ಮೈಸೂರಿನ ಕೆಎಸ್ಆರ್ ಪಿ ಮೈದಾನದಲ್ಲಿ ಶ್ವಾನಗಳ ಪ್ರದರ್ಶನ
ಮೈಸೂರು, ಡಿಸೆಂಬರ್. 22 : 60ನೇ ಅಖಿಲ ಭಾರತ ಪೊಲೀಸ್ ಕರ್ತವ್ಯಕೂಟದ ಅಂಗವಾಗಿ ಬುಧವಾರ ಮೈಸೂರಿನ ಕೆಎಸ್ಆರ್ ಪಿ ಮೈದಾನದಲ್ಲಿ ಶ್ವಾನದಳ ಪ್ರದರ್ಶನವನ್ನು ನಡೆಯಿತು.
ಶ್ವಾನದಳ ಪ್ರದರ್ಶನವನ್ನು ಎಡಿಜಿಪಿ ಭಾಸ್ಕರ್ ರಾವ್ ಉದ್ಘಾಟಿಸಿದರು. ಅಪರಾಧ ಪತ್ತೆ ಹಚ್ಚುವಲ್ಲಿ ಶ್ವಾನಗಳ ನೈಪುಣ್ಯತೆ ಪರೀಕ್ಷೆ ಹಿನ್ನೆಲೆಯಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ದೆಹಲಿ ಪೊಲೀಸ್, ಇಂಡೋ-ಪಾಕ್, ಇಂಡೋ- ನೇಪಾಳ್ ಗಡಿ ಭದ್ರತಾ ಪಡೆ, ಛತ್ತೀಸ್ ಗಢ, ಪಂಜಾಬ್, ಹರ್ಯಾಣ ಸೇರಿದಂತೆ ವಿವಿಧ ರಾಜ್ಯಗಳ 155 ಶ್ವಾನಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಬಾಂಬ್ ಪತ್ತೆ ಹಚ್ಚುವುದು, ನಕ್ಸಲೈಟ್ ಶಿಬಿರಗಳು, ಡ್ರಗ್ ಮಾಫಿಯಾ ಮತ್ತು ಆರೋಪಿಗಳನ್ನು ಪತ್ತೆಹಚ್ಚುವ ಸ್ಪರ್ಧೆಯನ್ನು ಈ ಪ್ರದರ್ಶನದಲ್ಲಿ ಏರ್ಪಡಿಸಲಾಗಿದೆ. ಪೊಲೀಸ್ ಶ್ವಾನಗಳು ಯಾವ ರೀತಿ ಆದೇಶಗಳನ್ನು ಪಾಲಿಸುತ್ತವೆ ಎಂಬುದನ್ನು ನೋಡಿ ಪ್ರಶಸ್ತಿ ನೀಡಲಾಗುವುದು.
ಛತ್ತೀಸ್ ಗಢದಲ್ಲಿ ಇತ್ತೀಚಿಗೆ ನಕ್ಸಲೈಟ್ ಗುಂಪೊಂದನ್ನು ಪತ್ತೆಹಚ್ಚಿರುವ ಶ್ವಾನವೊಂದು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಎಲ್ಲರ ಕೇಂದ್ರಬಿಂದುವಾಗಿದೆ. ಯೋಧರನ್ನು ಸಾಯಿಸಲು ಸಿದ್ಧಪಡಿಸಿದ್ದ ಸುಮಾರು 150 ಬಾಂಬ್ ಗಳನ್ನು ಈ ಶ್ವಾನ ಶೋಧಿಸಿತ್ತು.
ಇದರಿಂದಾಗಿ ದೊಡ್ಡ ಅನಾಹುತವೊಂದು ನಡೆಯದಂತೆ ತಪ್ಪಿಸಿತ್ತು. ಈ ಶ್ವಾನ ಬೆಂಗಳೂರು ಮೂಲದ್ದು, ಮತ್ತು ಇದರ ತರಬೇತುದಾರ ಹಾವೇರಿಯವರು ಎನ್ನುವುದು ವಿಶೇಷ.