ಸಾಲಿಗ್ರಾಮದ ಪಾರ್ವತಿ ಕನ್ನಡ ಚಿತ್ರರಂಗದ ಅಮ್ಮನಾಗಿ...
ಒಬ್ಬ ಮುತ್ತುರಾಜ್ ಡಾ.ರಾಜ್ ಕುಮಾರ್ ಆಗಿ ಕನ್ನಡ ಚಿತ್ರರಂಗದ ಮೇರುನಟನಾಗಿ ಬೆಳೆದಿದ್ದಲ್ಲದೆ, ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಉಳಿಯಲು ಸಾಧ್ಯವಾಗಿದ್ದೇ ಪಾರ್ವತಮ್ಮ ಅವರು ಮಡದಿಯಾಗಿ ಬಂದ ಬಳಿಕ
ಮೈಸೂರು, ಮೇ 31: ಡಿಸೆಂಬರ್ 6, 1939 ರಂದು ಸಾಲಿಗ್ರಾಮ ಸಂಗೀತ ಮಾಸ್ಟರ್ ಅಪ್ಪಾಜಿಗೌಡ ಅವರ ಪುತ್ರಿಯಾಗಿ ಜನಿಸಿದ ಪಾರ್ವತಿ, ಕೊನೆಗೆ ಪಾರ್ವತಮ್ಮ ಆಗಿ, ಮೇರುನಟ ಡಾ.ರಾಜ್ ಕುಮಾರ್ ಅವರ ಯಶಸ್ಸಿನ ಹಿಂದಿನ ಶಕ್ತಿಯಾಗಿ, ಕನ್ನಡ ಚಿತ್ರರಂಗದ ಅಮ್ಮನಾಗಿ ನಡೆದು ಬಂದ ಹಾದಿ ನಿಜಕ್ಕೂ ಆದರ್ಶನೀಯ.
ಇಂದು(ಮೇ 30) ಬೆಳಗ್ಗೆ 4.40ಕ್ಕೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಡಾ.ಪಾರ್ವತಮ್ಮರಾಜ್ ಕುಮಾರ್(78) ಇಹಲೋಕ ತ್ಯಜಿಸುತ್ತಿದ್ದಂತೆಯೇ ಅವರ ಅಪಾರ ಅಭಿಮಾನಿ ಬಳಗ ಕಂಬನಿಯಲ್ಲಿ ತೋಯುತ್ತಿದೆ. ಕನ್ನಡ ಚಿತ್ರರಂಗವೂ ತಾಯಿಯನ್ನು ಕಳೆದುಕೊಂಡಂಥ ಅನಾಥ ಪ್ರಜ್ಞೆ ಅನುಭವಿಸುತ್ತಿದೆ.[ಕನ್ನಡ ಸಿನಿಮಾ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ]
ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತಿಗೆ ಸಾಕ್ಷಿಯಾದವರು ಪಾರ್ವತಮ್ಮ ರಾಜ್ ಕುಮಾರ್ ಎಂದರೆ ಅತಿಶಯೋಕ್ತಿಯಾಗಲಾರದು. ಒಬ್ಬ ಮುತ್ತುರಾಜ್ ಡಾ.ರಾಜ್ ಕುಮಾರ್ ಆಗಿ ಕನ್ನಡ ಚಿತ್ರರಂಗದ ಮೇರುನಟನಾಗಿ ಬೆಳೆದಿದ್ದಲ್ಲದೆ, ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಉಳಿಯಲು ಸಾಧ್ಯವಾಗಿದ್ದೇ ಪಾರ್ವತಮ್ಮ ಅವರು ಮಡದಿಯಾಗಿ ಬಂದ ಬಳಿಕ ಎನ್ನುವುದರಲ್ಲಿ ಎರಡು ಮಾತಿಲ್ಲ.[ಪಾರ್ವತಮ್ಮ ನಿಧನಕ್ಕೆ ಸದಾನಂದ ಗೌಡ ಸೇರಿ ಹಲವರಿಂದ ಸಂತಾಪ]
ಒಬ್ಬ ಸಾಮಾನ್ಯ ಹೆಣ್ಣುಮಗಳಾಗಿ ಜನಿಸಿದ ಪಾರ್ವತಮ್ಮ ರಾಜ್ ಕುಮಾರ್, ಕೊನೆಗೆ ಕನ್ನಡ ಚಿತ್ರರಂಗದ ಅಗ್ರಮಾನ್ಯ ನಿರ್ಮಾಪಕಿಯಾಗಿ ಪ್ರಸಿದ್ಧಿ ಪಡೆದರು. ಹತ್ತು ಹಲವು ಅತ್ಯುತ್ತಮ ಚಿತ್ರಗಳನ್ನು ನೀಡಿದ ಹೆಗ್ಗಳಿಗೆ ಅವರಿಗೆ ಸೇರುತ್ತದೆ.[ದಿ. ಪಾರ್ವತಮ್ಮ ರಾಜ್ ಕುಮಾರ್ ಅವರ ಮರೆಯಲಾರದ ಚಿತ್ರಗಳು]
ಕನ್ನಡ ಚಿತ್ರರಂಗದ ಕಣ್ಮಣಿಯಾದ ದಂಪತಿ
ಪಾರ್ವತಮ್ಮ ಮತ್ತು ರಾಜ್ ಕುಮಾರ್ ಅವರ ಲಗ್ನವಾದಾಗ ಮುಂದೆ ಈ ದಂಪತಿ ಕನ್ನಡ ಚಿತ್ರರಂಗಕ್ಕೆ ಕಣ್ಮಣಿಯಾಗುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಸ್ವತಃ ಅವರಿಗೂ ಆ ಊಹೆ ಇರಲಿಲ್ಲ! ಆದರೆ ಅದೃಷ್ಟ ಎಂದಿಗೂ ಅವರ ಕೈಬಿಡಲಿಲ್ಲ.
1953ರಲ್ಲಿ ವಿವಾಹ
ಸಾಲಿಗ್ರಾಮದ ಸಂಗೀತ ಮಾಸ್ಟರ್ ಅಪ್ಪಾಜಿಗೌಡ ಅವರ ಪುತ್ರಿ ಪಾರ್ವತಿಯವರಿಗೆ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದ ಮುತ್ತುರಾಜ್ ಅವರೊಂದಿಗೆ ಜೂ.25, 1953ರಲ್ಲಿ ವಿವಾಹವಾಯಿತು.
ಲಗ್ನಪತ್ರಿಕೆ
ಅವತ್ತಿನ ಕಾಲದಲ್ಲಿ ಹೇಗೆ ಲಗ್ನಪತ್ರಿಕೆಯನ್ನು ಮುದ್ರಿಸುತ್ತಿದ್ದರೋ ಹಾಗೆಯೇ ಪಾರ್ವತಿ ಮತ್ತು ಮುತ್ತುರಾಜ್ ಅವರ ಲಗ್ನಪತ್ರಿಕೆಯನ್ನು ಮುದ್ರಿಸಲಾಗಿತ್ತು. ಸಂಬಂಧಿಕರು, ಊರವರ ಸಮ್ಮುಖದಲ್ಲಿ ಅವರ ವಿವಾಹ ನಡೆದಿತ್ತು. ವಿವಾಹದ ಬಳಿಕ ಇವರ ದಾಂಪತ್ಯ ಬದುಕಿಗೆ ಹೊಸ ತಿರುವು ದೊರೆಯಿತು. ಆ ನಂತರದ ದಿನಗಳಲ್ಲಿ ಪಾರ್ವತಿ ಪಾರ್ವತಮ್ಮ ಆಗಿ, ಮುತ್ತುರಾಜ್ ಡಾ.ರಾಜ್ ಕುಮಾರ್ ಆಗಿ ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗ ಎನ್ನಿಸಿದರು.
ಮೇರುನಟರ ಕಾಣಿಕೆ ನೀಡಿದ ಅಮ್ಮ
ಡಾ.ರಾಜ್ ಕುಮಾರ್ ಧರ್ಮಪತ್ನಿಯಾಗಿ, ಬಳಿಕ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಹೆಸರು ಮಾಡಿದ್ದಷ್ಟೆ ಅಲ್ಲ, ತಮ್ಮ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರನ್ನೂ ಕನ್ನಡ ಚಿತ್ರರಂಗಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.
ಅಭಿಮಾನಿಗಳ ಪಾಲಿಗೆ ಪ್ರೀತಿಯ ಅಮ್ಮ
ಕುಟುಂಬ ನಿರ್ವಹಣೆಯೊಂದಿಗೆ ಕನ್ನಡ ಚಿತ್ರರಂಗದಲ್ಲಿಯೂ ಯಶಸ್ಸನ್ನು ಸಾಧಿಸಿ, ಚಿತ್ರರಂಗಕ್ಕೆ, ಅಭಿಮಾನಿಗಳ ಪಾಲಿಗೆ ಅಮ್ಮನಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಇನ್ನು ನೆನಪು ಮಾತ್ರ. ಅವರ ಅಗಲಿಕೆಯಿಂದ ಕನ್ನಡ ಚಿತ್ರ ರಂಗ ತಾಯಿಯನ್ನು ಕಳೆದುಕೊಂಡಂಥ ಅನಾಥ ಪ್ರಜ್ಞೆಯಲ್ಲಿದೆ ಎಂದರೆ ಅತಿಶಯೋಕ್ತಿಯಾಗಲಾರದು.