ಕೆಎಸ್ ಭಗವಾನ್ ಹತ್ಯೆಗೆ ಕೊಳ್ಳೇಗಾಲ ಕಾಡಲ್ಲಿ ತರಬೇತಿಯೂ ಮುಗಿದಿತ್ತು!
ಮೈಸೂರು, ಜೂನ್ 25 : ನಗರದ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರ ಹತ್ಯೆಗೆ ಆಯ್ಕೆ ಮಾಡಲಾಗಿದ್ದ ಹಂತಕನಿಗೆ ಕೊಳ್ಳೇಗಾಲ ಸಮೀಪದ ಕಾಡಿನಲ್ಲಿ 1 ತಿಂಗಳು ತರಬೇತಿ ನೀಡಿದ್ದ ಆಘಾತಕಾರಿ ವಿಚಾರ ಇದೀಗ ಪೊಲೀಸರ ವಿಚಾರಣೆ ವೇಳೆ ಹೊರಬಿದ್ದಿದೆ.
ಹಿಂದೂಪರ ಸಂಘಟನೆಯ ಮದ್ದೂರಿನ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಎಂಬಾತನೇ ಭಗವಾನ್ ಹತ್ಯೆಗೆ ಅನಿಲ್ ಎಂಬ ಯುವಕನಿಗೆ ಸುಪಾರಿ ನೀಡಿದ್ದ ಎಂಬುದು ಈಗ ಬಹಿರಂಗಗೊಂಡಿದೆ. ಅನಿಲ್ ನನ್ನು ಭೇಟಿಯಾಗಿದ್ದ ಹೊಟ್ಟೆ ಮಂಜ, ಭಗವಾನ್ ಅವರನ್ನು ಕೊಲೆ ಮಾಡುವ ವಿಚಾರವಾಗಿ ಮನವೊಲಿಸಿ ಒಪ್ಪಿಸಿದ್ದಾನೆ.
ಗೌರಿ ಹತ್ಯೆ ಆರೋಪಿಯಿಂದ ಮತ್ತೊಂದು ಸ್ಫೋಟಕ ಮಾಹಿತಿ ಹೊರಕ್ಕೆ
ಆ ಬಳಿಕ ಆತನಿಗೆ ಪಿಸ್ತೂಲ್ ಬಳಸುವುದರ ತರಬೇತಿ ಕೊಡಿಸಲು ಪರಿಚಿತರ ಸಹಾಯದೊಂದಿಗೆ ಕೊಳ್ಳೇಗಾಲ ಬಳಿಯ ಕಾಡಿಗೆ ಕರೆದೊಯ್ದಿದ್ದಾನೆ. ಅಲ್ಲಿ ಒಂದು ತಿಂಗಳ ಕಾಲ ಪಿಸ್ತೂಲ್ ಬಳಕೆ ಬಗ್ಗೆ ತರಬೇತಿ ಕೊಡಿಸಿ, ವಾಪಸ್ ಕರೆ ತಂದಿದ್ದಾನೆ ಎಂಬ ಸಂಗತಿ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ವಿಚಾರಣೆ ವೇಳೆ ಬಹಿರಂಗವಾಗಿದೆ.
ಪಿಸ್ತೂಲ್ ಬಳಕೆ ತರಬೇತಿ ನಂತರ ಅನಿಲ್ ಕುವೆಂಪು ನಗರದಲ್ಲಿರುವ ಭಗವಾನ್ ಅವರ ನಿವಾಸದ ಬಳಿ ಬಂದಿದ್ದ. ಸಮೀಪದ ಹೋಟೆಲ್ ಗೆ ಊಟ- ತಿಂಡಿ ನೆಪದಲ್ಲಿ ತೆರಳುತ್ತಿದ್ದ ಅನಿಲ್, ಭಗವಾನ್ ಬಗ್ಗೆ ಕೆಲವರ ಬಳಿ ಮಾತನಾಡಿ, ಸಾಕಷ್ಟು ಮಾಹಿತಿ ಕಲೆಹಾಕಿದ್ದ. ಆದರೆ ಗೌರಿ ಹತ್ಯೆ ಪ್ರಕರಣದಲ್ಲಿ ಐವರು ಪ್ರಮುಖ ಆರೋಪಿಗಳು ಸೆರೆ ಸಿಕ್ಕಿದ್ದರಿಂದ ಭಗವಾನ್ ಕೊಲೆ ಸಂಚು ಮುಂದೆ ಹೋಯಿತು ಎಂದೂ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ಇನ್ನು ಈ ಕುರಿತಾಗಿ ಮಾತನಾಡಿದ ಪ್ರೊ.ಕೆ. ಎಸ್.ಭಗವಾನ್, ನಾನು ಸಂವಿಧಾನ ವಿರೋಧಿ ಕೆಲಸ ಮಾಡಿಲ್ಲ. ಹಿಂದೂ ಧರ್ಮದಲ್ಲಿರುವ ತಪ್ಪುಗಳ ಬಗ್ಗೆ ಮಾತನಾಡಿದ್ದೇನೆ. ಅದನ್ನೇ ತಪ್ಪು ಎಂದುಕೊಂಡರೆ ನಾನೇನು ಮಾಡಲಾದೀತು? ಸ್ವಾಮಿ ವಿವೇಕಾನಂದ ಅವರ ವಿಚಾರಧಾರೆಗಳನ್ನು ಅನುಸರಿಸುತ್ತಿರುವ ನಾನು ಯಾರಿಗೂ ಹೆದರುವುದಿಲ್ಲ ಎಂದರು.
ನವೀನ್ ಬಂಧನ ಇನ್ನೂ ಒಂದು ವಾರ ತಡವಾಗಿದ್ದರೆ?
ಎಸ್ಐಟಿ ಪೊಲೀಸರು ತಮ್ಮ ಕೆಲಸವನ್ನು ದೃಢವಾಗಿ ಮಾಡುತ್ತಿದ್ದಾರೆ. ಹಂತಕರ ಪತ್ತೆಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಮುಂದೆ ಕೂಡ ತನಿಖೆಯನ್ನು ಸಮರ್ಪಕವಾದ ರೀತಿಯಲ್ಲಿ ನಡೆಸಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.