ಪಡುವಾರಹಳ್ಳಿ ದೇವು ಕಗ್ಗೊಲೆ : ಮತ್ತೆ ಮೂವರ ಬಂಧನ
ಮೈಸೂರು, ಮೇ 11 : ಹುಣಸೂರಿನ ತೋಟದ ಮನೆಯಲ್ಲಿ ನಡೆದಿದ್ದ ಜೋಡಿ ಕೊಲೆಯ ಪ್ರಮುಖ ಸಾಕ್ಷಾಯಾಗಿದ್ದ ದೇವೇಂದ್ರನ ಭೀಕರ ಹತ್ಯೆಗೆ ಸಂಬಂಧಿಸಿದಂತೆ, ಬಂಧಿತ ಪ್ರಮುಖ ಆರೋಪಿ ನೀಡಿದ ಮಾಹಿತಿಯ ಮೇರೆಗೆ ಮತ್ತೆ ಮೂವರನ್ನು ಮೈಸೂರಿನ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬೊಲೆರೋ ಮತ್ತು ಎರಡು ಪಲ್ಸರ್ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮೇ 5ರಂದು ಲಾಂಗು ಮಚ್ಚುಗಳಿಂದ ದೇವೇಂದ್ರ ಅಲಿಯಾಸ್ ದೇವು ಅಲಿಯಾಸ್ ಕಾರ್ತಿಕ್ ನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಘಟನೆ ನಡೆದ ನಂತರ ಮೇ 9ರಂದು ಪ್ರಮುಖ ಆರೋಪಿ ಪವನ್ ಕುಮಾರ್ ನನ್ನು ಜಯಲಕ್ಷ್ಮೀಪುರಂ ಪೊಲೀಸರು ಬಂಧಿಸಿದ್ದರು.
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಹೋಬಳಿಯ ಸುನೀಲ್ ಕುಮಾರ್ ಅಲಿಯಾಸ್ ರಘು(29), ಮೈಸೂರಿನ ಹೆಬ್ಬಾಳದ ರಾಕೇಶ್.ಸಿ.(19) ಮತ್ತು ಶ್ರೀರಂಗಪಟ್ಟಣದ ಕುರಾದ್ ಬೀದಿಯ ಶಿವರಾಜ್ ಅಲಿಯಾಸ್ ಕರಿಯ(27) ಬಂಧಿತ ಆರೋಪಿಗಳು. [ಮೈಸೂರು : ಹುಣಸೂರು ಜೋಡಿ ಕೊಲೆ ಸಾಕ್ಷಿಯ ಹತ್ಯೆ]
ಈ ಮೂರು ಜನರು ಪವನ್ ಕುಮಾರ್ನ ಸ್ನೇಹಿತರಾಗಿದ್ದು, ಪ್ರಾಥಮಿಕ ವಿಚಾರಣೆಯಲ್ಲಿ ಅವರು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದು, ಅವರ ಕೂಲಂಕುಷ ವಿಚಾರಣೆ ಜಾರಿಯಲ್ಲಿದೆ. ಪ್ರಕರಣದ ಉಳಿದ ಆರೋಪಿಗಳ ಬಂಧನದ ಬಗ್ಗೆ ಕೂಡ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ.
ಬೆಳಗ್ಗೆ ಎದ್ದು ನಿತ್ಯದ ಅಭ್ಯಾಸದಂತೆ ಮನೆ ಸಮೀಪದ ಮಾರಿಗುಡಿ ಬಳಿಯ ಕ್ಯಾಂಟೀನ್ನಲ್ಲಿ ಟೀ ಕುಡಿಯುತ್ತಾ ದೇವೇಂದ್ರ ಕುಳಿತಿದ್ದಾಗ, ದುಷ್ಕರ್ಮಿಗಳ ತಂಡ ದಾಳಿ ಮಾಡಿ ಹತ್ಯೆ ನಡೆಸಿದೆ. ಮಚ್ಚು, ಲಾಂಗುಗಳಿಂದ ಹಲ್ಲೆ ನಡೆಸಿದ್ದರಿಂದ ಗಂಭೀರ ಗಾಯಗೊಂಡು ದೇವು ಸ್ಥಳದಲ್ಲೇ ಸಾವನ್ನಪ್ಪಿದ್ದ.
ಈ ಪತ್ತೆ ಕಾರ್ಯಾಚರಣೆಯನ್ನು ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿ.ಸಿ.ಪಿ. ಡಾ: ಶೇಖರ್ ಎಚ್.ಟಿ. ಮಾರ್ಗದರ್ಶನದಲ್ಲಿ ಎ.ಸಿ.ಪಿ. ನರಸಿಂಹರಾಜ, ಉಮೇಶ್ ಜಿ ಸೇಠ್ರವರ ನೇತೃತ್ವದಲ್ಲಿ ಜಯಲಕ್ಷ್ಮಿಪುರಂ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮೇಗೌಡ, ವಿ.ವಿ.ಪುರಂ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವಿ, ಎ.ಎಸ್.ಐ. ಸಣ್ಣಭೈರ, ಸಿಬ್ಬಂದಿಗಳಾದ ಮಂಜುನಾಥ, ರಮೇಶ್ ನಡೆಸಿದ್ದರು. (ಮೈಸೂರು ವಾರ್ತೆ)