ಸಂಸದ ಪ್ರತಾಪ್ ಸಿಂಹ ಜನ್ಮದಿನಕ್ಕೆ ರಕ್ತದಿಂದ ಕವಿತೆ ಬರೆದ ಅಭಿಮಾನಿ
ಮೈಸೂರು, ಜೂನ್ 22: ವಿಶ್ವಯೋಗ ದಿನಾಚರಣೆಯಂದು ಜನ್ಮದಿನ ಆಚರಿಸಿಕೊಂಡ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಅಭಿಮಾನಿಯೊಬ್ಬರು ರಕ್ತದಲ್ಲಿ ಕವಿತೆ ಬರೆದು ಅಭಿಮಾನ ತೋರಿದ್ದಾರೆ. ಸಂದೇಶ್ ಎಂಬುವರು ರಕ್ತದಲ್ಲಿ ಕವಿತೆ ಬರೆದ ಅಭಿಮಾನಿ. ಪ್ರತಾಪ್ ಸಿಂಹ ಅವರು ನಾಲ್ಕು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಅವರು ಕವಿತೆ ಮೂಲಕ ಬರೆದು ವರ್ಣಿಸಿದ್ದು ವಿಶೇಷವಾಗಿದೆ.
ಈ ಸಂಬಂಧ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿ ಬಳಗ ನಗರದ ಎನ್.ಟಿ.ಎಂ.ಎಸ್ ಶಾಲೆ ಮಕ್ಕಳಿಗೆ ಪುಸ್ತಕ ವಿತರಿಸಿತು.
ಮೋದಿಯನ್ನು ದ್ವೇಷಿಸುವ ಬದಲು ಅವರ ಕೆಲಸವನ್ನು ಪ್ರೀತಿಸಿ: ಭೈರಪ್ಪ
ಬಿಜೆಪಿ ಯುವ ಮೋರ್ಚಾದ ಸ್ವಚ್ಛ ಭಾರತ ಅಭಿಯಾನದ ಸಂಚಾಲಕರಾದ ರಾಕೇಶ್ ಭಟ್ ಮಾತನಾಡಿ, ಪ್ರತಾಪ್ ಸಿಂಹ ಅವರು ಅಭಿವೃದ್ಧಿ ಜೊತೆ ಬಡ ರೋಗಿಗಳಿಗೆ ಕೇಂದ್ರ ಸರಕಾರದ ಸಹಾಯಧನ ದೊರಕಿಸಿಕೊಟ್ಟಿದ್ದಾರೆ. ಯುವ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಸ್ವಚ್ಛ ಭಾರತ-ಸ್ವಚ್ಛ ಕರ್ನಾಟಕ ಅಭಿಯಾನಗಳನ್ನು ಹಮ್ಮಿಕೊಂಡು ಜನ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸಂಸದರಾಗಿ 4 ವರ್ಷಗಳಲ್ಲಿ ರಸ್ತೆ ಅಭಿವೃದ್ಧಿ, ಹೊಸ ರೈಲುಗಳು, ಜನೌಷಧ ಕೇಂದ್ರಗಳು, ಬಹು ವರ್ಷಗಳಿಂದ ಬಾಕಿ ಇದ್ದ ಜೋಡಿ ರೈಲು ಮಾರ್ಗ, ಪಾಸ್ ಪೋರ್ಟ್ ಸೇವಾ ಕೇಂದ್ರ, ಹೊರವರ್ತುಲ ರಸ್ತೆ, ಮೈಸೂರು-ಕುಶಾಲನಗರ ರೈಲು ಮಾರ್ಗ ಸಮೀಕ್ಷೆ, ತಂಬಾಕು ಮಂಡಳಿ ಸಮಸ್ಯೆ ಸೇರಿದಂತೆ ಅನೇಕ ಗುರುತರವಾದ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಯಾವುದೇ ಭ್ರಷ್ಟಾಚಾರ ಮಾಡದೆ ಪ್ರತಾಪ್ ಸಿಂಹ ಜನ ಮೆಚ್ಚುಗೆ ಗಳಿಸಿದ್ದಾರೆ. ಇದರ ಜೊತೆಗೆ ಪತ್ರಿಕಾ ಅಂಕಣಕಾರರಾಗಿಯೂ ಜನರಿಗೆ ಹತ್ತಿರವಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕುಮಾರ್ ಗೌಡ, ಸಂದೇಶ, ಶರ್ಮನ್, ಜಯಸಿಂಹ, ರಂಗನಾಥ್, ಅರುಣ್, ದೀಪಕ್ ಸೇರಿದಂತೆ ಹಲವರಿದ್ದರು.