ಶಂಕರ ನಾಯಕ ಆತ್ಮಹತ್ಯೆ ಪ್ರಕರಣ ಸೂಕ್ತ ಪರಿಹಾರಕ್ಕೆ ನೀಡಲು ಒತ್ತಾಯ
ಮೈಸೂರು ನಗರದ ಸರಸ್ವತಿ ಪುರಂ ಪೊಲೀಸ್ ಠಾಣೆಯ ಪೊಲೀಸರಿಂದ ಕಿರುಕುಳ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ ಶಂಕರ ನಾರಾಯಣ್ ಪರವಾಗಿ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ನಾಯಕರ ಸೇನೆ ಪ್ರತಿಭಟನೆ ನಡೆಸಿತು.
ಮೈಸೂರು, ಜೂನ್ 20: ಠಾಣೆಗೆ ಕರೆದೊಯ್ದು ಪೊಲೀಸರು ದೌರ್ಜನ್ಯ ನಡೆಸಿದ ಕಾರಣ, ಶಂಕರ ನಾಯಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದು, ಈ ಕುರಿತು ದೂರು ನೀಡಿದ್ದರೂ ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವತಿಯಿಂದ ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿದರು. ಮೈಸೂರು ತಾಲೂಕು ಉದ್ಭೂರು ಗ್ರಾಮದ ಶಂಕರ ನಾಯಕ ಎಂಬ ಯುವಕನನ್ನು ಮೈಸೂರು ನಗರದ ಸರಸ್ವತಿಪುರಂ ಠಾಣೆಯ ಆರಕ್ಷಕ ಸಿಬ್ಬಂದಿಗಳು ಜೂ. 14ರಂದು ಗಸ್ತು ತಿರುಗುವಾಗ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ತಮ್ಮೊಂದಿಗೆ ಠಾಣೆಗೆ ಕರೆದೊಯ್ದಿದ್ದಾರೆ.
ನಾಲ್ವಡಿ ಕೃಷ್ಣರಾಜರ ಹೆಸರನ್ನು ಮೈಸೂರು ವಿವಿಗೆ ಇಡಲು ಒತ್ತಾಯ
ರಾಜರಾಜೇಶ್ವರಿ ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಎಂಬ ಕಾರಣಕ್ಕೆ ಠಾಣೆಗೆ ಕರೆದೊಯ್ದು ಅಮಾಯಕ ಶಂಕರನಾಯಕನನ್ನು ಕರೆತಂದು ವಿಚಾರಣೆ ನೆಪದಲ್ಲಿ ಚಿತ್ರಹಿಂಸೆ ನೀಡಿದ್ದಾರೆ.
ಕಳ್ಳತನದ ಅರೋಪವನ್ನು ಹೊರಿಸಿ ಮನಬಂದಂತೆ ಮಾರಣಾಂತಿಕವಾಗಿ ಹೊಡೆದು ದೌರ್ಜನ್ಯ ನಡೆಸಿ ಅಮಾಯಕ ಶಂಕರನಾಯಕನ ವಿರುದ್ಧವಾಗಿ ಕೇಸು ದಾಖಲಿಸಿರುವುದರಿಂದ ಮನನೊಂದ ಶಂಕರನಾಯಕ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವಿಚಾರವಾಗಿ ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಇದುವರೆವಿರೂ ಸರಸ್ವತಿಪುರಂ ಪೊಲೀಸ್ ಠಾಣೆಯ ಅರೋಪಿ ಸಿಬಂದಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸರಸ್ವತಿಪುರಂ ಪೊಲೀಸ್ ಸಿಬ್ಬಂದಿ ವಿರುದ್ಧವಾಗಿ ಕಾನೂನು ರೀತಿ ಕ್ರಮಕೈಗೊಂಡು ಮೃತ ಶಂಕರ ನಾಯಕ ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ಈ ಘಟನೆಯನ್ನು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿರುವುದರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.