ಪ್ರೊ.ರಂಗಪ್ಪ ಕ್ರಿಮಿನಲ್, ಮೋಸಗಾರ: ಗೋ.ಮಧುಸೂದನ್ ವಾಗ್ದಾಳಿ
ಮೈಸೂರು, ಜುಲೈ.03: ಇಂದು ಮೈಸೂರಿನಲ್ಲಿ ಬೆಳಗ್ಗೆ ನಡೆಯಬೇಕಿದ್ದ ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಹಾಗೂ ಪ್ರೊ.ರಂಗಪ್ಪ ಬಹಿರಂಗ ಚರ್ಚೆಗೆ ಪ್ರೊ.ರಂಗಪ್ಪ ಬಾರದ ಹಿನ್ನೆಲೆಯಲ್ಲಿ ಗೋ.ಮಧುಸೂದನ್ ಒಬ್ಬರೇ ಏಕಾಂಗಿಯಾಗಿ ಸುದ್ದಿಗೋಷ್ಠಿ ನಡೆಸಿ ರಂಗಪ್ಪ ಅವರನ್ನು ಪ್ರಶ್ನಿಸಿದ್ದಾರೆ.
ಅದು ಅವರು ಕೇಳಿರುವುದು ಒಂದಲ್ಲ, ಎರಡಲ್ಲ, ಸುಮಾರು 26 ಪ್ರಶ್ನೆಗಳು. ಅವರು ಕೇಳಿರುವ ಪ್ರಶ್ನೆಗಳ ವಿವರ ಹೀಗಿದೆ..
ರಂಗಪ್ಪ ಅವರ ಅಧಿಕಾರವಧಿಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ದಾಖಲಾತಿ ಸಮೇತ ಪ್ರಶ್ನಿಸಿದ್ದಾರೆ ಗೋ.ಮಧುಸೂದನ್. ಜಿಲ್ಲಾ ಪತ್ರಕರ್ತರ ಸಂಘ ನಮ್ಮ ಚರ್ಚೆಗೆ ಪ್ರಾಯೋಜಕತ್ವ ನೀಡಲಿಲ್ಲ. ಆದರೆ ಸವಾಲು ಸ್ವೀಕರಿಸಿದ್ದ ರಂಗಪ್ಪ ಸಂಘಕ್ಕೆ ಬಂದು ಉತ್ತರ ಕೊಡಬಹುದಿತ್ತು.
ಪ್ರೊ.ಕೆ.ಎಸ್.ರಂಗಪ್ಪ-ಗೋ.ಮಧುಸೂದನ್ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧ
10 ಗಂಟೆಗೆ ನಿಗದಿಯಾಗಿದ್ದ ಚರ್ಚೆ ರದ್ದಾಗಿದ್ದರೂ 10.30 ರವರೆಗೂ ನಾನು ಕಾಯುತ್ತಿದ್ದೆ. ಆದರೆ ಅವರು ಬರಲೇ ಇಲ್ಲ. ಚರ್ಚೆ ರದ್ದಾಗಿದ್ದು, ಹಲವು ಪತ್ರಕರ್ತರಿಗೆ ನಿರಾಸೆಯಾಗಿದೆ. ಆದರೂ ನಾನು ಏಕಾಂಗಿಯಾಗಿಯೇ ಪ್ರಶ್ನೆ ಮಾಡುತ್ತೇನೆ.
ಪ್ರೊ.ರಂಗಪ್ಪ ಪುಕ್ಕಲುತನದಿಂದ ಓಡಿ ಹೋಗಿದ್ದಾರೆ. ಕಲ್ಪನಾತ್ಮಕ ಊಹಾಪೋಹ, ಕಾನೂನು ತೊಡಕಿನ ಕಾರಣ ನೀಡಿ ಚರ್ಚೆ ರದ್ದು ಮಾಡಿದ್ದಾರೆ. ಪತ್ರಕರ್ತರ ಸಂಘ ಸೂಚಿಸಿದಂತೆ ನನ್ನ ಪ್ರಶ್ನೆಗಳನ್ನು ಮೊದಲೇ ನೀಡಿದ್ದೆ.
ನನ್ನ ಪ್ರಶ್ನೆಗಳನ್ನ ಕಂಡ ರಂಗಪ್ಪ ನಂತರ ಚರ್ಚೆಗೆ ಬರಲಿಲ್ಲ. ಸಂಘದಿಂದ ಕಾನೂನಿನ ತೊಡಕುಂಟಾಗುತ್ತದೆ ಎಂದಾಗ ನಾನು ಸಿದ್ಧನಾಗಿ ಬಂದೆ. ಆದರೆ ರಂಗಪ್ಪ ಯಾಕೆ ಬಹಿರಂಗ ಚರ್ಚೆಗೆ ಬರಲಿಲ್ಲ. ರಂಗಪ್ಪ ಒಬ್ಬ ಗೌರ್ನಮೆಂಟ್ ಚೀಟರ್ ಎಂದು ಗೋ.ಮಧುಸೂದನ್ ವಾಗ್ದಾಳಿ ನಡೆಸಿದರು.
ರಂಗಪ್ಪ ವಿರುದ್ಧ ಮೂರು ವರ್ಷಗಳಿಂದ ಆರೋಪ ಮಾಡುತ್ತಾ ಬಂದಿದ್ದೇನೆ. ನಾನು ಸುಮ್ಮನೆ ಆರೋಪ ಮಾಡುತ್ತಿಲ್ಲ. ಎಲ್ಲಾ ದಾಖಲೆಗಳು ಇರುವುದರಿಂದಲೇ ಆರೋಪ ಮಾಡುತ್ತಿದ್ದೇನೆ. ರಂಗಪ್ಪ ಒಬ್ಬ ಕ್ರಿಮಿನಲ್. ಟೆಕ್ನಿಕಲ್ ಕೋರ್ಸ್ ಆರಂಭ ಮಾಡ್ತೀವಿ ಅಂತ ಹೇಳಿ ಬಡವರು, ಹಿಂದುಳಿದ, ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳ ಬದುಕಿನ ಜೊತೆ ಆಟ ಆಡಿದ್ದಾರೆ.
ಹಲವಾರು ವರ್ಷಗಳಿಂದ ಅಕ್ರಮ ಕೆಲಸ ಮಾಡಿ, ಪ್ರತಿಯೊಬ್ಬರಿಗೂ ಮೋಸ ಮಾಡಿದ್ದಾರೆ. ಅನಧಿಕೃತವಾಗಿ, ಕಾನೂನು ಬಾಹಿರವಾಗಿ ಲಕ್ಷಾಂತರ ಪ್ರಮಾಣ ಪತ್ರ ವಿತರಣೆ ಮಾಡಿದ್ದಾರೆ. ಕಷ್ಟ ಕಟ್ಟು ಓದಿದ ವಿದ್ಯಾರ್ಥಿಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ.
ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ ಗಳು ರಂಗಪ್ಪ ಅವರ ಬೇಜಾವ್ದಾರಿಯಿಂದ ಲದ್ದಿ ಪೇಪರ್ ಹಾಗೂ ಬೋಂಡಾ ಕಟ್ಟುವ ಪೇಪರ್ ಆಗಿದೆ ಎಂದು ಮಧುಸೂದನ್ ಟೀಕಿಸಿದರು.