ಸ್ವಚ್ಛ ನಗರಿಯಲ್ಲಿ ಮೂರನೇ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಪ್ರತಿಭಟನೆ
ಮೈಸೂರು, ಅಕ್ಟೋಬರ್.05:ಮೈಸೂರು ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕೆಂಬ ಪ್ರಮುಖ ಬೇಡಿಕೆಯೊಂದಿಗೆ ಇನ್ನಿತರ ಸೌಲಭ್ಯಕ್ಕಾಗಿ ಪಾಲಿಕೆಯ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರು ಒಕ್ಕೊರಲಿನಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಅಹೋ ರಾತ್ರಿ ಮುಷ್ಕರ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಗುತ್ತಿಗೆ ಪೌರ ಕಾರ್ಮಿಕರ ಧರಣಿ ಮುಂದುವರಿಕೆ ಜಿಲ್ಲಾಡಳಿತವನ್ನು ಬೆಂಕಿಯುಂಡೆಯಾಗಿ ಕಾಡುತ್ತಿದೆ.
ಮೃತ ಪೌರಕಾರ್ಮಿಕ ಸುಬ್ರಮಣಿ ಸಾವಿನ ಹಿಂದಿದೆ ಮನಕಲಕುವ ಕತೆ
ಈ ಮುಷ್ಕರದ ಬಿಸಿ ರಾಜ್ಯ ಸರ್ಕಾರಕ್ಕೂ ತಟ್ಟಿರುವ ಬೆನ್ನಲ್ಲೇ ಸ್ಥಳೀಯವಾಗಿಯೂ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಪೌರ ಕಾರ್ಮಿಕರು ತಮ್ಮ ಬಿಗಿಪಟ್ಟು ಸಡಿಲಿಸದೆ ಮೂರನೇ ದಿನವೂ ಪ್ರತಿಭಟನೆ ಮುಂದುವರಿಸಿದ್ದಾರೆ.
ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ನೇತೃತ್ವದಲ್ಲಿ ಬುಧವಾರ ನಗರದಾದ್ಯಂತ ಕೆಲಸ ಸ್ಥಗಿತಗೊಳಿಸಿ, ಮಹಾನಗರ ಪಾಲಿಕೆಯ ಮುಖ್ಯದ್ವಾರದ ಬಳಿ ಪಾಲಿಕೆ ಪೌರ ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದಾರೆ.
ಸಂಬಳವಿಲ್ಲದೆ ಸಾಯುತ್ತಿರುವ ಪೌರಕಾರ್ಮಿಕರು:ಸರ್ಕಾರದ ವಿರುದ್ಧ ಆಕ್ರೋಶ
ಬೇಡಿಕೆಗಳು ಈಡೇ ರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವ 2 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರು ತಮ್ಮ ಹೋರಾಟ ನಡೆಸುತ್ತಿದ್ದಾರೆ. ಹಾಗಾದರೆ ಪೌರಕಾರ್ಮಿಕರು ಇಡುತ್ತಿರುವ ಬೇಡಿಕೆಗಳೇನು? ಪ್ರತಿಭಟನೆ ಮುಂದುವರೆಯಲಿದೆಯಾ? ಹೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ಓದಿ...
ಅಧಿಕಾರಿಗಳ ಸ್ವಚ್ಛತಾಕಾರ್ಯ
ಇಂದು ಶುಕ್ರವಾರ (ಅ.05) ಸಹ ನಗರದ ಪ್ರಮುಖ ಭಾಗಗಳಲ್ಲಿ ಖಾಯಂ ಪೌರಕಾರ್ಮಿಕರೊಡಗೂಡಿ ಅಧಿಕಾರಿಗಳು ಸ್ವಲ್ಪ ಹೊತ್ತು ಸ್ವಚ್ಛತಾ ಕಾರ್ಯ ನಡೆಸಿದರಾದರೂ ಆ ಪ್ರಯತ್ನವನ್ನು ಮುಷ್ಕರ ನಿರತರು ವಿಫಲಗೊಳಿಸಿದರು. ಹಾಗಾಗಿ ಅಧಿಕಾರಿಗಳ ಸ್ವಚ್ಛತಾಕಾರ್ಯ ಬಹಳ ಹೊತ್ತು ನಡೆಯಲಿಲ್ಲ.
ಸರ್ಕಾರದ ವಿರುದ್ಧ ಆಕ್ರೋಶ
ಮೂರನೇ ದಿನವೂ ಪಾಲಿಕೆ ಎದುರು ಪೌರ ಕಾರ್ಮಿಕರು ಧರಣಿ ಮುಂದುವರಿಸಿದ್ದಾರೆ. ಅರಿತಿರುವ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಸಮಸ್ಯೆಯನ್ನು ಮನವರಿಕೆ ಮಾಡಿ ಕೊಡುವ ಯತ್ನ ನಡೆಸಿದ್ದಾರೆ. ಪೌರಕಾರ್ಮಿಕರು ಎದ್ದೇಳಿ ಹೊತ್ತಾಯಿತೋ ರಂಗಮ್ಮ, ಎದ್ದೇಳಿ ಹೊತ್ತಾಯಿತೋ' ಎಂಬ ಹೋರಾಟದ ಹಾಡುಗಳನ್ನು ಹಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂಸಾಚಾರದ ಸ್ವರೂಪ ಪಡೆದ ಪ್ರತಿಭಟನೆ: ರೈತರ ಮೇಲೆ ಬಲಪ್ರಯೋಗ
ಹೋರಾಟಕ್ಕೆ ಬೆಂಬಲ ಸೂಚಿಸಿದ ಶಾಸಕ
ಪ್ರತಿಭಟನಾ ಸ್ಥಳಕ್ಕೆ ಗುರುವಾರ ಶಾಸಕ ಎಲ್.ನಾಗೇಂದ್ರ ಭೇಟಿ ನೀಡಿ ಪೌರಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಇದೇ ವೇಳೆ ನಗರಪಾಲಿಕೆ ಸದಸ್ಯರಾದ ಶೋಭಾ, ಕೆ.ವಿ.ಶ್ರೀಧರ್, ಪ್ರಭುಸ್ವಾಮಿ ಮೊದಲಾದವರು ಕೆಲಕಾಲ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಪ್ರಮುಖ ಬೇಡಿಕೆಗಳು
ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು, ಪಾಲಿಕೆಯಿಂದಲೇ ಸಂಬಳ ಪಾವತಿಯಾಗಬೇಕು, ಸದ್ಯ ಇರುವ 700 ಜನರಿಗೆ ಒಬ್ಬ ಪೌರಕಾರ್ಮಿಕ ಎಂಬ ನಿಯಮವನ್ನು ರದ್ದುಪಡಿಸಬೇಕು, 500 ಜನರಿಗೆ ಒಬ್ಬ ಪೌರಕಾರ್ಮಿಕ ಎಂದು ನೇಮಿಸಬೇಕು, ಬಿಬಿಎಂಪಿಯಲ್ಲಿ ನೀಡುವಂತೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ 2 ಸಾವಿರ ರೂಪಾಯಿ ಬೋನಸ್ ನೀಡಬೇಕು.
ಒಳಚರಂಡಿ ಸ್ವಚ್ಛತಾ ಕಾರ್ಯ ನಡೆಸುವ ಗುತ್ತಿಗೆ ನೌಕರರನ್ನು ಪೌರಕಾರ್ಮಿಕರು ಎಂದು ಪರಿಗಣಿಸಬೇಕು ಎಂಬುದಾಗಿದೆ.