ಜೆಡಿಎಸ್ ನ ಎಚ್ ವಿಶ್ವನಾಥ್ ಪರ ಮಗ ಪೂರ್ವಜ್ ಗಾನ ಬಜಾನಾ!
ಮೈಸೂರು, ಏಪ್ರಿಲ್ 12: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ಭರಾಟೆ ತಾರಕಕ್ಕೆ ಏರತೊಡಗಿದೆ. ಅಭ್ಯರ್ಥಿಗಳ ಪರ ಹೆಂಡತಿ ಅಥವಾ ಗಂಡ, ಮಕ್ಕಳು ಪ್ರಚಾರ ನಡೆಸಲು, ಮತ ಯಾಚಿಸಲು ಮತದಾರರ ಮನೆ ಮುಂದೆ ಬರತೊಡಗಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಈಗಾಗಲೇ ಈ ತಂತ್ರವನ್ನು ಜೆಡಿಎಸ್ ಆರಂಭಿಸಿದ್ದು, ಅತ್ತ ಮೇಲುಕೋಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಪರವಾಗಿ ಪತ್ನಿ ಮತ್ತು ಮಗ ಮತಪ್ರಚಾರ ನಡೆಸುತ್ತಿದ್ದರೆ, ಇತ್ತ ಹುಣಸೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಅವರ ಮಗ ಖ್ಯಾತ ಸುಗಮ ಸಂಗೀತ ಗಾಯಕ ಪೂರ್ವಜ್ ಗಾಯನದ ಮೂಲಕ ಪ್ರಚಾರ ನಡೆಸಲು ಮುಂದಾಗಿದ್ದಾರೆ.
ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿರುವ ಎಚ್.ವಿಶ್ವನಾಥ್ ಮತದಾರರ ಮುಂದೆ ನಿಂತು ಮತ ನೀಡುವಂತೆ ಈಗಾಗಲೇ ಮನವಿ ಮಾಡಿಕೊಳ್ಳುತ್ತಿದ್ದು, ಪಕ್ಷದ ಮುಖಂಡರ, ವಿವಿಧ ಸಮುದಾಯಗಳ ನಾಯಕರ ಸಭೆಯನ್ನು ನಡೆಸಿ, ಮತ ನೀಡುವಂತೆ ಕೋರಿಕೊಂಡಿದ್ದಾರೆ. ಇದೆಲ್ಲದರ ನಡುವೆ ಸ್ವಲ್ಪ ವಿಭಿನ್ನವಾಗಿ ಸಂಗೀತದ ಮೂಲಕ ಪ್ರಚಾರ ನಡೆಸಲು ಪೂರ್ವಜ್ ತೀರ್ಮಾನಿಸಿದ್ದು, ಆ ಮೂಲಕ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಅವರನ್ನು ಗುಣಗಾನ ಮಾಡುವ ಹಾಡು
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗುಣಗಾನ ಮಾಡುವ ಹಾಡನ್ನು ರಚಿಸಲಾಗಿದ್ದು, ಆ ಹಾಡನ್ನು ತಾವೇ ಸ್ವತಃ ರಚಿಸಿರುವುದಲ್ಲದೇ, ಅದಕ್ಕೆ ಧ್ವನಿ ನೀಡಿದ್ದಾರೆ. ಇದೀಗ ಆ ಹಾಡನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದು, ಬಳಿಕ ಪ್ರಚಾರಕ್ಕೂ ಬಳಸುವ ಆಲೋಚನೆ ಇದೆ ಎನ್ನಲಾಗುತ್ತಿದೆ. ಇವರಿಗೆ ನಿಶಾ ಪೂರ್ವಜ್ ಮತ್ತು ನವನೀತ್ ಕೃಷ್ಣ ಸಾಥ್ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.
ವೋಟ್ ಫಾರ್ ಬೆಟರ್ ಹುಣಸೂರ್ ಫೇಸ್ ಬುಕ್ ಖಾತೆ
ವೋಟ್ ಫಾರ್ ಬೆಟರ್ ಹುಣಸೂರ್ ಎಂಬ ಶೀರ್ಷಿಕೆಯಡಿ ಫೇಸ್ ಬುಕ್ ಖಾತೆಯಲ್ಲಿ ತಂದೆಯ ಫೋಟೊ ಹಾಕಿಕೊಂಡು ಪ್ರಚಾರ ಶುರು ಮಾಡಿರುವ ಪೂರ್ವಜ್ ಅವರು ಎಚ್.ಡಿ.ಕುಮಾರಸ್ವಾಮಿ ಕುರಿತು 4 ನಿಮಿಷ 29 ಸೆಕೆಂಡುಗಳ ಆಡಿಯೋವೊಂದನ್ನು ಹೊರತಂದಿದ್ದಾರೆ.
ಎಚ್.ಡಿ.ದೇವೇಗೌಡರ ಕುರಿತು ಟಪ್ಪಾಂಗುಚ್ಚಿ ಶೈಲಿಯ ಹಾಡು
ಇನ್ನು ಬಲ್ಲ ಮೂಲಗಳ ಪ್ರಕಾರ ಏಪ್ರಿಲ್ 20ರೊಳಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುರಿತು ಇದೇ ರೀತಿಯ ಆಡಿಯೋ ಹೊರತರಲಿದ್ದಾರೆ ಎನ್ನಲಾಗಿದೆ. ಇದು ಟಪಾಂಗುಚ್ಚಿ ಶೈಲಿಯಲ್ಲಿ ಇದೆ ಎನ್ನಲಾಗಿದೆ. ಅದು ಹೊರಗೆ ಬಂದ ಮೇಲೆ ಯಾವ ರೀತಿಯ ಪ್ರತಿಕ್ರಿಯೆ ಪಡೆಯುತ್ತದೋ ಕಾದು ನೋಡಬೇಕಿದೆ.
ಯುವಜನರನ್ನು ತಲುಪಲು ಪ್ರಯತ್ನ
ಏಪ್ರಿಲ್ 15ರಂದು ಈ ಆಡಿಯೋವನ್ನು ಫೇಸ್ ಬುಕ್, ವಾಟ್ಸ್ ಅಪ್ ಹಾಗೂ ಯೂಟ್ಯೂಬ್ ಗೆ ಅಪ್ ಲೋಡ್ ಮಾಡಲಿದ್ದು, ಯುವಜನರನ್ನು ತಲುಪಲು ಇದೊಂದು ಸಣ್ಣ ಪ್ರಯತ್ನ ಎನ್ನುತ್ತಿದ್ದಾರೆ ಪೂರ್ವಜ್ ವಿಶ್ವನಾಥ್. ಆದರೆ ಚುನಾವಣೆಗೆ ಯಾವ ರೀತಿಯಲ್ಲಿ ಸಹಾಯವಾಗುತ್ತದೆ ಎಂಬುದು ಮಾತ್ರ ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.