ಪಿರಿಯಾಪಟ್ಟಣ ಕಾನ್ವೆಂಟ್ ನಲ್ಲಿ ವಿದ್ಯಾರ್ಥಿ ಸಾವು
ಮೈಸೂರು, ಆಗಸ್ಟ್ 24: ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಪುಷ್ಪಾ ಕಾನ್ವೆಂಟ್ ನಲ್ಲಿ ಅನಾರೋಗ್ಯ ಕಾರಣದಿಂದ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಕಳೆದ ವರ್ಷವಷ್ಟೆ ಇದೇ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ.
ಕಾನ್ವೆಂಟ್ ನಲ್ಲಿ ಓದುತ್ತಿದ್ದ ಎರಡನೇ ತರಗತಿ ವಿದ್ಯಾರ್ಥಿ ಮೋಹಿತ್ ಗೌಡ(7) ಸಾವಿಗೀಡಾದ ದುರ್ದೈವಿ. ಎಂದಿನಂತೆ ಮಗುವನ್ನು ಪೋಷಕರು ಶಾಲೆಗೆ ಬಿಟ್ಟು ಹೋಗಿದ್ದಾರೆ. ಆದರೆ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ತಕ್ಷಣವೇ ಶಾಲೆ ಮುಖ್ಯಸ್ಥರು ಪೋಷಕರಿಗೆ ಸುದ್ದಿ ಮುಟ್ಟಿಸಿದ್ದಾರೆ.[ಚಿಕ್ಕಮ್ಮದೇವಿಗೆ ಬಾಗಿನ ಅರ್ಪಿಸಿದ ಒಡೆಯರ್ ಕುಟುಂಬ]
ಮಗುವಿನ ತಂದೆ ಪಟ್ಟಣದ ಮುತ್ತಯ್ಯ ಬಡಾವಣೆ ನಿವಾಸಿ ಪಿ.ಬಿ.ಶ್ರೀನಿವಾಸಗೌಡ ಹಾಗೂ ತಾಯಿ ರೂಪಾ ಶಾಲೆಗೆ ಧಾವಿಸಿ ಬಂದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲೇ ಮಗು ಸಾವಿಗೀಡಾಗಿದೆ. ಪಟ್ಟಣದ ಪೊಲೀಸರು ಸಾರ್ವಜನಿಕ ಆಸ್ಪತ್ರೆಗೆ ತೆರಳಿ, ಮಗುವಿನ ತಂದೆ-ತಾಯಿಯಿಂದ ಮಾಹಿತಿ ಪಡೆದಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.[ಮೈಸೂರು ದಸರಾ ಜಂಬೂಸವಾರಿಯ ಗಜಪಡೆಗಳ ಬಗ್ಗೆ ಗೊತ್ತಾ?]
ಈ ಹಿಂದೆ ಪಟ್ಟಣದ ನಿವಾಸಿ ಸೋಹನ್ ಎಂಬುವವರ ಮಗ ಸನ್ಮಿತ್ ಕೂಡಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಆ ಘಟನೆ ನಡೆದು ಒಂದು ವರ್ಷದ ನಂತರ ಮತ್ತೊಂದು ಮಗು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವುದು ಪೋಷಕರಲ್ಲಿ ಭೀತಿ ಮೂಡಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಆಸ್ಪತ್ರೆಗೆ ದೌಡಾಯಿಸಿ, ತನಿಖೆಗೆ ಆಗ್ರಹಿಸಿದ್ದಾರೆ. ಪಟ್ಟಣ ಠಾಣೆ ಪೊಲೀಸರು ತನಿಖೆ ನಡೆಸಿ, ಸತ್ಯಾಂಶ ಹೊರತರಬೇಕಾಗಿದೆ.