ಎಚ್ಡಿಕೆ ತಟ್ಟೇಲಿ ಚಿಕನ್ - ಮಟನ್, ಕಾಂಗ್ರೆಸ್ ಪಾಲಿಗೆ ನೀರ್ ಮಜ್ಜಿಗೆ
ಮೈಸೂರು, ಜೂನ್ 6 : ಮೈತ್ರಿ ಸರಕಾರದಲ್ಲಿ ಉಭಯ ಪಕ್ಷಗಳು ಮದುವೆ ಮನೆಯ ಎಂಜಲು ಎಲೆಯ ಮುಂದೆ ಹೊಡೆದಾಡುವಂಥ ಸ್ಥಿತಿಯಲ್ಲಿವೆ. ಜೆಡಿಎಸ್ ಎಲೆಯಲ್ಲಿ ಚಿಕನ್ - ಮಟನ್, ಬಿರಿಯಾನಿಯಂತಹ ಸ್ವಾದಿಷ್ಟ ಖಾತೆಗಳಿದ್ದರೆ, ಕಾಂಗ್ರೆಸ್ ಗೆ ನೀರು - ಮಜ್ಜಿಗೆ, ಪಾನಕ, ಕೋಸಂಬರಿಯನ್ನು ಬಿಟ್ಟಿದೆ ಎಂದು ನಟ ಜಗ್ಗೇಶ್ ಇಲ್ಲಿ ಹಾಸ್ಯದ ಹೊನಲು ಹರಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರಕಾರದ ಸಚಿವ ಸಂಪುಟ ರಚನೆ ಬಗ್ಗೆ ಕೇಳಿದ ಪ್ರಶ್ನೆಗೆ ಹಾಸ್ಯದ ಧಾಟಿಯಲ್ಲಿ ಪ್ರತಿಕ್ರಿಯಿಸಿದರು. ಆರ್ಭಟಿಸಿದ ಕಾಂಗ್ರೆಸ್ ನಾಯಕರು ದಯನೀಯ ಸ್ಥಿತಿಯಲ್ಲಿ ದೇವೇಗೌಡ, ಕುಮಾರಸ್ವಾಮಿ ಅವರ ಮುಂದೆ ಕೈ ಕಟ್ಟಿ ನಿಂತಿದ್ದಾರೆ. ಅವರನ್ನು ನೋಡಿದಾಗ ಮೀಸೆ ತಿರುವಿದವರೆಲ್ಲಾ ಏನಾದರೂ ಎಂದು ಡಾ. ರಾಜ್ ರ ಸಿನಿಮಾ ಹಾಡು ನೆನಪಾಗುತ್ತದೆ ಎಂದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನೂತನ ಸಚಿವರ ಪಟ್ಟಿ
ಯಾರಪ್ಪನ ಮೇಲೆ ಆಣೆ ಮಾಡಿದ್ದರೋ, ಅವರಪ್ಪನೇ ಬಂದು ಮುಖ್ಯಮಂತ್ರಿ ಮಾಡಿದರು. ಅಲ್ಲದೇ ಬಾವಿಗೆ ಬಿದ್ದಿದ್ದ ಹಾಗೂ ಬಿದ್ದವರು ಅಸ್ತಿತ್ವಕ್ಕೆ ಹೊಡೆದಾಡಲು ಹೆಣಗಾಡುವಂತಾಗಿದೆ ಇಂದಿನ ರಾಜ್ಯ ರಾಜಕಾರಣ ಎಂದು ವ್ಯಂಗ್ಯವಾಡಿದರು.
ಡಿಕೆ ಶಿವಕುಮಾರ್ ಸಿಎಂ ಕುರ್ಚಿ ಮೇಲೆ ಕೂರಬೇಕಿತ್ತು
ಡಿ.ಕೆ.ಶಿವಕುಮಾರ್ ನೋಡಿದ್ರೆ ಅಯ್ಯೋ ಪಾಪ ಅನ್ನಿಸುತ್ತದೆ. ಸರಕಾರ ರಚನೆಗೆ ತನು- ಮನ- ಧನ ಎಲ್ಲವನ್ನೂ ಅರ್ಪಿಸಿದರು. ಈಗ ಒಳಿತು ಮಾಡುವ ಮನುಷ್ಯ ಇರೋದು ಮೂರು ದಿವಸ ಎಂಬ ಹಾಡಂತೆ ಕುಳಿತಿದ್ದಾರೆ ಎಂದು ಲೇವಡಿ ಮಾಡಿದರು. ಆದರೀಗ ಎಲ್ಲ ದಾನ ಮಾಡಿದ ಮೇಲೆ ನಗುತ್ತಿದ್ದರೂ, ಒಳಗೆ ಕೊರಗಿದೆ ಎಂಬ ಭಾವದಲ್ಲಿದ್ದಾರೆ. ನನಗೆ ಅವರು ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತುಕೊಳ್ಳುವುದನ್ನು ನೋಡುವ ಆಸೆ ಇತ್ತು ಎಂದರು.
ಜಯಲಲಿತಾ ಹಾದಿಯಲ್ಲಿ ರಜನೀಕಾಂತ್
ಕಾಳ ತಮಿಳು ಚಿತ್ರ ಪ್ರದರ್ಶನದ ಬಗ್ಗೆ ಮಾತನಾಡಿ, ಕಾವೇರಿ ಬಗ್ಗೆ ಪ್ರಸ್ತಾಪಿಸಿದರೆ ನೊಂದ ಮನಸ್ಸುಗಳನ್ನು ಕೆರಳಲ್ಲಿದ್ದು ಹೊಟ್ಟೆಪಾಡಿಗಾಗಿ, ರಾಜಕೀಯಕ್ಕಾಗಿ ಕಾವೇರಿ ವಿವಾದವನ್ನು ಕೆಣಕುವುದು ತಪ್ಪು. ಅಲ್ಲದೆ ತಮಿಳುನಾಡಿನಲ್ಲಿ ಕಮಲ ಹಾಸನ್, ರಜನೀಕಾಂತ್ ಅವರು ಜಯಲಲಿತಾ ಹಾದಿಯನ್ನು ಅನುಸರಿಸುತ್ತಿದ್ದಾರೆ. ಅಲ್ಲಿನ ರೈತರ ಮನಸ್ಸನ್ನು ಗೆಲ್ಲುವ ಹಿನ್ನೆಲೆಯಲ್ಲಿ ಕಾವೇರಿ ಬಗ್ಗೆ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ ಎಂದರು.
ರಜನೀ ಟ್ವಿಟ್ಟರ್ ಖಾತೆ ಅನ್ ಫಾಲೋ
ಕನ್ನಡಿಗರ ಮಕ್ಕಳಾಗಿ ನಾವು ಹೇಳುತ್ತಿದ್ದೇವೆ ಕಾವೇರಿಯೂ ನಮ್ಮದೇ. ಕಾಳ ಚಿತ್ರ ಬಿಡುಗಡೆಯಾದರೂ ಸಮಸ್ಯೆ, ಆಗದೇ ಹೋದರೂ ಸಮಸ್ಯೆ. ಎರಡು ರೀತಿಯಲ್ಲೂ ಸಂದಿಗ್ಧ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ರಜನೀಕಾಂತ್ ಅವರ ಟ್ವಿಟ್ಟರ್ ಮೂರು ತಿಂಗಳಿನಿಂದಲೂ ಅನ್ ಫಾಲೋ ಮಾಡುತ್ತಿರುವೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಪರ ಪ್ರಚಾರ
ದಕ್ಷಿಣ ಪದವೀಧರ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿರಂಜನ್ ಮೂರ್ತಿ ಪರ ಜಗ್ಗೇಶ್ ಮತ ಯಾಚಿಸಿದರು. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಟಾಚಾರವನ್ನು ತಳಹಂತದಿಂದಲೇ ನಿರ್ಮೂಲನೆಗೊಳಿಸುವ ಪ್ರಧಾನಿ ಮೋದಿ ಅವರ ಉದ್ದೇಶದಂತೆ ಪಕ್ಷ ಹಾಗೂ ಸ್ವತಃ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಅಲ್ಲದೆ ಮುಂದಿನ ವರ್ಷ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಮೋದಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಪಕ್ಷದಿಂದ ತಾಲೀಮು ಶುರುವಾಗಿದೆ. ಅವರ ಜನಪರ ಕಾರ್ಯಕ್ರಮಗಳು ಜನ ಮಾನಸದಲ್ಲಿ ಉಳಿದು, ಮುಂದಿನ ಅವಧಿಗೂ ಅವರೇ ಪ್ರಧಾನಿಯಾಗಬೇಕು. ಮೋದಿಯವರ ಮಣಿಸಲು ಎಲ್ಲ ಪಕ್ಷಗಳು ವಾಮ ಮಾರ್ಗ ಅನುಸರಿಸುತ್ತಿವೆ. ಆದರೆ ವಿರೋಧಿಗಳ ನಡೆ ಯಶಸ್ವಿಯಾಗುವುದಿಲ್ಲ ಎಂದು ಭವಿಷ್ಯ ನುಡಿದರು.