ಮೈಸೂರು: ತವರು ಕ್ಷೇತ್ರದವರಿಂದಲೇ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ
ಮೈಸೂರು, ಆಗಸ್ಟ್ 9 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾದಲ್ಲೇ ಮೂಲಭೂತ ಸಮಸ್ಯೆಗಳು ಕಾಡತೊಡಗಿವೆ.
ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ವರುಣ ಕ್ಷೇತ್ರದ ಸಾವ೯ಜನಿಕರು ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು.
ಸಿಎಂ ಸಿದ್ದರಾಮಯ್ಯ ಹಲವು ಭಾಗ್ಯಗಳನ್ನು ಘೋಷಣೆ ಮಾಡುತ್ತಿದ್ದಾರೆ. ಆದರೆ, ಸ್ವಕ್ಷೇತ್ರದಲ್ಲೇ ಅಭಿವೃದ್ಧಿ ಮಾಡಿಲ್ಲವೆಂದು ವರುಣ ಕ್ಷೇತ್ರದ ಮತದಾರರು ಘೋಚಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಟಿ.ನರಸೀಪುರ ಹೌಸಿಂಗ್ ಬೋರ್ಡ್ ಜನರ ಸಮಸ್ಯೆ ಹಲವು ಬಾರಿ ಮನವಿ ಸಲ್ಲಿಸಿದರೂ ಬಗೆಹರಿದಿಲ್ಲ. ಈ ಸಮಸ್ಯೆ ಬಗೆಹರಿಸುವಂತೆ ರಾಮಕೃಷ್ಣ ನಗರದ ಮುಖ್ಯಮಂತ್ರಿಗಳ ನಿವಾಸದ ಬಳಿ ಪ್ರತಿಭಟನೆ ಮಾಡಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರಿಗೆ ಮನವಿ ಸಲ್ಲಿಸಿದರು.
ವರುಣ ಕ್ಷೇತ್ರದ ಜನತೆ ಖಾಸಗಿ ಬಸ್ ನಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಬಂದಿಳಿದಿದ್ದು, ನಮ್ಮ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಒತ್ತಾಯಿಸಿದರು.
ನಮ್ಮ ಶಾಸಕರು ಸಿಎಂ ಆಗಿರುವುದರಿಂದ ನಮ್ಮೆಲ್ಲ ಸಮಸ್ಯೆಗಳೂ ದೂರವಾಗುತ್ತವೆ ಎಂದು ಖುಷಿ ಪಟ್ಟಿದ್ದೆವು. ಆದರೆ, ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ನಾವು ವ್ಯಥೆ ಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷವಾಯ್ತು. ನಮ್ಮ ಬಡಾವಣೆಯ ರಸ್ತೆ ಅಭಿವೃದ್ಧಿಪಡಿಸಲು ಅವರಿಗೆ ಸಾಧ್ಯವಾಗಿಲ್ಲ. ಆದ್ದರಿಂದ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.