ಮೈಸೂರು: ಕಾಲಾ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿ ಪ್ರತಿಭಟನೆ
ಮೈಸೂರು, ಜೂನ್ 7 : ತಮಿಳು ಚಲನಚಿತ್ರ 'ಕಾಲಾ' ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾಡಾ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು ನಟ ರಜನಿಕಾಂತ್ ಅವರು ಕಾವೇರಿ ನದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ. ಕಾವೇರಿ ಸಮಸ್ಯೆಯನ್ನು ಎರಡು ರಾಜ್ಯಗಳು ಸೌಹಾರ್ದದಿಂದ ಬಗೆಹರಿಸಿಕೊಳ್ಳಬೇಕು.
ಬೆಂಗಳೂರಿನ ಚಿತ್ರಮಂದಿರಗಳಲ್ಲಿ 'ಕಾಲಾ'ಗೆ ಸಿಕ್ಕಿಲ್ಲ ಬಿಡುಗಡೆ ಭಾಗ್ಯ
ಅದನ್ನು ಬಿಟ್ಟು ಭಾವನಾತ್ಮಕವಾಗಿ ವಿವಾದ ಸೃಷ್ಟಿಸುತ್ತಿರುವ ರಜನಿಕಾಂತ್ ಕನ್ನಡಿಗರ ಪಾಲಿಗೆ ಖಳನಾಯಕ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿವಾದ ನ್ಯಾಯಾಲಯದಲ್ಲಿದೆ. ಅಲ್ಲದೆ, ಸುಪ್ರೀಂ ಕೋರ್ಟ್ 'ಸ್ಕೀಂ' ರೂಪಿಸುವಂತೆ ಸೂಚಿಸಿದೆ. ಹೀಗಿರುವಾಗ ನ್ಯಾಯಾಲಯವನ್ನು ಗೌರವಿಸಬೇಕು. ಅದನ್ನು ಬಿಟ್ಟು ಸಿನಿಮಾ ನಿರ್ಮಿಸಿ ಕನ್ನಡಿಗರ ಮನಸ್ಸು ನೋಯಿಸಬಾರದು ಎಂದು ಖಂಡಿಸಿದರು.
ಮೈಸೂರಿನಲ್ಲಿ ಕಾಲಾ ಬಿಡುಗಡೆಯಿಲ್ಲ: ಒಗ್ಗಟ್ಟಾದ ಥಿಯೇಟರ್ ಮಾಲೀಕರು
ರಜನಿಕಾಂತ್ ಅವರು ರಾಜಕೀಯಕ್ಕಾಗಿ ಕಾವೇರಿ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ. ಅವರು ಎರಡು ರಾಜ್ಯಗಳ ಸಂಬಂಧ ಹಾಳು ಮಾಡುತ್ತಿದ್ದಾರೆ. ಇದೇ ರೀತಿಯ ಟೀಕೆ ಮುಂದುವರಿದರೆ ರಜನಿಕಾಂತ್ ಅಭಿನಯದ ಯಾವುದೇ ಚಿತ್ರಗಳು ಮೈಸೂರಿನಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡದಂತೆ ಮಾಡಲಾಗುವುದು ಎಂದು ಎಚ್ಚರಿಸಿದರು.