ಅ.22ರಂದು ಮೈಸೂರು ದಸರಾ ಆಚರಣೆಗೆ ವಿರೋಧ
ಮೈಸೂರು, ಅಕ್ಟೋಬರ್ 03 : ನಾಡಹಬ್ಬ ಮೈಸೂರು ದಸರಾವನ್ನು ಅಕ್ಟೋಬರ್ 22ರಂದು ಆಚರಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಅಕ್ಟೋಬರ್ 13 ರಿಂದ 22ರ ತನಕ ಈ ಬಾರಿಯ ದಸರಾ ನಡೆಯಲಿದ್ದು, 22ರಂದು ಜಂಬೂ ಸವಾರಿ ನಡೆಯಲಿದೆ ಎಂದು ಸರ್ಕಾರ ಶುಕ್ರವಾರ ದಿನಾಂಕ ಪ್ರಕಟಿಸಿದೆ.
ಮೊದಲು ಅಕ್ಟೋಬರ್ 14ರಂದು ದಸರಾ ಉದ್ಘಾಟನೆಯಾಗಲಿದ್ದು, 23ಕ್ಕೆ ಜಂಬೂಸವಾರಿ ನಡೆಯಲಿದೆ ಎಂದು ದಿನಾಂಕ ನಿಗದಿಯಾಗಿತ್ತು. ಆದರೆ, ಅ.23ರಂದು ಏಕಾದಶಿ ಇರುವುದರಿಂದ ದಿನಾಂಕ ಬದಲಾವಣೆಯಾಗಿದೆ. ಆದ್ದರಿಂದ ಅ.22ರಂದು ಜಂಬೂ ಸವಾರಿ ನಡೆಯಲಿದೆ. [ಆಯುಧಪೂಜೆಯಂದೇ ಜಂಬೂ ಸವಾರಿ]
ಮೈಸೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು, 'ಅಕ್ಟೋಬರ್ 13ರಂದು ಬೆಳಗ್ಗೆ 11 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ರೈತ ಪುಟ್ಟಯ್ಯ ಅವರು ದಸರಾ ಉದ್ಘಾಟಿಸಲಿದ್ದಾರೆ. ಅ. 22ರಂದು ಜಂಬೂಸವಾರಿ ನಡೆಯಲಿದೆ' ಎಂದು ಹೇಳಿದ್ದಾರೆ. [ಜಂಬೂ ಸವಾರಿಯಲ್ಲಿ 4 ಜಿಲ್ಲೆಗಳ ಸ್ತಬ್ಧ ಚಿತ್ರಗಳಿಗೆ ಮಾತ್ರ ಅವಕಾಶ]
'ಅ.22ರ ಗುರುವಾರ ಮಧ್ಯಾಹ್ನ 1.10ರಿಂದ 1.25ರ ನಡುವಿನ ಮಕರ ಲಗ್ನದಲ್ಲಿ ನಂದಿಪೂಜೆ ನಡೆಯಲಿದೆ. ಮಧ್ಯಾಹ್ನ 3.12ರಿಂದ ಸಂಜೆ 4.10ರ ಕುಂಭಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ' ಎಂದು ಸಚಿವರು ಮಾಹಿತಿ ನೀಡಿದ್ದಾರೆ. [ಸರಳವಾಗಿ ದಸರಾ ಆಚರಣೆ : ಈ ಬಾರಿ ಏನಿರುತ್ತೆ, ಏನಿರಲ್ಲ?]
ಅ.23ರಂದು ಯಾವ ಕಾರ್ಯಕ್ರಮ ಮಾಡ್ತಿರಿ? : ದಸರಾ ದಿನಾಂಕ ಬದಲಾವಣೆ ಮಾಡಿರುವ ಬಗ್ಗೆ ಮೈಸೂರಿನ ಇತಿಹಾಸತಜ್ಞ ಪ್ರೊ.ನಂಜರಾಜೇ ಅರಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಅ.22ರಂದು ದಸರಾ ಆಚರಣೆ ಮಾಡಿದರೆ, ಅ.23ರಂದು ಯಾವ ಕಾರ್ಯಕ್ರಮ ಮಾಡುತ್ತೀರಿ?. ಅ.23ರಂದು ಸರ್ಕಾರಿ ರಜೆ ಘೋಷಣೆ ಮಾಡಿರುವುದು ಏಕೆ?' ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಅರಮನೆಯಿಂದ ವಿರೋಧ : ಮೈಸೂರು ಅರಮನೆಯೂ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಮೈಸೂರು ಅರಮನೆ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ್ ಅವರು ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, 'ಅ.22ರಂದು ಅರಮನೆಯಲ್ಲಿ ಹಲವಾರು ಸಾಂಪ್ರದಾಯಿಕ ಕಾರ್ಯಕ್ರಮಗಳಿವೆ. ಅಂದೇ ಸರ್ಕಾರ ಜಂಬೂ ಸವಾರಿ ನಡೆಸಿದರೆ ಎರಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಹೇಗೆ?' ಎಂದು ಅವರು ಪ್ರಶ್ನಿಸಿದ್ದಾರೆ.