ಭತ್ತದ ಬೆಳೆಯಲ್ಲಿ ಸೈನಿಕ ಹುಳುವಿನ ಹಾವಳಿ
ಮೈಸೂರು, ನವೆಂಬರ್ 27 : ಈ ಬಾರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ಭರ್ತಿಯಾಗಿರುವ ಕಾರಣ ರೈತರು ರಾಗಿ ಹಾಗೂ ಭತ್ತವನ್ನು ಬೆಳೆದಿದ್ದಾರೆ.
ಆದರೆ ಬೆಳೆ ಬೆಳೆದು ತೆನೆಯೊಡೆದು ಫಸಲಿಗೆ ಬರುತ್ತಿರುವಾಗಲೇ ಇದೀಗ ಸೈನಿಕ ಹುಳುವಿನ ಕಾಟ ಶುರುವಾಗಿದೆ. ಬೆಳೆಯನ್ನೆಲ್ಲ ತಿಂದು ಹಾಕುತ್ತಿರುವ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.
ಹುಣಸೂರು, ಪರಿಯಾಪಟ್ಟಣ, ಕೆ.ಆರ್.ನಗರ ತಾಲೂಕುಗಳಲ್ಲಿ ಹಲವು ರೈತರು ಭತ್ತ ಮತ್ತು ರಾಗಿಯನ್ನು ಬೆಳೆದಿದ್ದಾರೆ. ಆದರೆ ಸೈನಿಕ ಹುಳುಗಳ ಕಾಟ ಶುರುವಾಗಿದ್ದು ಇವು ಬೆಳೆದು ನಿಂತ ಬೆಳೆಗಳ ಮೇಲೆ ಧಾಳಿ ಮಾಡುತ್ತಿವೆ. ಹೀಗಾಗಿ ಬೆಳೆ ಬೆಳದ ರೈತರು ತಲೆಮೇಲೆ ಕೈಹೊತ್ತು ಕೂರಬೇಕಾದ ಪರಿಸ್ಥಿತಿ ಬಂದೊದಗಿದೆ.
ಇನ್ನು ಈ ಸೈನಿಕ ಹುಳು ಪ್ರತಿವರ್ಷವೂ ಕಾಣಿಸುವುದಿಲ್ಲ. ಸುಮಾರು ಹತ್ತು ಅಥವಾ ಇಪ್ಪತ್ತು ವರ್ಷಗಳಿಗೊಮ್ಮೆ ಕಂಡು ಬರುತ್ತದೆ. ಈ ಹುಳುಗಳ ಹಾವಳಿ ಮಿತಿ ಮೀರಿದ್ದು ಅವುಗಳನ್ನು ನಾಶ ಮಾಡುವುದು ಹೇಗೆ ಎಂಬುದು ತಲೆ ನೋವಾಗಿದೆ.
ಸೈನಿಕ ಹುಳು ಚಿಟ್ಟೆಯಿಂದ ಉತ್ಪತ್ತಿಯಾಗುತ್ತದೆ. ಚಿಟ್ಟೆಯು ಎಲೆ ಮತ್ತು ಕಾಂಡದ ಮೇಲೆ ಒಂದರ ಮೇಲೊಂದು ಸಾಲುಗಳಲ್ಲಿ ಗೊಂಚಲು ಮೊಟ್ಟೆಯಿಡುತ್ತದೆ. ಒಂದು ಗೊಂಚಲಿನಲ್ಲಿ ಸುಮಾರು 200ರಿಂದ 300 ಮೊಟ್ಟೆಗಳಿರುತ್ತದೆ. ಈ ಮೊಟ್ಟೆಗಳನ್ನು ಬದುಗಳಲ್ಲಿರುವ ಹುಲ್ಲುಗಳ ಮೇಲೆ ಇಡುತ್ತದೆ.
ಮೊಟ್ಟೆ ಮರಿಯಾಗಲು 2 ರಿಂದ 5 ದಿನ ತೆಗೆದುಕೊಳ್ಳುತ್ತದೆ. ಮರಿ ಹುಳುಗಳು ಮೇಲಿರುವ ಹುಲ್ಲು ತಿಂದು ನಂತರ ಭತ್ತ ಮತ್ತು ರಾಗಿ ಬೆಳೆಗಳ ಮೇಲೆಯೂ ದಾಳಿ ಮಾಡುತ್ತದೆ. ಮರಿಹುಳುಗಳು ಹಾನಿಯ ಹಂತ ಈ ಹುಳುಗಳು ಹಸಿರು ಬಣ್ಣದ ದೇಹದ ಜತೆಗೆ ಉದ್ದನೆಯ ಗೆರೆಗಳನ್ನು ಹೊಂದಿರುತ್ತದೆ. ಇದು 2 ರಿಂದ 4.5 ಸೆಂ.ಮೀ ಉದ್ದವಿರುತ್ತದೆ. ಈ ಹುಳುಗಳು ರಾತ್ರಿಯ ಸಮಯದಲ್ಲಿ ಎಲೆಯನ್ನು ಮತ್ತು ತೆನೆಯ ದಂಟನ್ನು ತಿನ್ನುತ್ತದೆ ಮತ್ತು ಹಗಲಿನಲ್ಲಿ ಸಸಿಗಳ ಬುಡದಲ್ಲಿ ಅವಿತಿರುತ್ತದೆ.
ಸಾಮಾನ್ಯವಾಗಿ ಈ ಕೀಟದ ಹಾವಳಿಯು 10 ರಿಂದ 15 ವರ್ಷಗಳಿಗೊಮ್ಮೆ ಅದರಲ್ಲೂ ಹೆಚ್ಚು ಮಳೆ ಬಿದ್ದಂತಹ ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇವು ರಾಗಿ ಮತ್ತು ಭತ್ತದ ಗರಿಗಳನ್ನು , ಎಲೆಗಳನ್ನು, ತೆನೆಗಳನ್ನು ಸಂಪೂರ್ಣವಾಗಿ ತಿಂದು ಹಾಳು ಮಾಡುತ್ತವೆ.
ಕಾಳು ಕಟ್ಟುವ ಹಂತದಲ್ಲಿರುವ ತೆನೆಯ ಕೆಳಭಾಗದಲ್ಲಿ ಹಾನಿ ಮಾಡುತ್ತದೆ. ಇದರಿಂದ ತೆನೆಗಳು ತುಂಡಾಗುತ್ತದೆ ಮತ್ತು ಒಣಗುತ್ತದೆ. ಇವುಗಳಿಂದಾಗಿ ಒಟ್ಟು ಇಳುವರಿಯ ಹಾವಳಿಯಿಂದ ಶೇ.೧೦ ರಿಂದ ೧೫ರಷ್ಟು ಇಳುವರಿಯಲ್ಲಿ ನಷ್ಟ ಉಂಟಾಗುತ್ತದೆ. . ಹೀಗಾಗಿ ಒಂದಷ್ಟು ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ನಿಯಂತ್ರಣ ಮಾಡಬಹುದಾಗಿದೆ.
ಮೊದಲಿಗೆ ಮಾಗಿ ಉಳುಮೆ ಮಾಡುವುದು, ರೋಗ ನಿರೋಧಕ ತಳಿಗಳನ್ನು ಬಳಕೆ ಮಾಡುವುದು, ತಡವಾಗಿ ಬಿತ್ತನೆ ಮತ್ತು ನಾಟಿ ಮಾಡದೆ ಬೇಗ ಮಾಡುವ ಮೂಲಕ ಮುಂಜಾಗ್ರತೆ ವಹಿಸುವುದು ಅಗತ್ಯ.
ಇನ್ನು ಮರಿ ಹುಳುಗಳು ಕಂಡು ಬಂದ ತಕ್ಷಣ ಕಂದಕದಲ್ಲಿ ಬೂದಿಯನ್ನು ಹಾಕುವುದು, ಭತ್ತದ ಗದ್ದೆಯ ಸುತ್ತಲೂ ರೆಂಬೆಕೊಂಬೆಗಳನ್ನು ಹಾಕಿ ಹುಳುಗಳನ್ನು ಒಟ್ಟುಗೂಡಿಸಿ ಕೈನಿಂದಲೇ ತೆಗೆದು ಹಾಕುವುದು, ನೈಸರ್ಗಿಕ ಶತ್ರುಗಳಾದ ಕೊಣಜ ಮತ್ತು ಜೇಡವನ್ನು ಸಾಯಿಸದಿರುವುದು, ರಕ್ಷಿಸುವುದರಿಂದ ಅವು ಈ ಹುಳುಗಳನ್ನು ತಿಂದು ಹಾಕುವ ಮೂಲಕ ನಾಶ ಮಾಡುತ್ತದೆ.
ಇದರೊಂದಿಗೆ ಕ್ಲೋರೊಫೈರಿಪಾಸ್2 ಮಿ.ಲೀ ಒಂದು ಲೀಟರ್ ನೀರಿನಲ್ಲಿ ಅಥವಾ ರೊಗರ್ 1.70 ಮಿ.ಲೀ ನೀರಿನಲ್ಲಿ ಅಥವಾ ನಿಂಬಿಸಿಡನ್ 5 ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು ಅಥವಾ ಹರಳು ರೂಪದ ಕೀಟನಾಸಕಗಳಾದ ಫ್ಲೋರೇಟ್ ೧೫ ಕೆ.ಜಿ ಅಥವಾ ಕಾರ್ಬೊ ಫ್ಯುರಾನ್10 ಕೆ.ಜಿಯನ್ನು ಮರಳಿನಲ್ಲಿ ಮಿಶ್ರಣ ಮಾಡಿ ಎರಚುವುದರಿಂದಲೂ ನಿಯಂತ್ರಣ ಮಾಡಬಹುದಾಗಿದೆ.