ಚಾಮುಂಡೇಶ್ವರಿಯಲ್ಲಿ ಜೆಡಿಎಸ್-ಕೈ ಕಾರ್ಯಕರ್ತರ ಜಟಾಪಟಿ, ಲಾಠಿ ಚಾರ್ಜ್
ಮೈಸೂರು, ಏಪ್ರಿಲ್ 20: ಮೈಸೂರಿನಲ್ಲಿ ಶುಕ್ರವಾರ ಲಾಠಿಚಾರ್ಜ್ ಆಗಿದೆ. ಜಿದ್ದಾಜಿದ್ದಿಗೆ ಸಜ್ಜಾದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಂದು ಕಡೆ ಕುಮಾರಸ್ವಾಮಿಗೆ ಜೈಕಾರ, ಮತ್ತೊಂದು ಕಡೆ ಸಿದ್ದರಾಮಯ್ಯಗೆ ಜೈಕಾರ ಎಂದು ಪೈಪೋಟಿ ಮೇಲೆ ಕೂಗಾಟ ನಡೆಸಿದ್ದರಿಂದ ಪೊಲೀಸರು ಹೈರಾಣ ಆಗಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಂದು ನಾಮಪತ್ರ ಸಲ್ಲಿಸುವ ವೇಳೆ, ಕೋಟೆ ಆಂಜನೇಯ ದೇವಸ್ಥಾನದೆದುರು ರಣಾಂಗಣವಾಗಿ ಮಾರ್ಪಟ್ಟಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ನ ಅಭ್ಯರ್ಥಿ ಜಿ.ಟಿ.ದೇವೇಗೌಡ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾರ್ಯಕರ್ತರ ನಡುವೆ ಜಟಾಪಟಿ ಏರ್ಪಟ್ಟಿತು.
ನಾಮಪತ್ರ ಸಲ್ಲಿಕೆಗೂ ಮುನ್ನ ಕುಂಕುಮವಿಟ್ಟು ಸಿದ್ದರಾಮಯ್ಯ ಸಂವಾದ!
ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೆರೆದಿದ್ದರು. ಇದೇ ವೇಳೆ ಜೆಡಿಎಸ್ ಕಾರ್ಯಕರ್ತರೂ ಮೆರವಣಿಗೆಯಲ್ಲಿ ಸಾಗಿ ಬಂದರು. ಎರಡೂ ಪಕ್ಷಗಳ ಕಾರ್ಯಕರ್ತರು ಮುಖಾಮುಖಿಯಾದರು. ಬಾವುಟಗಳನ್ನು ಹಿಡಿದು ಪರಸ್ಪರ ಘೋಷಣೆಗಳನ್ನು ಕೂಗಲು ಶುರುಮಾಡಿದರು. ಈ ವೇಳೆ ಬಿಗುವಿನ ವಾತಾವರಣ ಉಂಟಾಯಿತು.
ಕಾಂಗ್ರೆಸ್ ಕಾರ್ಯಕರ್ತರನ್ನು ನಿವಾರಿಸಲು ಸಾಧ್ಯವಾಗದ ಕಾರಣ 'ಕೈ' ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಲಾಗಿದೆ. ಜೆಡಿಎಸ್ ಕಾರ್ಯಕರ್ತರ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಬಾವುಟವನ್ನು ತೋರಿಸಿ, ಕುಣಿದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಯತ್ನಿಸಿದ್ದಾರೆ. ಹೆಚ್ಚುವರಿ ಪೊಲೀಸರನ್ನು ಕೂಡ ಕರೆಸಿಕೊಳ್ಳಲಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಸೇರಿದ್ದಾರೆ. ಏಕೆಂದರೆ ಮಧ್ಯಾಹ್ನ ಎರಡು ಗಂಟೆಗೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ನಾಮಪತ್ರ ಸಲ್ಲಿಸುತ್ತಾರೆ ಎಂಬ ಸುದ್ದಿಯಾಗಿದೆ. ಆದರೆ ನಿಗದಿತವಾದ ಸಮಯಕ್ಕೂ ಮುಂಚೆಯೇ ಕಾರ್ಯಕರ್ತರು ಬಂದ ಕಾರಣ ಇಂಥ ಸನ್ನಿವೇಶ ಸೃಷ್ಟಿಯಾಗಿದೆ.
ಕೆಲ ಕಾಲ ಪೊಲೀಸರಿಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತಿನ ಚಕಮಕಿ ನಡೆದಿದ್ದು, ಸಿದ್ದರಾಮಯ್ಯ ಭಾವಚಿತ್ರ ಹಿಡಿದು ಕೋಟೆ ಅರಮನೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಕುಣಿದಿದ್ದಾರೆ.