ಮೈಸೂರಿನಲ್ಲಿ ಪಾಲಿಕೆ ಚುನಾವಣೆಗೆ ಸಕಲ ಸಿದ್ಧತೆ: ಹುರಿಯಾಳುಗಳಿಂದ ಬೆಳ್ಳಿ ದೀಪದ ಆಮಿಷ
ಮೈಸೂರು, ಆಗಸ್ಟ್ 29 : ಆಗಸ್ಟ್ 31ರಂದು ನಡೆಯಲಿರುವ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನವಾಗಿದ್ದು, ಹಲವು ಕಸರತ್ತುಗಳನ್ನು ಹುರಿಯಾಳುಗಳು ನಡೆಸುತ್ತಿದ್ದಾರೆ. ಇದರೊಟ್ಟಿಗ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ.
ಈ ಬಾರಿಯೂ ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸುತ್ತಿದ್ದು, ಅಭ್ಯರ್ಥಿಗಳ ಹೆಸರಿನ ಜೊತೆಗೆ ಭಾವಚಿತ್ರಗಳನ್ನು ಅಳವಡಿಸುವುದು ಈ ಬಾರಿಯ ವಿಶೇಷ. ಚುನಾವಣೆಯಲ್ಲಿ ನೋಟಾಗೆ ಅವಕಾಶ ಕಲ್ಪಿಸಲಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ : ಮೈತ್ರಿ ಸರ್ಕಾರಕ್ಕೆ ಮೊದಲ ಪರೀಕ್ಷೆ
ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್ ಗಳಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಬಿಎಸ್ ಪಿ, ಎಸ್ಡಿಪಿಐ ಸೇರಿದಂತೆ ವಿವಿಧ ಪಕ್ಷಗಳು ಹಾಗೂ ಪಕ್ಷೇತರ ಸೇರಿ ಒಟ್ಟು 393 ಅಭ್ಯರ್ಥಿಗಳು ಕಣದಲ್ಲಿದ್ದು, ಭಾರೀ ಚುನಾವಣಾ ಪ್ರಚಾರದ ಮೂಲಕ ಗೆಲುವಿಗೆ ಪಣತೊಟ್ಟು, ಮತದಾರನ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಆಗಸ್ಟ್ 31 ರಂದು ಮೈಸೂರಿನ 725 ಮತ ಗಟ್ಟೆ, 90 ಆಕ್ಸಿಲರಿ ಮತಗಟ್ಟೆ ಸೇರಿ ಒಟ್ಟು 815 ಕೇಂದ್ರಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, 4,01,395 ಮಹಿಳೆಯರು, 98 ಇತರರು ಸೇರಿ 2018ರ ಆಗಸ್ಟ್ 20 ಪಟ್ಟಿಯನ್ವಯ ಒಟ್ಟು 7,98,673 ಮಂದಿ ತಮ್ಮ ಹಕ್ಕು ಚಲಾಯಿಸಬೇಕಾಗಿದೆ.
ದಕ್ಷಿಣ ಕನ್ನಡದಲ್ಲಿ ಮಿನಿ ಚುನಾವಣಾ ಸಮರಕ್ಕೆ ವೇದಿಕೆ ಸಿದ್ಧ
ಸೆಪ್ಟೆಂಬರ್ 3ರಂದು ಬೆಳಗ್ಗೆ 8 ಗಂಟೆಯಿಂದ ಮೈಸೂರಿನ ಪಡುವಾರಹಳ್ಳಿ ಬಳಿ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಸರ್ಕಾರಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹೊಸ ಕಟ್ಟಡ ದಲ್ಲಿ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಎಲ್ಲಾ 65 ವಾರ್ಡು ಗಳ ಪೂರ್ಣ ಫಲಿತಾಂಶದ ಪ್ರಕಟವಾಗುವ ನಿರೀಕ್ಷೆ ಇದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಅಂಕಿ ಸಂಖ್ಯೆಗಳ ಲೆಕ್ಕ
ಜಿಲ್ಲಾಡಳಿತದ ಸಿದ್ಧತೆ, ಮತಗಟ್ಟೆ, ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ...
ಎರಡು ಹಂತಗಳಲ್ಲಿ ತರಬೇತಿ
13 ಮಂದಿ ಚುನಾವಣಾಧಿಕಾರಿಗಳು, 13 ಮಂದಿ ಸಹಾಯಕ ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಮತಗಟ್ಟೆಗೆ ಒಬ್ಬರು ಅಧ್ಯಕ್ಷಾಧಿಕಾರಿ (ಪ್ರಿಸೈಡಿಂಗ್ ಆಫೀಸರ್) ಹಾಗೂ ಮೂವರು ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಈಗಾಗಲೇ ಅವರಿಗೆ ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ ಎಂದು ಕೆ.ಹೆಚ್.ಜಗದೀಶ್ ತಿಳಿಸಿದರು.
ಸಾರ್ವತ್ರಿಕ ರಜೆ
ಈಗಾಗಲೇ ವಿದ್ಯುನ್ಮಾನ ಮತಯಂತ್ರಗಳನ್ನು ಪರಿಶೀಲಿಸಿ ಕಾರ್ಯಕ್ಷಮತೆಯನ್ನು ಖಾತರಿಪಡಿಸಿಕೊಳ್ಳಲಾಗಿದ್ದು, ಆಯಾ ಚುನಾವಣಾಧಿಕಾರಿಗಳ ಸುಪರ್ದಿಗೆ ಒಪ್ಪಿಸಲಾಗಿದೆ. ಅಭ್ಯರ್ಥಿಗಳ ಹೆಸರು, ಚಿಹ್ನೆ, ಕ್ರಮಸಂಖ್ಯೆ ಹಾಗೂ ಭಾವಚಿತ್ರ ಸೆಟ್ ಮಾಡುವ ಕಾರ್ಯ ಮುಗಿದಿದೆ.
ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆಗಳು ಸೇರಿದಂತೆ ರಾಜ್ಯದ 21 ಜಿಲ್ಲೆಗಳ ಒಟ್ಟು 102 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಆ.31ರಂದು ನಡೆಯಲಿದ್ದು, ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಮತದಾರರು, ಮತ ಚಲಾಯಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ, ಅಂದು ಸಾರ್ವತ್ರಿಕ ರಜೆ ಘೋಷಿಸಿ, ಆದೇಶಿಸಿದೆ.
ಹಾಗೆಯೇ ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಸರ್ಕಾರಿ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆಯೂ ಸೂಚಿಸಲಾಗಿದೆ.
ಬೆಳ್ಳಿ ದೀಪದ ಆಮಿಷ
ಮಹಾನಗರ ಪಾಲಿಕೆ ಚುನಾವಣೆಯ ಬಹಿರಂಗ ಪ್ರಚಾರ ಇಂದು ಅಂತ್ಯಗೊಳ್ಳಲಿದೆ. ಆದರೆ ಆಸೆ ಆಮಿಷಗಳಿಗೇನೂ ಕೊರತೆಯಿಲ್ಲ. ಈ ಮಧ್ಯೆ, ಚುನಾವಣಾ ಅಕ್ರಮಗಳು ನಡೆಯುತ್ತಿವೆ. ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಮತದಾರರಿಗೆ ಹಣ, ಬೆಳ್ಳಿ ಪದಾರ್ಥಗಳನ್ನು ಹಂಚಿದ ಆರೋಪ ಕೇಳಿಬಂದಿದೆ.
ರಾಮಕೃಷ್ಣನಗರದ 58ನೇ ವಾರ್ಡ್ ನಲ್ಲಿ ಪ್ರಚಾರ ನಡೆಸುತ್ತಿದ್ದ ಕೆಲ ಯುವಕರ ಬಳಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಕುಮಾರ್ ಅವರ ಭಾವಚಿತ್ರವುಳ್ಳ ಕರಪತ್ರ, ಜೊತೆಗೆ ಬೆಳ್ಳಿ ದೀಪ, 100 ಹಾಗೂ 200 ರೂ.ಗಳ ಹಲವು ನೋಟುಗಳು ದೊರೆತಿವೆ.
ಜಟಾಪಟಿ ಶುರು
ವಾರ್ಡ್ ನ ಪಕ್ಷೇತರ ಅಭ್ಯರ್ಥಿಯ ಬೆಂಬಲಿಗರು ಈ ಯುವಕರನ್ನು ತಡೆದು ನಿಲ್ಲಿಸಿ ಪಶ್ನಿಸಿದಾಗ ಜಟಾಪಟಿ ಶುರುವಾಗಿದೆ. ಪರಿಣಾಮ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿಗಳು, ಬೆಳ್ಳಿ ಪದಾರ್ಥ ಹಾಗೂ ಹಣ ಕೃಷ್ಣಕುಮಾರ್ ಅವರಿಗೆ ಸೇರಿದ್ದೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.