ಮಾ. ಸಚಿವ ರಾಮದಾಸ್ ಮೇಲೆ ಆರೋಪ ಮಾಡಿದ್ದ ಪ್ರೇಮಕುಮಾರಿ ಚುನಾವಣೆಗೆ
ಮೈಸೂರು, ಡಿಸೆಂಬರ್ 15: ಬಿಜೆಪಿಯ ಮಾಜಿ ಸಚಿವ ಎಸ್.ಎ.ರಾಮದಾಸ್ ಅವರ ವಿರುದ್ಧ ನಂಬಿಕೆ ದ್ರೋಹದ ಆರೋಪ ಮಾಡಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ಪ್ರೇಮಕುಮಾರಿ ಅವರು 2018ರ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ರಕ್ಷಣೆಗಾಗಿ ಸಿದ್ದರಾಮಯ್ಯಗೆ ಮನವಿ ಮಾಡಿದ ಪ್ರೇಮಕುಮಾರಿ
ಮಾಜಿ ಸಚಿವ ರಾಮದಾಸ್ ಅವರು ತನ್ನನ್ನು ಮದುವೆಯಾಗುತ್ತೇನೆಂದು ಹೇಳಿ ವಂಚಿಸಿದ್ದಾರೆ ಎಂದು ಪ್ರೇಮಕುಮಾರಿ ಆರೋಪ ಮಾಡಿದ್ದರು, ಆಗ ಇದು ರಾಜ್ಯದಲ್ಲೆಲ್ಲಾ ಸುದ್ದಿಯಾಗಿ, ರಾಮದಾಸ್ ಅವರು ಆತ್ಮಹತ್ಯೆ ಯತ್ನ ಕೂಡ ಮಾಡಿದ್ದರು.
ಪ್ರೇಮಕುಮಾರಿ ಅವರ ಆರೋಪಗಳಿಂದ ರಾಜಕೀಯವಾಗಿ ಭಾರಿ ಮುಖಭಂಗವನ್ನು ರಾಮದಾಸ್ ಅವರು ಅನುಭವಿಸಿದ್ದರು, ಆತ್ಮಹತ್ಯೆ ಯತ್ನದ ಬಳಿಕ ಪೊಲೀಸರು ಕೇಸು ದಾಖಲಿಸಿಕೊಂಡು ಇದೀಗ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಮಧ್ಯೆ ಪ್ರೇಮಕುಮಾರಿ ಚುನಾವಣಾ ಕಣಕ್ಕೆ ಇಳಿಯುವುದಾಗಿ ಹೇಳಿರುವುದು ರಾಮದಾಸ್ ಅವರಿಗೆ ಹೊಸ ತಲೆ ನೋವು ತಂದಿಡುವ ಸಾಧ್ಯತೆ ಇದೆ.
ಜನಸೇವೆಯಲ್ಲಿ ನನಗೆ ಮುಂಚಿನಿಂದಲೂ ಆಸಕ್ತಿ ಇದ್ದು, ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವ ಮೂಲಕ ಜನಸೇವೆಯ ಆಸೆಯನ್ನು ಪೂರೈಸಿಕೊಳ್ಳುವುದಾಗಿ ಅವರು ಸುದ್ದಿಗಾರರಿಗೆ ಹೇಳಿದ್ದಾರೆ.
ರಾಮದಾಸ್ - ಪ್ರೇಮಕುಮಾರಿ ಪ್ರಕರಣಕ್ಕೆ ಹೊಸಜೀವ!
'ರಾಮದಾಸ್ ಅವರು ಎಂದೆಂದಿಗೂ ನನ್ನ ಪತಿ ಎಂದಿರುವ ಅವರು, ಅವರೇ ನನ್ನ ರಾಜಕೀಯ ಮಾರ್ಗದರ್ಶಕರು ಕೂಡ ಎಂದು ಅವರು ಹೊಸ ಬಾಂಬ್ ಸಿಡಿಸಿರುವ ಅವರು ಅಗತ್ಯ ಬಿದ್ದರೆ ರಾಮದಾಸ್ ವಿರುದ್ಧವಾಗಿಯೂ ಸ್ಪರ್ಧಿಸುವುದಾಗಿಯೂ ಹೇಳಿದ್ದಾರೆ.
ನ್ಯಾಯಾಲಯದ ಅಡೆತಡೆಗಳು ಕೆಲವು ಇದ್ದು (ರಾಮದಾಸ್ ಪ್ರಕರಣ) ಅವುಗಳನ್ನು ಮುಗಿಸಿಕೊಂಡು ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತೇನೆ, ಯಾವ ಪಕ್ಷಕ್ಕೆ ಸೇರುತ್ತೇನೆ ಎಂದು ಈಗಲೇ ಹೇಳುವುದಿಲ್ಲ ಎಂದು ಅವರು ಹೇಳಿದ್ದಾರೆ.