ಕಬಿನಿಯಲ್ಲಿ ಕರ್ತವ್ಯನಿರತ ಪೇದೆ ಹೃದಯಾಘಾತದಿಂದ ಸಾವು
ಎಚ್.ಡಿ.ಕೋಟೆ, ಸೆಪ್ಟೆಂಬರ್ 22: ತಾಲೂಕಿನ ಕಬಿನಿ ಜಲಾಶಯಕ್ಕೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮತ್ತೊಬ್ಬ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಪೇದೆಯೊಬ್ಬರು ಮೃತಪಟ್ಟಿದ್ದರು. ಇದೀಗ ಮಂಚಣ್ಣ(42) ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಡುತ್ತಿದ್ದು, ರೈತರು ಮತ್ತು ಕನ್ನಡಪರ ಸಂಘಟನೆಗಳು ಜಲಾಶಯಕ್ಕೆ ಮುತ್ತಿಗೆ ಹಾಕಬಹುದು ಎಂಬ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು, ಅದರಂತೆ ತಾಲೂಕಿನ ಕಬಿನಿ ಜಲಾಶಯದ ಬಂದೋಬಸ್ತ್ ಗಾಗಿ ಬೈಲುಕುಪ್ಪೆ ಠಾಣೆಯಿಂದ ಮುಖ್ಯಪೇದೆ ಮಂಚಣ್ಣ ಅವರನ್ನು ಕೆಲ ದಿನಗಳ ಹಿಂದೆ ನಿಯೋಜನೆ ಮಾಡಲಾಗಿತ್ತು.[ಕಬಿನಿ ಬಂದೋಬಸ್ತ್ ಗೆ ಬಂದಿದ್ದ ಮುಖ್ಯಪೇದೆ ಸಾವು]
ಬುಧವಾರ ಬೆಳಗ್ಗೆ ಎಂದಿನಂತೆ ತಿಂಡಿ ತಿಂದು, ಸ್ವಲ್ಪ ಆಯಾಸವಾಗುತ್ತಿದೆ ಎಂದು ಕರ್ತವ್ಯಕ್ಕೆ ಹೋಗದೆ ವಿಶ್ರಾಂತಿ ತೆಗೆದುಕೊಂಡು ಮಲಗಿದ್ದಾರೆ. ಹಾಗೆಯೇ ಅವರು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ 12.30ರ ಸಮಯದಲ್ಲಿ ಸಹ ಸಿಬ್ಬಂದಿ ಎಚ್ಚರಿಸಲು ಹೋದಾಗ ಮೃತಪಟ್ಟಿರುವುದು ದೃಢಪಟ್ಟಿದೆ.
ಮೂಲತಃ ಬಿಳಿಕೆರೆ ಗ್ರಾಮದವರಾದ ಮಂಚಣ್ಣ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಾಸುದಾರರಿಗೆ ಒಪ್ಪಿಸಲಾಗಿದೆ. ಎಸ್ಪಿ ರವಿ ಡಿ. ಚನ್ನಣ್ಣನವರ್ ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಎಎಸ್ ಪಿ ವಿಷ್ಣುವರ್ಧನ್, ಹರೀಶ್ ಪಾಂಡೆ, ಸಿಪಿಐ ಹರೀಶ್ ಕುಮಾರ್, ಎಸ್ಐ ಅಶೋಕ್, ಬಸವರಾಜು, ಸುರೇಶ್ ಕುಮಾರ್ ಇದ್ದರು.[ಮಂಡ್ಯದಲ್ಲಿ ಪ್ರತಿಭಟನೆ: ಕಬಿನಿ ಜಲಾಶಯಕ್ಕೆ ಪೊಲೀಸ್ ಭದ್ರತೆ]
ಸೆ.4 ರಂದು ಕಬಿನಿ ಜಲಾಶಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಆರ್ ಬಿ ಮುಖ್ಯಪೇದೆ ವಿಜಯಪುರ ಮೂಲದ ಎಂ. ಅಪ್ಪಾ ಸಾಹೇಬ್ ಭಜಂತ್ರಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದನ್ನು ಸ್ಮರಿಸಬಹುದು.