ಮೈಸೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳೆಲ್ಲ ಒಂದಾಗಿ ಬನ್ನಿ
ಮೈಸೂರು, ಜು. 3 : ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜುಲೈ 27ರಂದು ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ (1916 - 2015) ಕಾರ್ಯಕ್ರಮವನ್ನು ಉದ್ಘಾಟಿಸಲು ಮೈಸೂರಿಗೆ ಆಗಮಿಸಲಿದ್ದಾರೆ.
ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ರಾಷ್ಟ್ರಪತಿಯವರ ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಗುರುವಾರ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಆದೇಶಿಸಿದರು. ಭದ್ರತೆ, ರಸ್ತೆ ದುರಸ್ತಿ, ಆಂಬ್ಯುಲೆನ್ಸ್ ವ್ಯವಸ್ಥೆ ಕುರಿತು ಶಿಖಾ ಸ್ಪಷ್ಟ ಸೂಚನೆಗಳನ್ನು ನೀಡಿದರು.
ಮೈಸೂರು ವಿಶ್ವವಿದ್ಯಾನಿಲಯವು ಸ್ಥಾಪನೆಯಾಗಿ ನೂರು ವರ್ಷ ತುಂಬುವ ಹಿನ್ನೆಲೆಯಲ್ಲಿ ವರ್ಷಪೂರ್ತಿ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲು ವಿಶ್ವವಿದ್ಯಾನಿಲಯ ಕಾರ್ಯಕ್ರಮವನ್ನು ರೂಪಿಸಿದ್ದು, ಜುಲೈ 27ರಂದು ಮಧ್ಯಾಹ್ನ 3 ಗಂಟೆಗೆ ರಾಷ್ಟ್ರಪತಿಯವರು ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. [ಯದುವೀರ್ ಸ್ನಾತಕೋತ್ತರ ಅಧ್ಯಯನ?]
ಸ್ಥಾಪನೆಯಾಗಿದ್ದು ಎಂದು? : ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್ IV ಅವರ ಆಡಳಿತದ ಕಾಲದಲ್ಲಿ ಜುಲೈ 27, 1916ರಂದು ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಮೈಸೂರು ಮಹಾರಾಜರೇ ಕುಲಪತಿಯಾಗಿದ್ದರೆ, ಎಚ್.ವಿ. ನಂಜುಂಡಯ್ಯ ಅವರು ಉಪಕುಲಪತಿಯಾಗಿದ್ದರು. ನಂತರ, ಸ್ವಾಯತ್ತ ಸಂಸ್ಥೆಯಾದ ನಂತರ 1956ರ ಮಾರ್ಚ್ 3ರಂದು ಯುಜಿಸಿಯಿಂದ ಗ್ರಾಂಟ್ ಪಡೆದಿತ್ತು. ಆದರೆ, ಇದೇ ಸಂದರ್ಭದಲ್ಲಿ ಯುಜಿಸಿ ಗ್ರಾಂಟ್ ಅನ್ನು ನವೀಕರಣ ಮಾಡಿಸದೆ ವಿವಾದದಲ್ಲಿ ಸಿಲುಕಿದೆ. [ಕೆಎಸ್ ಒಯು ಮಾನ್ಯತೆ ರದ್ದು : ಏಕೆ, ಏನು, ಮುಂದೇನು?]
ಭದ್ರತೆ, ರಸ್ತೆ ದುರಸ್ತಿಗೆ ಸೂಚನೆ : ರಾಷ್ಟ್ರಪತಿಗಳಿಗೆ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸುವ ಜೊತೆಯಲ್ಲಿ ಯಾವುದೇ ಅಸುರಕ್ಷತಾ ಘಟನೆಗಳಿಗೆ ಅವಕಾಶ ನೀಡಬಾರದು. ರಾಷ್ಟ್ರಪತಿ ಸಂಚರಿಸುವ ರಸ್ತೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಬೇಕು. ಮೈಸೂರು ಮಹಾನಗರ ಪಾಲಿಕೆ, ಮುಡಾ ಹಾಗೂ ರಾಷ್ಟ್ರೀಯ ಹೆದ್ದಾರಿ 212ಕ್ಕೆ ಸಂಬಂಧಿಸಿದ ಅಧಿಕಾರಿಗಳು ಇದರ ಜವಾಬ್ದಾರಿ ಹೊರಬೇಕು. ರಾಷ್ಟ್ರಪತಿಗಳು ಸಂಚರಿಸುವ ವಾಹನ ಹಾಗೂ ಅವರನ್ನು ಹಿಂಬಾಲಿಸುವ ಭದ್ರತಾ ವಾಹನಗಳ ಸಂಪೂರ್ಣ ತಪಾಸಣೆಯನ್ನು ಪ್ರಾದೇಶಿಕ ಸಾರಿಗೆ ಇಲಾಖೆ ಕೈಗೊಂಡು ಫಿಟ್ನೆಸ್ ವರದಿಯನ್ನು ಶೀಘ್ರ ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಸೂಚಿಸಿದರು.
ಆಹಾರ ತಪಾಸಣೆ, ಪಾರ್ಕಿಂಗ್ ವ್ಯವಸ್ಥೆ : ಸೂಕ್ತ ವ್ಯವಸ್ಥೆಯುಳ್ಳ ಆಂಬುಲೆನ್ಸ್, ತಜ್ಞ ವೈದ್ಯರು ಹಾಗೂ ಸಿಬ್ಬಂದಿಯನ್ನು ಆರೋಗ್ಯ ಇಲಾಖೆ ನಿಯೋಜಿಸಬೇಕು. ರಾಷ್ಟ್ರಪತಿಗಳಿಗೆ ನೀಡುವ ಆಹಾರದ ಸಂಪೂರ್ಣ ತಪಾಸಣೆಯಾಗಬೇಕು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಾಗಬೇಕು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಾಷ್ಟ್ರಪತಿಗಳ ಮೈಸೂರಿನ ಭೇಟಿಯ ವೇಳೆ ಚೆಸ್ಕಾಂ ವತಿಯಿಂದ ನಿರಂತರ ವಿದ್ಯುತ್ ಸರಬರಾಜು ಹಾಗೂ ಭಾರತ ಸಂಚಾರ ನಿಗಮದಿಂದ ದೂರವಾಣಿ ವ್ಯವಸ್ಥೆಯಾಗಬೇಕು. ಅಗ್ನಿಶಾಮಕ ದಳದಿಂದ ಹೆಚ್ಚಿನ ಸಿಬ್ಬಂದಿಗಳನ್ನು ಒದಗಿಸಬೇಕು. ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಲು ಜವಾಬ್ದಾರಿ ವಹಿಸಲಾದ ಅಧಿಕಾರಿಗಳು ಸಮನ್ವಯ ಸಾಧಿಸಲು ಪೊಲೀಸ್ ಇಲಾಖೆ ಹ್ಯಾಂಡ್ಸೆಟ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆದೇಶಿಸಿದರು.
ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ರಂಗಪ್ಪ ಅವರು ಮಾತನಾಡಿ, ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ರಾಷ್ಟ್ರಪತಿಗಳ ಆಪ್ತ ಶಾಖೆಗೆ ಕಳುಹಿಸಿಕೊಡಲಾಗಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಜುಲೈ 27ರಂದು ಮಧ್ಯಾಹ್ನ 3 ಗಂಟೆಗೆ ಶತಮಾನೋತ್ಸವ ಕಾರ್ಯಕಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ರಾಜ್ಯಪಾಲರು ಸೇರಿದಂತೆ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. [2013ರಲ್ಲಿ ಮೈಸೂರಿಗೆ ರಾಷ್ಟ್ರಪತಿ ಭೇಟಿ ನೀಡಿದಾಗ]
ಶತಮಾನೋತ್ಸವ ಸಂಭ್ರಮದ ವಿವರ : ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಸಂಭ್ರಮ ಆಚರಣೆ ಸಂದರ್ಭದಲ್ಲಿ ವಿಶೇಷವಾದ ವೆಬ್ ಸೈಟನ್ನು ರೂಪಿಸಲಾಗಿದ್ದು, ಅದರಲ್ಲಿ ಆಚರಣೆಯ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ಅದನ್ನು ಇಲ್ಲಿ ನೋಡಿರಿ.
ವಿದ್ಯಾರ್ಥಿಗಳೆಲ್ಲ ಒಂದಾಗಿ ಬನ್ನಿ : ದೂರಶಿಕ್ಷಣಕ್ಕೆಂದು, ಉನ್ನತ ವ್ಯಾಸಂಗಕ್ಕೆಂದು ಬಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ, ಮಾಡಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ, ನಾನಾ ವೃತ್ತಿಯಲ್ಲಿ ತೊಡಗಿಕೊಂಡಿರುವವರೆಲ್ಲ ಒಂದಾಗಿ ಬನ್ನಿ. ಅಲ್ಲಿ ಕಳೆದ ಅವಿಸ್ಮರಣೀಯ ಘಳಿಗೆಗಳನ್ನು ಮೆಲುಕು ಹಾಕಿ. ಸಾಧ್ಯವಾದರೆ, ಪುಟ್ಟ ಲೇಖನವನ್ನೂ ಬರೆದು ಕಳಿಸಿ.