ಮೈಸೂರಲ್ಲಿ ವಾಹನ ನಿಲುಗಡೆ ಶುಲ್ಕ ದಂಧೆಗೆ ಬಿತ್ತು ಕಡಿವಾಣ
ಮೈಸೂರು,ಏಪ್ರಿಲ್,01: ನಗರದಲ್ಲಿ ವಾಹನ ನಿಲುಗಡೆ ಶುಲ್ಕ ವಸೂಲಿ ಒಂದು ದಂಧೆಯಾಗಿ ಪರಿಣಮಿಸಿದ್ದು, ವಾಹನ ನಿಲುಗಡೆದಾರರ ಬಳಿ ಹಣ ವಸೂಲಿ ಮಾಡಿ ವಂಚಿಸುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಅರಮನೆ ಆಡಳಿತ ಮಂಡಳಿ ನಿರ್ದೇಶಕಿ ಇಂದಿರಾ ಅವರು ಆಡಳಿತ ಮಂಡಳಿಯಡಿಯಲ್ಲೇ ಪಾರ್ಕಿಂಗ್ ನಿರ್ವಹಣೆ ಹಾಗೂ ಶುಲ್ಕ ವಸೂಲಿ ಮಾಡುವುದಾಗಿ ತಿಳಿಸಿದ್ದಾರೆ.
ಪ್ರವಾಸಿಗರು ನಗರದ ಯಾವುದೇ ಭಾಗದಲ್ಲಿ ವಾಹನ ನಿಲ್ಲಿಸಿದರೂ ಶುಲ್ಕ ತೆರಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ ಪ್ರವಾಸಿಗರನ್ನು ಸುಲಿಗೆ ಮಾಡುವುದೇ ಕೆಲವರ ಖಯಾಲಿಯಾಗಿದೆ. ಹಾಗಾಗಿ ಅರಮನೆ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.[ಪಾರ್ಕಿಂಗ್ ಪ್ರಾಬ್ಲಂಗೆ ಪರಿಹಾರ ಹುಡುಕಿದ ನಾರಾಯಣ ಭಟ್ಟರು]
ವಾಹನ ನಿಲುಗಡೆ ಶುಲ್ಕ ಹೆಸರಿನಲ್ಲಿ ಪ್ರವಾಸಿಗರ ಸುಲಿಗೆ ನಿರಂತರವಾಗಿ ಸಾಗಿದ್ದು, ಅದರ ಮೇಲೆ ಕಡಿವಾಣವೇ ಇಲ್ಲದಂತಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಸಂದರ್ಭ ವಾಹನಗಳನ್ನು ಖಾಲಿ ಇದ್ದ ಸ್ಥಳದಲ್ಲಿ ನಿಲ್ಲಿಸಲಾಗುತ್ತದೆ. ನಗರದ ಯಾವುದೇ ಮೂಲೆಯಲ್ಲಿ ನಿಲ್ಲಿಸಿದರೂ ಶುಲ್ಕವನ್ನಂತೂ ಕಟ್ಟಲೇ ಬೇಕು.[ಎಲ್ಲೆಂದ್ರಲ್ಲಿ ವಾಹನ ಪಾರ್ಕ್ ಮಾಡಿದ್ರೆ ಮನೆಗೆ ಬರುತ್ತೆ ನೋಟಿಸ್]
ಶುಲ್ಕದ ಹೆಸರಿನಲ್ಲಿ ಸಾಕಷ್ಟು ಲಾಭ ಪಡೆಯಬಹುದು ಎಂದು ಯೋಚಿಸಿದ ಜನರು ಗುತ್ತಿಗೆ ಪಡೆಯಲು ಮುಗಿ ಬೀಳುತ್ತಾರೆ. ಗುತ್ತಿಗೆ ನೀಡಿದರೆ ಗುತ್ತಿಗೆದಾರ ಅರಮನೆಯ ಆಡಳಿತ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿ ಅವ್ಯವಹಾರ ನಡೆಸಿದ್ದರೂ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.
ಆದರೆ ದೂರು ಬಂದಿರುವ ಹಿನ್ನಲೆಯಲ್ಲಿ ಹಾಗೂ ಅರಮನೆ ಮಂಡಳಿಗೆ ನಷ್ಟವಾಗುತ್ತಿರುವ ಹಿನ್ನಲೆಯಲ್ಲಿ ಗುತ್ತಿಗೆದಾರರ ಪರವಾನಗಿಯನ್ನು ರದ್ದುಪಡಿಸಿರುವ ಅರಮನೆ ಆಡಳಿತ ಮಂಡಳಿ ನಿರ್ದೇಶಕಿ ಇಂದಿರಾ ಅವರು ಆಡಳಿತ ಮಂಡಳಿಯಡಿಯಲ್ಲೇ ಪಾರ್ಕಿಂಗ್ ನಿರ್ವಹಣೆ ಹಾಗೂ ಶುಲ್ಕ ವಸೂಲಿ ಮಾಡುವುದಾಗಿ ತಿಳಿಸಿದ್ದಾರೆ.[ಕೆಂಪೇಗೌಡ ವಿಮಾನ ನಿಲ್ದಾಣದ ಪಾರ್ಕಿಂಗ್ ಫೀ ಹೆಚ್ಚಳ]