ಹುಣಸೂರು: ಕರ್ತವ್ಯ ನಿರತ ಪೊಲೀಸ್ ಪೇದೆ ಸಾವು
ಮೈಸೂರು, ಜನವರಿ,09: ಈದ್ ಮಿಲಾದ್ ಆಚರಣೆ ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಂದೋಬಸ್ತ್ ಗಾಗಿ ಆಗಮಿಸಿದ್ದ ಪೊಲೀಸ್ ಮುಖ್ಯ ಪೇದೆಯೊಬ್ಬರು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ಬಿಳಿಕೆರೆ ಹೋಬಳಿ ಅಸ್ವಾಳ್ ಗ್ರಾಮದ ಬೊಮ್ಮರಸೇಗೌಡ (55) ಮೃತ ಪಟ್ಟ ಮುಖ್ಯಪೇದೆ. ಹೃದಯಾಘಾತವಾದ ಎಎಸ್ಐ ಕಾಗಲವಾಡಿ ಬಸವಣ್ಣ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಂಡಿದ್ದಾರೆ.[ಸಂಚಾರ ನಿಯಮ ಮುರಿದು ಪೊಲೀಸರಿಗೆ ಧಮ್ಕಿ ಹಾಕಿದ್ರೆ ಜೈಲೂಟ!]
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅಸ್ವಾಳ್ ಗ್ರಾಮದವರಾದ ಬೊಮ್ಮರಸೇಗೌಡ ಬೆಟ್ಟದಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈದ್-ಮಿಲಾದ್ ಅಂಗವಾಗಿ ಹುಣಸೂರಿನಲ್ಲಿ ಬಂದೋಬಸ್ತ್ ಕಾರ್ಯಕ್ಕೆ ಬೊಮ್ಮರಸೇಗೌಡ ಅವರನ್ನು ನಿಯೋಜಿಸಲಾಗಿತ್ತು. ಆದರೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತೀವ್ರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.[ಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೆ ಹೊಸ ಆಪ್]
ಅಂತ್ಯಕ್ರಿಯೆ: ಬೊಮ್ಮರಸೇಗೌಡರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಎಎಸ್ ಪಿಗಳಾದ ಕಲಾಕೃಷ್ಣಮೂರ್ತಿ, ಹರೀಶ್ ಪಾಂಡೆ, ವೃತ್ತ ನಿರೀಕ್ಷಕ ಧರ್ಮೇಂದ್ರ, ಪಿಎಸ್ಐಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.