ಮೈಸೂರು: ಕಾಂಗ್ರೆಸ್ ಬಗ್ಗೆ ಜನತೆಗೆ ಬೇಸರ: ಸಾ.ರಾ.ಮಹೇಶ್
ಮೈಸೂರು, ಜನವರಿ 21: ಇತ್ತೀಚೆಗೆ ನಡೆದ ಎಪಿಎಂಸಿ ಚುನಾವಣೆಯಲ್ಲಿ ಪಿರಿಯಾಪಟ್ಟಣ ಮತ್ತು ಸಿಎಂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದೆ. ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಭಾವವಿದೆ. ಅಲ್ಲದೇ ಜಿಲ್ಲಾ ಪಂಚಾಯತ್ ಮತ್ತು ಕಾರ್ಪೋರೇಟ್ ಗಳಲ್ಲೂ ಸಹ ಕಾಂಗ್ರೆಸ್ ತನ್ನ ಸ್ಥಾನ ಕಳೆದುಕೊಂಡಿದೆ. ರೈತಾಪಿ ವರ್ಗ ಕಾಂಗ್ರೆಸ್ ಬೆಂಬಲಿಸಿಲ್ಲ ಎಂಬುದು ಎಪಿಎಂಸಿ ಚುನಾವಣೆಯಿಂದ ತಿಳಿದು ಬಂದಿದೆ. ಇದು ಕಾಂಗ್ರೆಸ್ ಪಕ್ಷದ ಬಗ್ಗೆ ಜನರಿಗೆ ಇರುವ ಬೇಸರವನ್ನು ತೋರಿಸುತ್ತದೆ ಎಂದು ಕೆ.ಆರ್. ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಹೇಳಿದರು.
ಈ ಹಿಂದೆ ಒಬ್ಬ ನಾಮ ನಿರ್ದೇಶಕರನ್ನು ನೇಮಿಸುತ್ತಿದ್ದರು. ಆದರೆ ಈಗ ಮೂರು ಮಂದಿಯನ್ನು ನಾಮನಿರ್ದೇಶಕರನ್ನಾಗಿ ನೇಮಿಸುತ್ತಿದ್ದಾರೆ. ಹಿಂದಿನ ಬಾಗಿಲು ಪ್ರವೇಶ ನಡೆಯುತ್ತಿದೆ. ಕೆಲವು ಆಕಾಂಕ್ಷಿಗಳು ನಂಜನಗೂಡು ಕ್ಷೇತ್ರಕ್ಕೆ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೆ ಕಾರಣ ಮುಂಬರುವ ನಂಜನಗೂಡು ಉಪಚುನಾವಣೆ. ಇಡೀ ಜಿಲ್ಲಾಡಳಿತವೇ ನಂಜನಗೂಡಿನ ಮೇಲೆ ಆಸಕ್ತಿ ತೋರುತ್ತಿದೆ. ಹಲವಾರು ನಿಗಮಗಳಿಂದ ಸುಮಾರು 22 ಸಾವಿರ ಅರ್ಜಿಗಳು ನಂಜನಗೂಡಿಗೆ ಬಂದಿವೆ ಎಂದು ಹೇಳಿದರು.
ಶುಕ್ರವಾರ ನಡೆದ ಜನ-ಮನ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಕೆಲವು ಫಲಾನುಭವಿಗಳನ್ನು ಕರೆದು ತನ್ನ ಪಕ್ಷ ಮಾಡಿರುವ ಭಾಗ್ಯ ಯೋಜನೆಗಳ ಬಗ್ಗೆ ತಿಳಿಸಿದರು. ಆದರೆ ಇಂದು 24 ಗಂಟೆ ವಿದ್ಯುತ್ ಪೂರೈಕೆ ಇಲ್ಲ. ಹಳ್ಳಿಗಳಲ್ಲಿ ವಿದ್ಯುತ್ ಅಭಾವ ಹೆಚ್ಚಾಗಿದೆ. ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡುದಾರರಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿ 30 ಕೆ.ಜಿ ಅಕ್ಕಿ ನೀಡುತ್ತಿದ್ದರು. ನಂತರ 24 ಕೆ.ಜಿ. ಈಗ ಅದಕ್ಕೂ ಕಡಿಮೆ ಪ್ರಮಾಣದ ಅಕ್ಕಿ ನೀಡುತ್ತಿದ್ದಾರೆ.
ಮಣ್ಣು ಮಿಶ್ರಿತ ರಾಗಿ ಮತ್ತು ಮುಗ್ಗಲು ಬಂದಿರುವ ಅಕ್ಕಿಯನ್ನು ಕೊಡುತ್ತಿದ್ದಾರೆ. ಅಲ್ಲದೇ ಅನಿಲ ಸಂಪರ್ಕ ಹೊಂದಿದ ಕುಟುಂಬಗಳಿಗೆ ಸೀಮೆಎಣ್ಣೆ ನೀಡುವುದನ್ನು ಕಡಿತಗೊಳಿಸಿದ್ದಾರೆ. ಆದರೆ ಪಕ್ಕದ ರಾಜ್ಯಗಳಲ್ಲಿ ಅನಿಲ ಸಂಪರ್ಕವಿದ್ದರೂ ಸಹ ಸೀಮೆಎಣ್ಣೆ ನೀಡುತ್ತಿದ್ದಾರೆ. ರೈತರಿಗೆ ಮೊದಲು ಸ್ವಚ್ಛ ಧಾನ್ಯಗಳನ್ನು ನೀಡಿ ಅವರ ಮೇಲಿನ ದೌರ್ಜನ್ಯ ನಿಲ್ಲಿಸಿ. ಇದು ಹೀಗೆ ಮುಂದುವರೆದರೆ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ಕೆಳಗಿಳಿದು ಕಾಂಗ್ರೆಸ್ ಮುಕ್ತ ರಾಜ್ಯವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ನಾಳೆ ಮಧ್ಯಾಹ್ನ (ಭಾನುವಾರ)3 ಗಂಟೆಗೆ ಸಯ್ಯಾಜಿರಾವ್ ರಸ್ತೆಯ ಡಿ ಮೆರಿಡಿಯನ್ ಹೋಟೆಲ್ ನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಂಜನಗೂಡು ಉಪಚುನಾವಣೆಯ ಬಗ್ಗೆ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.