ಜೇಬುಗಳ್ಳನೆಂಬ ಅನುಮಾನದಲ್ಲಿ ಅಮಾಯಕನನ್ನು ಕೊಂದವರು ಜೈಲು ಪಾಲು
ಮೈಸೂರು, ಜೂನ್ 8 : ಮಕ್ಕಳ ಕಳ್ಳರು ಎಂಬ ಅನುಮಾನದಲ್ಲಿ ಜನರು ಅಮಾಯಕರನ್ನು ಥಳಿಸಿ ಕೊಂದ ಪ್ರಕರಣಗಳು ಈಚೆಗೆ ವರದಿಯಾಗುತ್ತಿವೆ. ಅಂಥದ್ದೇ ಪ್ರಕರಣವೊಂದು ಈಚೆಗೆ ಮೈಸೂರಿನಲ್ಲಿ ನಡೆದಿದ್ದು, ಅಮಾಯಕರೊಬ್ಬರ ಸಾವಿಗೆ ಕಾರಣರಾದ ಆರು ಮಂದಿ ಸಾರ್ವಜನಿಕರು ಇದೀಗ ಜೈಲು ಸೇರಿದ್ದಾರೆ.
ಮೇ 10ರಂದು ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಳ್ಳನೆಂದು ಶಂಕಿಸಿ, ಥಳಿಸಿ ಆತನ ಸಾವಿಗೆ ಈ ಆರು ಮಂದಿ ಕಾರಣರಾಗಿದ್ದರು.
ಮಕ್ಕಳ ಕಳ್ಳನೆಂದು ಥಳಿಸಿ ಕೊಂದ ಸ್ಥಳೀಯರು: 9 ಮಂದಿ ಬಂಧನ
ಅರಕಲಗೂಡಿನ ಮಹದೇವ(33), ನಂಜನಗೂಡಿನ ಗಟವಾಡಿಪುರ ಗ್ರಾಮದ ರಾಘವೇಂದ್ರ(30), ತಿ.ನರಸೀಪುರ ಗ್ರಾಮದ ಶಶಿಕುಮಾರ್(30), ಮೂಗೂರು ಗ್ರಾಮದ ಪ್ರೇಮ್ ಕುಮಾರ್(24), ಹುಣಸೂರಿನ ದಲ್ಲಾಳು ಗ್ರಾಮದ ಮದನ್ ಗೋಪಾಲ್ (26) ಹಾಗೂ ಚಾಮರಾಜನಗರದ ದೊಳ್ಳಿಪುರದ ರವಿ (24) ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ ಮಹಮದ್ ಇರ್ಫಾನ್ ಎಂಬ ಯುವಕ ಮೇ 10ರ ರಾತ್ರಿ ಇಲ್ಲಿನ ಚೆಲುವಾಂಬ ಆಸ್ಪತ್ರೆ ಬಳಿ ಅಡ್ಡಾಡುತ್ತಿದ್ದಾಗ ಆರೋಪಿಗಳು ಆತನ ಚಲನವಲನ ಗಮನಿಸಿ, ಅನುಮಾನಗೊಂಡಿದ್ದಾರೆ. ಆತ ಜೇಬು ಕಳ್ಳನಿರಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆ ನಂತರ ಹಿಂದು ಮುಂದು ಯೋಚಿಸದೆ ನೀರಿನ ಪೈಪು, ಕಬ್ಬಿಣದ ರಾಡು ಮತ್ತು ದೊಣ್ಣೆಯಿಂದ ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಯ ಪರಿಣಾಮದಿಂದ ಇರ್ಫಾನ್ ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಯ ಕ್ಯಾಂಟೀನ್ ಬಳಿ ಅಸ್ವಸ್ಥರಾಗಿ ಬಿದ್ದಿದ್ದರು. ಆತನನ್ನು ಗಮನಿಸಿದ ಚೆಲುವಾಂಬ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್ ತಕ್ಷಣ ಕರೆದೊಯ್ದು ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇರ್ಫಾನ್ ಮೃತಪಟ್ಟಿದ್ದಾರೆ.
ಆ ಬಳಿಕ ಇರ್ಫಾನ್ ಪೋಷಕರು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತಮ್ಮ ಮಗನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗಹಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಆಸ್ಪತ್ರೆ ಆವರಣದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆರೋಪಿಗಳನ್ನು ಗುರುತಿಸಿ, ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆರೋಪಿಗಳನ್ನು 2 ವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.