ಭಗವಾನ್ ಅಸಂಬದ್ಧ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ: ಪೇಜಾವರ ಶ್ರೀ
ಮೈಸೂರು, ಆಗಸ್ಟ್ 7 : ಯಾವುದೇ ಸಮುದಾಯದ ವಿರುದ್ಧ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅಸಂಬದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಸಮಾಜದ ಚಿಂತನೆಗಳಿಗೆ ಅವರು ತೊಡಗಿಸಿಕೊಳ್ಳಬೇಕು. ಸಮಾಜ ಒಡೆಯುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.
ಮೈಸೂರಿಗೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೆ.ಎಸ್.ಭಗವಾನ್ ಅವರು ಹಿಂದಿನ ವಿಚಾರವನ್ನು ಕೈಗೊತ್ತಿಕೊಂಡು ಧರ್ಮಗಳ ಬಗ್ಗೆ ಅಸಂಬದ್ಧ ಹೇಳಿಕೆಗಳನ್ನು ನೀಡಬಾರದು.
ವಿವೇಕಾನಂದ, ಬಸವಣ್ಣನವರನ್ನು ಕೊಲೆ ಮಾಡಲಾಗಿದೆ: ಪ್ರೊ.ಕೆ ಎಸ್ ಭಗವಾನ್
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಗೆ ಯಾವುದು ತಪ್ಪು, ಯಾವುದು ಸರಿ ಎನ್ನುವ ಆಲೋಚನೆ ಮಾಡುವುದು ಗೊತ್ತಿದೆ. ಸಮಾಜ ಕಟ್ಟುವ ಕೆಲಸದಲ್ಲಿ ಒಂದಾಗಿ, ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.
ಕರ್ನಾಟಕದಲ್ಲಿ ಅಖಂಡತೆ ಉಳಿಯಲು ನಾಯಕರ ಅಪಾರ ಶ್ರಮವಿದೆ. ರಾಜ್ಯವನ್ನು ವಿಭಜನೆ ಮಾಡುವ ವಿಚಾರವಾಗಿ ಯಾರೂ ಮಾತನಾಡಬಾರದು, ರಾಜ್ಯ ಅಖಂಡವಾಗಿಯೇ ಉಳಿಯಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಬ್ರಾಹ್ಮಣರಿಂದ ಹಿಂದೆ ಶೂದ್ರರಿಗೆ ಅನ್ಯಾಯವಾಗಿತ್ತೆಂದು ಹಿಂದಿನ ವಿಚಾರಗಳನ್ನು ಕೆದಕಿ ಸಮಾಜದ ಮೇಲೆ ಕಿಡಿಕಾರಬಾರದು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬುದ್ಧಿವಂತರಾಗಿದ್ದಾರೆ.
ಸಮಾಜದ ಅಭಿವೃದ್ಧಿಗೆ ಚಿಂತನೆ ಮಾಡಬೇಕೇ ಹೊರತು ಧರ್ಮ ಒಡೆಯುವ ಕೆಲಸ ಮಾಡಬಾರದು. ಹಾಗಾಗಿ ನನ್ನ ವಿರುದ್ಧ ಅಸತ್ಯ ಹಾಗೂ ಕಾಲ್ಪನಿಕ ಮಾತುಗಳನ್ನಾಡುತ್ತಿರುವುದು ಬೇಸರದ ಸಂಗತಿ ಎಂದರು.