ಅನ್ನದಾತ ಕಂಗಾಲು, ಅನ್ನ ಕೊಡುವ ಭತ್ತಕ್ಕೆ ಕುತ್ತಿಗೆ ಬೆಂಕಿ ರೋಗ!
ಮೈಸೂರು, ಜುಲೈ 24: ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಹ ಸ್ಥಿತಿ ನಂಜನಗೂಡು ತಾಲೂಕಿನ ಚಿಕ್ಕಯ್ಯನಛತ್ರ ಹೋಬಳಿಯ ರೈತರ ಪರಿಸ್ಥಿತಿಯಾಗಿದೆ.
ನೀರಿಲ್ಲದೆ ಭತ್ತದ ಬೆಳೆ ಬೆಳೆಯುವುದೇ ದುಸ್ತರವಾಗಿರುವ ಪರಿಸ್ಥಿತಿಯಲ್ಲಿ ಇಲ್ಲಿನ ರೈತರು ಶ್ರಮಪಟ್ಟು ಭತ್ತವನ್ನು ಬೆಳೆದಿದ್ದರು. ಗೊಬ್ಬರ ನೀರು ಹಾಕಿ ಜೋಪಾನವಾಗಿ ನೋಡಿಕೊಂಡರು. ಬೆಳೆ ಹುಲುಸಾಗಿ ಬೆಳೆದು ಫಸಲಿಗೆ ಬರುತ್ತಿದ್ದಂತೆಯೇ ಈಗ ಬೆಳೆಗೆ ಕುತ್ತಿಗೆ ಬೆಂಕಿ ರೋಗ, ಕಾಂಡದ ಗಿಣ್ಣು ರೋಗಗಳು ಅಡರಿಕೊಂಡಿದ್ದು ರೈತರು ಕಂಗಾಲಾಗುವಂತೆ ಮಾಡಿದೆ.
ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಸಾಲಮನ್ನಾ ಮಾಡಲಿ: ದೇವೇಗೌಡ
ಚಿಕ್ಕಯ್ಯನ ಛತ್ರ ಹೋಬಳಿಯ ಅಂದಾಜು 60 ಹೆಕ್ಟೇರ್ ಪ್ರದೇಶದಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ರೈತರು ಬೆಳೆಯನ್ನು ರಕ್ಷಿಸಿಕೊಳ್ಳಲು ಪರದಾಡುವಂತಾಗಿದೆ.
ಮೊದಲಿಗೆ ಹೋಲಿಸಿದರೆ ಭತ್ತದ ಬೆಳೆಗೆ ಇತ್ತೀಚೆಗಿನ ವರ್ಷಗಳಲ್ಲಿ ಒಂದಲ್ಲ ಒಂದು ರೀತಿಯ ರೋಗಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ಅದನ್ನು ನಿಯಂತ್ರಿಸಿ ಉತ್ತಮ ಫಸಲು ಪಡೆಯುವುದು ರೈತರಿಗೆ ಸವಾಲ್ ಆಗಿ ಪರಿಣಮಿಸಿದೆ.
ಈ ರೋಗದ ಗುಣಲಕ್ಷಣಗಳೇನೆಂದರೆ ಭತ್ತದ ತೆನೆ(ಗೊನೆ)ಯ ಕೆಳಭಾಗದಲ್ಲಿ ಬಿಳಿ ಪಟ್ಟೆ ಹಾಗೂ ಬೂದಿಬಣ್ಣದ ರೂಪದಲ್ಲಿ ಕಂಡುಬರಲಿದೆ, ಹಗಲಿನಲ್ಲಿ ತಂಪಾದ ವಾತಾವರಣ ಹೆಚ್ಚಾದಾಗ ಈ ರೋಗದ ತೀವ್ರತೆಯು ಹೆಚ್ಚಾಗುತ್ತದೆ. ಈ ರೋಗವು ಭತ್ತದ ಬೆಳೆಯ ಬೆಳವಣಿಗೆಯ ಎಲ್ಲಾ ಹಂತಗಳಲ್ಲೂ ಕಂಡು ಬರುತ್ತದೆ.
ರೋಗ ಉಲ್ಬಣಗೊಂಡರೆ ಭತ್ತದ ಗೊನೆಯು ಕೆಳಗೆ ಬಾಗುತ್ತದೆ ಹಾಗೂ ಭತ್ತದ ಕಾಳುಗಳ ಗುಣಮಟ್ಟ ಕಡಿಮೆಯಾಗುವುದಲ್ಲದೇ ಜಳ್ಳು ಹೆಚ್ಚಾಗಿ ಇಳುವರಿ ಕುಂಟಿತವಾಗುತ್ತದೆ.
ಅಂತರ ವ್ಯಾಪಿ ಶಿಲೀಂಧ್ರ ನಾಶಕವಾದ ಕಾರ್ಬನ್ಡೈಜಿಂ 50wp 1 ಗ್ರಾಂ. ಅಥವಾ ಟ್ರೈಸೈಕ್ಲೋಜೋಲ್ 75wp 0.6 ಗ್ರಾಂ, ಅನ್ನು ಪ್ರತಿ ಲೀಟರ್ ಪ್ರಮಾಣದಂತೆ ನೀರಿನಲ್ಲಿ ಬೆರೆಸಿ ಭತ್ತದ ಗೊನೆಯ ಕೆಳಭಾಗಕ್ಕೆ ತಗಲುವಂತೆ ಸಿಂಪಡಣೆ ಮಾಡಬೇಕು, 01 ಎಕರೆ ಬೆಳೆಗೆ 150 ಗ್ರಾಂ ಟ್ರೈಸೈಕ್ಲೋಜೋಲ್ ಬೇಕಾಗುತ್ತದೆ. ಇದನ್ನು 250 ಲೀಟರ್ ನೀರಿನಲ್ಲಿ ಬೆರೆಸಿ 01 ಎಕರೆ ಬೆಳೆಗೆ ಸಿಂಪಡಣೆ ಕೈಗೊಳ್ಳುವುದರಿಂದ ರೋಗದ ನಿರ್ವಹಣೆ ಮಾಡಬಹುದು ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.
ಸದ್ಯ ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಈ ರೋಗದ ಹತೋಟಿಗೆ ಬೇಕಾದ ಔಷಧಿ ಲಭ್ಯವಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮೊದಲಿಂದಲೇ ಇದರ ಬಗ್ಗೆ ಉದಾಸೀನ ತಾಳಿದ ರೈತರು ಇದೀಗ ಉಲ್ಬಣಗೊಂಡ ಬಳಿಕ ಸಿಂಪಡಣೆಗೆ ಮುಂದಾಗಿರುವುದರಿಂದ ಹೆಚ್ಚಿನ ಅನುಕೂಲವಾದಂತೆ ಕಂಡು ಬರುತ್ತಿಲ್ಲ. ಆದರೂ ತಮ್ಮ ಪ್ರಯತ್ನ ಮಾಡುತ್ತಿರುವುದು ಕಂಡು ಬರುತ್ತಿದೆ.