ನೀರಿಗಾಗಿ ಹುಟ್ಟಿಕೊಂಡ ದ್ವೇಷ ಮಹಿಳೆ ಕೊಲೆಯಲ್ಲಿ ಅಂತ್ಯ
ಮೈಸೂರು, ಏಪ್ರಿಲ್ 12 : ನೀರಿಗಾಗಿ ಆರಂಭವಾದ ಜಗಳ ಕೊಲೆಯಲ್ಲಿ ಪರ್ಯಾವಸಾನಗೊಂಡ ಘಟನೆ ಮೈಸೂರಿನ ಹೂಟಗಳ್ಳಿಯಲ್ಲಿ ನಡೆದಿದೆ. ಮೈಸೂರು ಉಪವಿಭಾಗಾಧಿಕಾರಿ ಸಿ.ಎಸ್.ಆನಂದ್ ಅವರ ಸಹೋದರ ಸೆಸ್ಕಾಂ ನೌಕರ ಜಗದೀಶ್ ಅವರ ಪತ್ನಿ ಕುಮಾರಿ(36) ಕೊಲೆಗೀಡಾದವರು. ಕೊಲೆ ಮಾಡಿದ ಆರೋಪಿ ಪಕ್ಕದ ಮನೆಯ ನಿವಾಸಿ ಶಿವಣ್ಣ(45).
ನೀರಿಗಾಗಿ ಹೆಂಗಸರ ಮಧ್ಯೆ ಚಿಕ್ಕದಾಗಿ ಆರಂಭಗೊಂಡ ಜಗಳ ವಿಕೋಪಕ್ಕೆ ತೆರಳಿದ್ದರಿಂದ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ ಕುಮಾರಿ ಮೇಲೆ ಶಿವಣ್ಣ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಆರೋಪಿ ಶಿವಣ್ಣ ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಟಗಲ್ ಗ್ರಾಮದ ನಿವಾಸಿಯಾಗಿದ್ದು, ವಾಣಿವಿಲಾಸ ನೀರು ಸರಬರಾಜು ಮಂಡಳಿಯಲ್ಲಿ ವಾಟರ್ಮನ್ ಆಗಿ ಕೆಲಸ ಮಾಡುತ್ತಿದ್ದನು. ಕೊಲೆಯಾದ ಕುಮಾರಿ ಗಂಡ ಜಗದೀಶ್ ಒಂಟಿಕೊಪ್ಪಲಿನಲ್ಲಿರುವ ಸೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದಾನೆ. [ಕುಡಿಯಾಕ್ ತೊಟ್ ನೀರಿಲ್ಲ, ಮುಂದ್ ಕತಿ ಹೆಂಗ್ರೀಪಾ..!]
ಎರಡು ಕುಟುಂಬಗಳು ಹೂಟಗಳ್ಳಿ ಸರ್ಕಾರಿ ಶಾಲೆ ಸಮೀಪದ ಕಟ್ಟಡದ ಅಕ್ಕಪಕ್ಕದ ಮನೆಗಳಲ್ಲಿ ವಾಸ ಮಾಡುತ್ತಿದ್ದವು. ಆದರೆ ಇವರ ನಡುವೆ ನೀರಿನ ವಿಚಾರಕ್ಕೆ ಆಗಾಗ್ಗೆ ಕಲಹಗಳಾಗುತ್ತಿದ್ದವು. ಇದರಿಂದ ಜಗದೀಶ್ ಮತ್ತು ಶಿವಣ್ಣನ ಕುಟುಂಬ ಬದ್ಧ ವೈರಿಗಳಂತಿದ್ದರು. ಶಿವಣ್ಣನ ವಿರುದ್ಧ ಜಗದೀಶ್ ಅವರ ಮನೆ ಮಾಲೀಕರಿಗೆ ಹಾಗೂ ವಾಣಿ ವಿಲಾಸ ನೀರು ಸರಬರಾಜು ಮಂಡಳಿಯ ಅಧಿಕಾರಿಗಳಿಗೂ ದೂರು ನೀಡಿದ್ದನು. ಇದು ಶಿವಣ್ಣನಿಗೆ ಜಗದೀಶ್ ಕುಟುಂಬದ ಮೇಲೆ ಇನ್ನಷ್ಟು ಕೋಪ ಬರುವಂತೆ ಮಾಡಿತ್ತು. ಅಲ್ಲದೆ ಶಿವಣ್ಣ ಮನೆಯನ್ನು ಕೂಡ ಬದಲಾಯಿಸಿದ್ದನು.
ಜಗದೀಶ್ ಕುಟುಂಬದ ಮೇಲೆ ದ್ವೇಷ ಸಾಧಿಸುತ್ತಿದ್ದ ಶಿವಣ್ಣ ಸೋಮವಾರ ಸಂಜೆ ಬೈಕ್ನಲ್ಲಿ ಜಗದೀಶ್ ಮನೆಯತ್ತ ಬಂದಿದ್ದು, ಅಲ್ಲಿ ಬಟ್ಟೆ ಶುಚಿಮಾಡುತ್ತಿದ್ದ ಕುಮಾರಿಯನ್ನು ಕಂಡಿದ್ದಾನೆ. ಆಕೆಯ ಕತ್ತು ಹಾಗೂ ಮುಖಕ್ಕೆ ಮಚ್ಚಿನಿಂದ ಕಡಿದಿದ್ದಾನೆ. ಮಚ್ಚಿನೇಟಿಗೆ ತೀವ್ರ ರಕ್ತಸ್ರಾವಗೊಂಡ ಕುಮಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅಲ್ಲಿಂದ ಆರೋಪಿ ಶಿವಣ್ಣ ಪರಾರಿಯಾಗಿದ್ದಾನೆ. ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶಿವಣ್ಣನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. [ಕೆಆರ್ ಎಸ್ ಹಿನ್ನೀರಿನಲ್ಲಿ ಗತ ವರ್ಷಗಳ ದೇವಾಲಯಗಳು ಪ್ರತ್ಯಕ್ಷ!]