ಪಿಸಿಯಿಂದ ಒತ್ತುವರಿ : ರಾಜ್ಯ ಸರಕಾರಕ್ಕೆ ಸಿಂಹ ಸವಾಲ್
ಮೈಸೂರು, ಡಿಸೆಂಬರ್ 19 : ದಿಡ್ಡಹಳ್ಳಿಯಲ್ಲಿ ಗಿರಿಜನರನ್ನು ಒಕ್ಕಲೆಬ್ಬಿಸುವ ಬದಲು ಪಿ.ಚಿದಂಬರಂ ಹಾಗೂ ಟಾಟಾ ಕಂಪನಿ ಒತ್ತುವರಿ ಮಾಡಿಕೊಂಡಿರುವ ನೂರಾರು ಎಕರೆ ಜಾಗವನ್ನು ಸರ್ಕಾರ ತೆರವುಗೊಳಿಸಲಿ ಎಂದು ಸಂಸದ ಪ್ರತಾಪ್ ಸಿಂಹ ಸವಾಲೆಸೆದಿದ್ದಾರೆ.
ಮಡಿಕೇರಿಯ ಸಿದ್ದಾಪುರ ಸಮೀಪದ ಚೆನ್ನಯ್ಯನಕೋಟೆ ಗ್ರಾಮಪಂಚಾಯಿತಿ ವ್ಯಾಪ್ತಿಗೊಳಪಡುವ ದಿಡ್ಡಿಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿಕೊಂಡು ನೆಲೆಸಿದ್ದ ಸುಮಾರು 577 ಆದಿವಾಸಿ ಕುಟುಂಬಗಳನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದ್ದು, ಇದರ ವಿರುದ್ಧ ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದೆ.
ಈ ಕುರಿತು ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಸಂಸದ ಪ್ರತಾಪ್ಸಿಂಹ, ಮನೆ ನಿರ್ಮಿಸಿಕೊಡಿ ಎಂದು 2736 ಅರ್ಜಿಗಳು ಬಂದಿದ್ದು 1467 ಮನೆಗಳನ್ನು ನಿರ್ಮಿಸಲಾಗಿದೆ. 1177 ಅರ್ಜಿಗಳು ವಜಾಗೊಂಡಿದ್ದು, 62 ಅರ್ಜಿಗಳು ಮಾತ್ರ ಬಾಕಿ ಉಳಿದಿವೆ. ಅರ್ಜಿ ಸಲ್ಲಿಸುವ ಎಲ್ಲರಿಗೂ ಮನೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ದಿಡ್ಡಿಹಳ್ಳಿ ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ಅಲ್ಲಿ ಮನೆ ನಿರ್ಮಿಸಲು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯೇ ಹೇಳಿದರೂ ಕೋರ್ಟ್ ಅನುಮತಿ ನೀಡುವುದಿಲ್ಲ. ದುಬಾರೆಯಲ್ಲಿ 256 ಎಕರೆ, ಟಿಂಬರ್ ಯಾರ್ಡ್ನಲ್ಲಿ 53 ಎಕರೆ ಜಮೀನಿದೆ. ಅಲ್ಲಿ ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಬಹುದು ಎಂದರು.
ಆದರೆ, ಕೆಲವರು ದಿಡ್ಡಿಹಳ್ಳಿಯಲ್ಲಿಯೇ ವಸತಿ ಕಲ್ಪಿಸಿ ಎಂದು ಪಟ್ಟುಹಿಡಿದಿದ್ದಾರೆ. ಇದು ಸಾಧ್ಯವಾಗದ ಮಾತು. ಅದರ ಬದಲು ಸರ್ಕಾರ ನೂರಾರು ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಂಡು ತೆರವುಗೊಳಿಸುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.