ಕಣ್ಣೀರು ಹಾಕಿ ಸೀನ್ ಕ್ರಿಯೇಟ್ ಮಾಡ್ಬೇಡಿ, ಹೀಗೆ ಪ್ರತಾಪ್ ಸಿಂಹ ಹೇಳಿದ್ದು ಯಾರಿಗೆ?
Recommended Video
ಮೈಸೂರು, ಅಕ್ಟೋಬರ್. 16 : ಹುತಾತ್ಮ ಯೋಧರ ಕುಟುಂಬಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ.ಗಳ ಪರಿಹಾರ ನೀಡಲಾಯಿತು. ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಹುತಾತ್ಮ ಯೋಧರ ಕುಟುಂಬಕ್ಕೆ ಅವಮಾನವೆಸಗಿದ ಪ್ರಸಂಗ ಕೂಡ ಜರುಗಿದೆ.
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಅವರು 6 ಮಂದಿ ಹುತಾತ್ಮ ಯೋಧರ ಕುಟುಂಬದವರಿಗೆ ತಲಾ 10 ಲಕ್ಷ ರೂಗಳ ಚೆಕ್ ವಿತರಿಸಿದರು. ಮೈಸೂರಿನ ರಮೇಶ್, ಎಚ್.ಡಿ.ಕೋಟೆ ತಾಲೂಕಿನ ಮಹೇಶ್, ಹಾಸನದ ನಾಗೇಶ್, ಯೋಗಾನಂದ್, ಸಂದೀಪ್ ಹಾಗೂ ಸಾಗರ್ ಅವರ ಕುಟುಂಬ ಸದಸ್ಯರು ಹಾಜರಿದ್ದು, ಪರಿಹಾರದ ಚೆಕ್ ಪಡೆದುಕೊಂಡರು.
ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಡಾ.ಸುಧಾ ಮೂರ್ತಿ, ಹಣದ ಮೂಲಕ ಪ್ರಾಣವನ್ನು ತಂದುಕೊಡಲು ಸಾಧ್ಯವಿಲ್ಲ. ಆದರೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾಂತ್ವನ ಹೇಳವುದಕ್ಕೆ ಮಾತ್ರ ಸಾಧ್ಯವಿದೆ. ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯ, ಈ ನಿಟ್ಟಿನಲ್ಲಿ ಹುತಾತ್ಮರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗಿದೆ ಎಂದರು.
ಪ್ರತಾಪ್ ಸಿಂಹ ವಿರುದ್ಧವೇ ತಿರುಗಿ ಬಿದ್ದ ಬಿಜೆಪಿ ಒಕ್ಕಲಿಗ ಮುಖಂಡರು?
ಈ ಹಣವನ್ನು ಮದುವೆ, ಇತರೆ ಕಾರ್ಯಗಳಿಗೆ ಬಳಸಿಕೊಳ್ಳಬೇಡಿ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು, ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ಬಳಸಿ ಎಂದು ಸಲಹೆ ನೀಡಿದರು. ಹಾಗಾದರೆ ಇದೇ ಸಂದರ್ಭದಲ್ಲಿ ಅಲ್ಲೇ ಇದ್ದ ಪ್ರತಾಪ್ ಸಿಂಹ ಹುತಾತ್ಮ ಯೋಧರ ಕುಟುಂಬದವರಿಗೆ ಏನು ಹೇಳಿದರು? ಓದಿ...
ಸೀನ್ ಕ್ರಿಯೇಟ್ ಮಾಡಬೇಡಿ
ಹುತಾತ್ಮ ಯೋಧರ ಕುಟುಂಬದವರು ಜಿಲ್ಲಾಧಿಕಾರಿ ಕಚೇರಿಯ ಬಳಿ ಖಾಸಗಿ ವಾಹಿನಿಗಳೊಂದಿಗೆ ಮಾತನಾಡುತ್ತಾ ತಮ್ಮ ಕಷ್ಟ ತೋಡಿಕೊಳ್ಳುತ್ತಿದ್ದಾಗ ಅಲ್ಲಿಗೆ ಬಂದ ಸಂಸದ ಪ್ರತಾಪ್ ಸಿಂಹ 'ನಿಮಗೆ ನಾನು ಮೊದಲೇ ಹೇಳಿದ್ದೀನಿ. ಈ ರೀತಿ ಕಣ್ಣೀರು ಹಾಕಿ ಸೀನ್ ಕ್ರಿಯೇಟ್ ಮಾಡಬೇಡಿ' ಎಂದು ಹೇಳಿದರು ಎನ್ನಲಾಗಿದೆ.
ಬಿಕ್ಕಳಿಸಿ ಅತ್ತ ಹೆಣ್ಣು ಮಕ್ಕಳು
ಹುತಾತ್ಮ ಯೋಧರ ಕುಟುಂಬ ಸಹಾಯ ಕೋರಲು ಇನ್ಫೋಸಿಸ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಭೇಟಿಗೆ ತೆರಳಿದಾಗ ಪ್ರತಾಪ್ ಸಿಂಹ ನೊಂದ ಹುತಾತ್ಮ ಯೋಧರ ಕುಟುಂಬದವರ ಭಾವನೆಗೆ ಧಕ್ಕೆ ಬರುವ ರೀತಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸಂಸದರ ಹೇಳಿಕೆಯಿಂದ ಹುತಾತ್ಮ ಯೋಧರ ಕುಟುಂಬದ ಹೆಣ್ಣು ಮಕ್ಕಳು ಬಿಕ್ಕಳಿಸಿ ಅತ್ತರು ಎಂದು ಹೇಳಲಾಗಿದೆ.
ದಸರೆಗೆ ವೈಭವದ ಚಾಲನೆ: ಕೊಡಗು ಸಂತ್ರಸ್ತರಿಗೆ 25 ಕೋಟಿ ರೂ. ಘೋಷಿಸಿದ ಸುಧಾ ಮೂರ್ತಿ
ನಮ್ಮ ಕುಟುಂಬಕ್ಕೂ ಸಹಾಯ ಮಾಡಿ
ಹುತಾತ್ಮ ಯೋಧರ ಕುಟುಂಬ ಇನ್ಫೋಸಿಸ್ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಅವರನ್ನು ಭೇಟಿ ಮಾಡಿ, ಸಹಾಯ ಕೋರಲು ಮುಂದಾಗಿದ್ದರು. ದೇಶಕ್ಕಾಗಿ ನಮ್ಮ ಮಕ್ಕಳು, ಗಂಡಂದಿರೂ ಕೂಡ ಜೀವ ತೆತ್ತಿದ್ದಾರೆ. ನಮ್ಮ ಕುಟುಂಬಕ್ಕೂ ಸಹಾಯ ಮಾಡಿ ಎಂದು ಮನವಿ ಮಾಡಿದರು.
ಸಂಸದರ ಕಚೇರಿಗೆ ತೆರಳಿ ಮನವಿ
ಇದಕ್ಕೂ ಮುನ್ನ ಈ ಕುಟುಂಬದವರು ಜಲದರ್ಶಿನಿಯಲ್ಲಿ ಸಂಸದರ ಕಚೇರಿಗೆ ತೆರಳಿ ಮನವಿ ಮಾಡಿದ್ದರು. ಆಗ ಪ್ರತಾಪ್ ಸಿಂಹ ಈಗ ಕೊಡುತ್ತಿರುವುದು ಕಳೆದ 3 ವರ್ಷದಲ್ಲಿ ಮೃತಪಟ್ಟ ಯೋಧರ ಕುಟುಂಬದವರಿಗೆ. ನಿಮ್ಮದು 2013ರ ಪ್ರಕರಣ. ಈ ಸಂಬಂಧ ಸುಧಾ ಮೂರ್ತಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದರಂತೆ.
ಆದರೂ, ಜಿಲ್ಲಾಧಿಕಾರಿ ಕಚೇರಿ ಬಳಿ ಸುಧಾ ಮೂರ್ತಿ ಅವರನ್ನು ಕಾಣಲು ಬಂದ ಹುತಾತ್ಮ ಯೋಧರ ಕುಟುಂಬದವರು ಸುದ್ದಿ ವಾಹಿನಿಗಳ ಮುಂದೆ ಕಷ್ಟ ತೋಡಿಕೊಂಡಿದ್ದಕ್ಕೆ ಸಂಸದರು ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ.