ಹುತಾತ್ಮತರಾದ ಪೊಲೀಸರಿಗೆ ಮೈಸೂರಿನಲ್ಲಿ ಗೌರವಾರ್ಪಣೆ
ಮೈಸೂರು, ಅಕ್ಟೋಬರ್ 21 : ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕರು, ಮೈಸೂರುನಗರ, ಜಿಲ್ಲೆ ಕರ್ನಾಟಕ ಪೊಲೀಸ್ ಅಕಾಡೆಮಿ ಕೆ.ಎಸ್.ಆರ್.ಪಿ ಮತ್ತು ಕೆ.ಎ.ಆರ್.ಪಿ ಘಟಕಗಳಿಂದ ಮೈಸೂರು ಜಿಲ್ಲಾ ಪೊಲೀಸ್ ಕಛೇರಿ ಪಕ್ಕದಲ್ಲಿರುವ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ಶನಿವಾರ ಪೊಲೀಸ್ ಹುತಾತ್ಮರ ದಿನಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಇಂಡಿಯನ್ ಏರ್ ಪೋರ್ಸ್ ಏರ್ ಕಮಾಂಡರ್ ಸುನೀಲ್ ಜೋಸ್ ಪೊಲೀಸ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, 1959ರ ಅಕ್ಟೋಬರ್ 21ರಿಂದಲೇ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ. ಅಂದು ಭಾರತ ಮತ್ತು ಚೀನಾದ ಗಡಿ ಪ್ರದೇಶದಲ್ಲಿರುವ ಲಡಾಕ್ ಪ್ರದೇಶದ ಅಕ್ಸಾಯ್ ಎಂಬಲ್ಲಿ ಸಿ.ಆರ್.ಪಿ.ಎಫ್ ಪಡೆಯ ಡಿ.ಎಸ್.ಪಿ ಕರಣ್ ಸಿಂಗ್ ಮತ್ತು ಅವರ ಸಿಬ್ಬಂದಿಗಳು ಗಸ್ತು ಕಾರ್ಯದಲ್ಲಿರುವಾಗ ಚೈನಾ ಪಡೆ ಇವರ ಮೇಲೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿತು.
ಆದರೆ ಇದಾವುದಕ್ಕೂ ಜಗ್ಗದ ಸೈನಿಕರು, ತಮ್ಮ ಕಡೆ ಉಸಿರಿನ ತನಕ ಹೋರಾಟ ನಡೆಸಿ ವೀರ ಮರಣವನ್ನಪ್ಪಿದರು. ಹಲವರು ಗಾಯಗೊಂಡರು. ಈ ದಿನದ ನೆನಪಿಗಾಗಿ ಸ್ಮಾರಕ ನಿರ್ಮಿಸಲಾಯಿತು. ಹುತಾತ್ಮ ದಿನವನ್ನೂ ಆಚರಿಸಲಾಯಿತು. ಯೋಧರು ಪೋಲಿಸರ ಸೇವೆ ಅವಿಸ್ಮರಣೀಯ. ಅದರಂತೆ ಎಲ್ಲೆಡೆಯೂ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಯೋಧರು ಮತ್ತು ಪೊಲೀಸರು ತಮ್ಮ ಜೀವನವನ್ನು ಸಾರ್ವಜನಿಕ ಸೇವೆಗಳಿಗೆ ಶ್ರೀಗಂಧದಂತೆ ತೇಯುತ್ತಾರೆ.
ಅಂತಹವರು ಮರಣವನ್ನಪ್ಪಿದರೆ ಅವರನ್ನು ಸ್ಮರಿಸುವ ಕೆಲಸ ನಮ್ಮಿಂದಾಗಬೇಕು. ಅದಕ್ಕಾಗಿ ಮರಣವನ್ನಪ್ಪಿದ ನಮ್ಮ ಪೊಲೀಸರನ್ನು ಸ್ಮರಿಸಲೋಸುಗ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಿ, ಅವರಿಗೆ ಗೌರವ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ಇದೇ ವೇಳೆ ಪೊಲೀಸ್ ಸಿಬ್ಬಂದಿ ಮೂರು ಸುತ್ತು ಕುಶಾಲು ತೋಪು ಸಿಡಿಸಿ ಹುತಾತ್ಮರಿಗೆ ಗೌರವ ಸೂಚಿಸಿದರು. ಈ ಸಂದರ್ಭ ನಾಡಗೀತೆ ಹಾಗೂ ರಾಷ್ಟ್ರಗೀತೆಗಳು ಮೊಳಗಿದವು.