ಎಚ್ ಡಿ ಕೋಟೆಯಲ್ಲಿ ಹುಲಿ ಪ್ರತ್ಯಕ್ಷ, ಸೆರೆ ಹಿಡಿಯಲು 80 ಸಿಬ್ಬಂದಿ!
ಮೈಸೂರು, ನವೆಂಬರ್ 06: ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಅರಣ್ಯ ವ್ಯಾಪ್ತಿಯ ಕಾರಾಪುರ ಕಬಿನಿ ರಿವರ್ ಲಾಡ್ಜ್ (ಜಂಗಲ್ ಲಾಡ್ಜ್) ಬಳಿ ಹುಲಿ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಎಚ್.ಡಿ.ಕೋಟೆಯಲ್ಲಿ ಮತ್ತೊಂದು ಹುಲಿ ಪ್ರತ್ಯಕ್ಷ
ಕೆಲವು ದಿನಗಳ ಹಿಂದೆಯಷ್ಟೇ ನಾಗರಹೊಳೆ ಅರಣ್ಯದಿಂದ ನಾಡಿಗೆ ಬಂದಿದ್ದ ಹುಲಿಯನ್ನು ಸೆರೆಹಿಡಿಯಲಾಗಿತ್ತು. ಇದೀಗ ಕಾರಾಪುರ ಬಲಿ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಅದರ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.
ಕಳೆದ ಎರಡು ದಿನಗಳ ಹಿಂದೆಯೇ ಈ ಹುಲಿ ಜನರ ಕಣ್ಣಿಗೆ ಬಿದ್ದಿದ್ದು, ಎಲ್ಲೆಂದರಲ್ಲಿ ಓಡಾಡುತ್ತಾ ಭಯ ಹುಟ್ಟಿಸಿದೆ. ಸದ್ಯ ಹುಲಿಯು ಜಂಗಲ್ ಲಾಡ್ಜ್ ನ ಆಸುಪಾಸಿನ ಜಮೀನಿನಲ್ಲೇ ಓಡಾಡುತ್ತಿದೆ ಎನ್ನಲಾಗಿದ್ದು ಇದನ್ನು ಕೆಲವು ರೈತರು ನೋಡಿ ಭಯಗೊಂಡಿದ್ದಾರೆ.
ಜನರು ನೀಡಿದ ಮಾಹಿತಿ ಮೇರೆಗೆ ಅಂತರಸಂತೆ ಹಾಗೂ ಡಿ.ಬಿ.ಕುಪ್ಪೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ಹುಲಿ ತಿರುಗುತ್ತಿರುವುದು ಖಚಿತವಾಗಿದೆ.
ಪಕ್ಕಾ ಮಾಹಿತಿ ಅರಿಯುವ ಮತ್ತು ಹುಲಿಯ ಚಲನವಲನ ತಿಳಿಯುವ ಸಲುವಾಗಿ ಟ್ರ್ಯಾಪಿಂಗ್ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಈ ಪೈಕಿ ಒಂದು ಕ್ಯಾಮೆರಾದಲ್ಲಿ ಹುಲಿ ಅಡ್ಡಾಡಿರುವುದು ಸೆರೆಯಾಗಿದೆ.
ಡಿ.ಬಿ.ಕುಪ್ಪೆ ವಲಯದ 50 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ, ಸರಗೂರು ಠಾಣೆಯ ಪಿಎಸ್ಐ ಬಸವರಾಜು, ಬೀಚನಹಳ್ಳಿ ಠಾಣೆಯ ಪಿಎಸ್ಐ ಸುರೇಶ್ ಸೇರಿದಂತೆ 20 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 70ರಿಂದ 80 ಸಿಬ್ಬಂದಿ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಕಾರ್ಯಾಚರಣೆಗೆ ದಸರಾ ಆನೆಗಳಾದ ಅರ್ಜುನ ಮತ್ತು ಅಭಿಮನ್ಯು ಆನೆಗಳು ಸಾಥ್ ನೀಡಿವೆ. ಒಟ್ಟಾರೆ ಹುಲಿ ಸೆರೆಯಾಗುವ ತನಕ ಈ ವ್ಯಾಪ್ತಿಯ ಜನರಿಗೆ ಭಯ ದೂರವಾಗುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ.