ಎಂಬ ಕಾರಣದಿಂದ ಸುಮ್ಮನಿದ್ದೆವು. ಈಗ ವಿ.ವಿ.ಗೆ ಮಾನ್ಯತೆ ಸಿಕ್ಕಿದೆ. ಭವನದಲ್ಲಿ ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ದವು. ಅವುಗಳನ್ನು ಪೂರ್ಣಗೊಳಿಸಲಾಗಿದೆ. ಒಟ್ಟು 2,000 ಆಸನಗಳಿದ್ದು, ಬಾಲ್ಕನಿ ಇದೆ. ಹವಾನಿಯಂತ್ರಿತ ವ್ಯವಸ್ಥೆ, ಗುಣಮಟ್ಟದ ಧ್ವನಿವರ್ಧಕ ವ್ಯವಸ್ಥೆ ಕಲ್ಪಿಸಲಾಗಿದೆ.
ಇಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಶೈಕ್ಷಣಿಕ ಹಾಗೂ ಶೈಕ್ಷಣೇತರ ಕಾರ್ಯಕ್ರಮಗಳಿಗೆ ಈ ಭವನವನ್ನು ಬಾಡಿಗೆಗೆ ನೀಡಲಾಗುತ್ತದೆ. ಕೆಲವರು ಕಾರ್ಯಕ್ರಮ ಮಾಡಲು ಭವನವನ್ನು ಈಗಾಗಲೇ ಕಾಯ್ದಿರಿಸಿದ್ದಾರೆ ಎಂದು ವಿವಿ ಕುಲಪತಿಗಳು ತಿಳಿಸಿದ್ದಾರೆ.
ಕೆಎಸ್ಓಯುಗೆ ಮಾನ್ಯತೆ ಸಿಕ್ಕರೂ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳ ಹಿಂದೇಟು