ಮೋದಿ ಸಮಾವೇಶಕ್ಕೆ ಸರ್ಪಗಾವಲು, ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ
Recommended Video
ಮೈಸೂರು, ಫೆಬ್ರವರಿ 19 : ಕರ್ನಾಟಕ ವಿಧಾನಸಭಾ ಚುನಾವಣೆಗೆ 3 ತಿಂಗಳು ಇರುವಂತೆ ಎಲ್ಲ ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆಗಳು ಆರಂಭವಾಗಿದೆ. ಕೆಲ ದಿನಗಳ ಹಿಂದಷ್ಟೇ ರಾಜ್ಯಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ.
ಫೆಬ್ರವರಿ 4ರಂದು ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ಮೋದಿ, 15 ದಿನಗಳ ನಂತರ ಮತ್ತೊಮ್ಮೆ ರಾಜ್ಯಕ್ಕೆ ಬಂದಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಎರಡನೇ ಬಾರಿಗೆ ಮೈಸೂರಿಗೆ ಬಂದಿದ್ದು, ಇದಕ್ಕೂ ಮುನ್ನ 2016ರಲ್ಲಿ ನಗರದಲ್ಲಿ ನಡೆದ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
In Pics: ಮೈಸೂರಿಗೆ ಆಗಮಿಸಿದ ನರೇಂದ್ರ ಮೋದಿಗೆ ಸ್ವಾಗತ ಕೋರಿದ ಸಿದ್ದರಾಮಯ್ಯ
ಲೋಕಸಭೆ ಚುನಾವಣಾ ಪೂರ್ವದಲ್ಲಿ ಪ್ರತಾಪ್ ಸಿಂಹ ಅವರ ಚುನಾವಣೆ ಪ್ರಚಾರಕ್ಕಾಗಿ 2013ರಲ್ಲಿ ಮೈಸೂರಿಗೆ ಬಂದಿದ್ದರು. ಈ ಬಾರಿ ಮೈಸೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೋದಿ ಉಳಿದುಕೊಳ್ಳುವ ಸ್ಥಳ, ಸಂಚಾರ ಮಾರ್ಗ, ವಿವಿಧ ಕಾರ್ಯಕ್ರಮಗಳ ಸ್ಥಳಗಳನ್ನು ಈಗಾಗಲೇ ಎಸ್ ಪಿಜಿ ಸಿಬ್ಬಂದಿ, ಶ್ವಾನದಳ, ಭಯೋತ್ಪಾದಕ ನಿಗ್ರಹ ದಳ ಸೇರಿದಂತೆ ಇತರ ವಿಭಾಗದ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ.
ಮೈಸೂರಿಗೆ ಆಗಮಿಸಿದ ಮೋದಿ, ಸೋಮವಾರ ಹಲವು ಕಾರ್ಯಕ್ರಮಗಳಲ್ಲಿ ಭಾಗಿ
ಇನ್ನು ಬಿಜೆಪಿ ಸಮಾವೇಶಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ 40X60 ಅಳತೆಯಲ್ಲಿ ವೇದಿಕೆ ಸಿದ್ಧತೆ ಕಾರ್ಯ ಭರದಿಂದ ಸಾಗುತ್ತಿದೆ.
ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ
ಸೋಮವಾರ ಸಂಜೆ 4ಕ್ಕೆ ಮಹಾರಾಜ ಕಾಲೇಜು ಮೈದಾನದ ವೇದಿಕೆಯಿಂದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸುಮಾರು 45 ನಿಮಿಷಗಳ ಕಾಲ ಮೋದಿ ಭಾಷಣ ಮಾಡಲಿದ್ದಾರೆ. ಆ ನಂತರ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು. ಬಿಜೆಪಿ ಸಮಾವೇಶಕ್ಕೆ ಮೈಸೂರು ವಿಭಾಗದ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಜಿಲ್ಲೆಯಿಂದ ಒಂದು ಲಕ್ಷ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದ್ದು, ಈ ಸಮಾವೇಶ ಮುಂಬರುವ ಸಾರ್ವತ್ರಿಕ ಚುನಾವಣೆಗೆ ರಣಕಹಳೆ ಮೊಳಗಿಸಲಿದೆ.
ಪಾಲ್ಗೊಳ್ಳುವವರ ಪಟ್ಟಿ ದೊಡ್ಡದಿದೆ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಸಿ.ಟಿ.ರವಿ, ವಿ.ಸೋಮಣ್ಣ, ವಿ.ಶ್ರೀನಿವಾಸ್ ಪ್ರಸಾದ್ ಮುಂತಾದವರು ಸಮಾವೇಶದ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದಾರೆ. .
ಮೈದಾನದ ತುಂಬಾ ಫ್ಲೆಕ್ಸ್ ಗಳು
ಮೋದಿ ಅವರನ್ನು ಆಹ್ವಾನಿಸುವ ಪೈಪೋಟಿಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಪ್ರಧಾನಿ ಅವರ ಸ್ವಚ್ಛ ಭಾರತ್ ಉದ್ದೇಶಕ್ಕೆ ವಿರುದ್ಧವಾಗಿ ದೊಡ್ಡ ದೊಡ್ಡ ಫ್ಲೆಕ್ಸ್ ಗಳನ್ನು ಮಹಾರಾಜ ಕಾಲೇಜು ಮೈದಾನದ ತುಂಬೆಲ್ಲಾ ಅಳವಡಿಸಿದ್ದಾರೆ. ಈ ಫ್ಲೆಕ್ಸ್ ನಲ್ಲಿ ಮೋದಿ ಭಾವಚಿತ್ರದ ಜತೆಗೆ ತಮ್ಮ ಹಾಗೂ ಬೆಂಬಲಿಗರ ಫೋಟೋಗಳನ್ನು ಇಡೀ ಮೈದಾನದ ಸುತ್ತಲೂ ಹಾಕಿದ್ದಾರೆ. ಈಗ ಇಲ್ಲಿ 'ಸ್ವಚ್ಛ ಸರ್ವೇಕ್ಷಣ'ದ ಸರ್ವೇ ನಡೆಯುತ್ತಿದೆ. ಕೇಂದ್ರದ ಅಧಿಕಾರಿಗಳ ತಂಡ ಕಳೆದ ಕೆಲ ದಿನಗಳಿಂದ ಮೈಸೂರು ನಗರದ ಸರ್ವೇ ನಡೆಸುತ್ತಿದ್ದಾರೆ.
ಸಾರ್ವಜನಿಕರ ಆರೋಪ
ಆದರೆ, ಬಿಜೆಪಿಯ ಕೆಲವು ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ನೆಪದಲ್ಲಿ ನಗರದ ಸೌಂದರ್ಯ ಹಾಳುಗೆಡವಿದ್ದಾರೆ. ಆ ಮೂಲಕ ಪರೋಕ್ಷವಾಗಿ ಪ್ರಧಾನಿ ಆಶಯಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ಮೈಸೂರು ನಗರದ ಸ್ವಚ್ಛನಗರಿ ಪಟ್ಟಕ್ಕೂ ಹಾನಿಯಾಗುವಂತೆ ಮಾಡಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ.
ನಾಲ್ಕು ಕಡೆ ಪ್ರವೇಶ
ಸಮಾವೇಶಕ್ಕೆ ಬರುವವರನ್ನು ತಪಾಸಣೆ ಮಾಡಿ ಒಳಗೆ ಬಿಡಲು ನಾಲ್ಕು ಕಡೆ ಪ್ರವೇಶ ಮಾಡಲಾಗಿದೆ. ನಾಲ್ಕು ಕಡೆಯಲ್ಲೂ ಲೋಹಶೋಧಕ ಯಂತ್ರಗಳನ್ನು ಇಡಲಾಗಿದೆ. ಪ್ರತಿಯೊಬ್ಬರೂ ಒಳ ಪ್ರವೇಶ ಮಾಡಿದ ಬಳಿಕ ವಾಪಸ್ ಬರುವಂತಿಲ್ಲ. ಗಣ್ಯರ ವಾಹನಗಳಿಗೆ ಪಾಸ್ ನೀಡಲಾಗಿದ್ದು, ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡಿ ಅದೇ ಮಾರ್ಗದಲ್ಲಿ ತಲುಪಬೇಕಾಗಿದೆ. ಮೈದಾನದ ಬಳಿ ತಾತ್ಕಾಲಿಕವಾಗಿ ಹೆಲಿಪ್ಯಾಡ್ ಸ್ಥಾಪಿಸಿದ್ದು, ಈಗಾಗಲೇ ಹೆಲಿಪ್ಯಾಡ್ ನಿರ್ಮಿಸಿರುವ ಪೆವಿಲಿಯನ್ ಮೈದಾನವನ್ನು ತಮ್ಮ ಸುಪರ್ದಿಗೆ ಪಡೆದಿರುವ ಎಸ್ಪಿಜಿ ಅಧಿಕಾರಿಗಳು, ಸಾರ್ವಜನಿಕರು ಮತ್ತು ಕ್ರೀಡಾಪಟುಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ.
1 ಸಾವಿರ ಬಸ್ ವ್ಯವಸ್ಥೆ
ಸಾರ್ವಜನಿಕ ಸಮಾವೇಶಕ್ಕೆಂದು ಐದು ಜಿಲ್ಲೆಗಳಿಂದ 1 ಸಾವಿರ ಬಸ್ಗಳ ವ್ಯವಸ್ಥೆಯನ್ನು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಮಾಡಲಾಗಿದೆ. ಸಮಾವೇಶಕ್ಕೆ 1 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರಧಾನಿ ಮಾಡುವ ಭಾಷಣವನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಕನ್ನಡಕ್ಕೆ ಅನುವಾದಿಸಲಿದ್ದಾರೆ. ಮೋದಿಯವರೊಂದಿಗೆ ಸರಕಾರಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಭಾಗವಹಿಸುವುದು ಅನುಮಾನವಾಗಿದೆ. ಪುಟ್ಟಣ್ಣಯ್ಯ ನಿಧನದ ಹಿನ್ನೆಲೆಯಲ್ಲಿ ಬೆಳಗ್ಗೆ 11ಕ್ಕೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಮೋದಿಗೆ ಉಡುಗೊರೆಯಾಗಿ 3 ಕೆ.ಜಿ ತೂಕದ ಬೆಳ್ಳಿ ಗಣಪ
ಮೋದಿ ಅವರಿಗೆ ನೀಡಲು ಬಿಜೆಪಿ ಕಾರ್ಯಕರ್ತರು ವಿಶೇಷ ಉಡುಗೊರೆ ಸಜ್ಜುಗೊಳಿಸಿದ್ದಾರೆ. ಚುನಾವಣಾ ಪ್ರಚಾರದ ವಿಘ್ನ ನಿವಾರಣೆಗಾಗಿ ಬೆಳ್ಳಿ ವಿಘ್ನೇಶ್ವರನನ್ನು ಉಡುಗೊರೆಯಾಗಿ ನೀಡಲು ಮೈಸೂರು ಬಿಜೆಪಿ ವತಿಯಿಂದ ಸಿದ್ಧತೆ ನಡೆದಿದೆ. ಸಮಾವೇಶದಲ್ಲಿ 3 ಕೆ.ಜಿ. ತೂಕದ ಬೆಳ್ಳಿ ಗಣಪತಿಯನ್ನು ಮೋದಿಗಾಗಿ ನೀಡಲಿದ್ದಾರೆ. ಗಣೇಶ ಮೂರ್ತಿಯ ಜೊತೆ ಶ್ರೀಗಂಧ ಹಾರ, ಮೈಸೂರು ಪೇಟ, ಕೇಸರಿ ಶಾಲು ಉಡುಗೊರೆಯಾಗಿ ನೀಡಲಿದ್ದಾರೆ.