ಈ ಬಾರಿ ಮೈಸೂರು ಜಿಲ್ಲೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳ ಸಂಖ್ಯೆ ಇಳಿಮುಖ
ಮೈಸೂರು, ನವೆಂಬರ್. 22: ಸಾಂಸ್ಕೃತಿಕ ನಗರಿ ಮೈಸೂರು ಕೇವಲ ಪ್ರವಾಸಿ ಸ್ಥಳವಷ್ಟೇ ಅಲ್ಲ. ಧಾರ್ಮಿಕ ಕಾರ್ಯಗಳಿಗೂ ಹೆಸರುವಾಸಿ. ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿಯ ವ್ರತಾಚರಣೆಯಲ್ಲಿ ತೊಡಗುವ ಭಕ್ತರ ಸಂಖ್ಯೆ ಇಲ್ಲಿ ಹೆಚ್ಚಿದೆ. ಆದರೆ, ಈ ಬಾರಿ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಅದಕ್ಕೆ ಶಬರಿಮಲೆಯಲ್ಲಿ ಪ್ರಸಕ್ತ ವರ್ಷ ಸೃಷ್ಟಿಯಾಗಿರುವ ಗೊಂದಲವೇ ಕಾರಣ.
ವ್ರತಾಚರಣೆ ಈಗಾಗಲೇ ಪ್ರಾರಂಭವಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇಷ್ಟು ಹೊತ್ತಿಗೆ ಮಾಲಾಧಾರಿಗಳು ಇಲ್ಲಿನ ಯಾವುದೇ ರಸ್ತೆಗಳಲ್ಲಿ ಕಣ್ಣು ಹಾಯಿಸಿದರೂ ಕಾಣಿಸಬೇಕಿತ್ತು. ಆದರೆ ಈ ಬಾರಿ ಕಡಿಮೆಯಾದಂತೆ ಕಾಣುತ್ತಿದ್ದು, ಜಿಲ್ಲೆಯಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ.
ಕೇರಳದಲ್ಲಿ ಕೇಂದ್ರ ಸಚಿವರಿಗೆ ಬೆವರಿಳಿಸಿದ ಕರ್ನಾಟಕದ ಐಪಿಎಸ್ ಅಧಿಕಾರಿ
ಶಬರಿಮಲೆಗೆ ಹೋಗಬೇಕೋ, ಬೇಡವೋ ಎಂಬ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಪ್ರತಿ ವರ್ಷ ಇಡೀ ಜಿಲ್ಲೆಯಿಂದ ಶಬರಿಮಲೆಗೆ ಹೋಗುವ ಭಕ್ತರ ಸಂಖ್ಯೆ 15ರಿಂದ 18 ಸಾವಿರ. ಅದರಲ್ಲಿ ನಗರದಿಂದಲೇ 4ರಿಂದ 5 ಸಾವಿರ ಭಕ್ತರು ಅಯ್ಯಪ್ಪಸ್ವಾಮಿ ದರ್ಶನಕ್ಕೆ ಹೋಗುತ್ತಿದ್ದರು.
ಆದರೆ, ಈ ಬಾರಿ ಈ ಸಂಖ್ಯೆ ನಗರ ಭಾಗದಲ್ಲಿ ಶೇ. 20ರಷ್ಟು, ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಂದ ಶೇ. 30 ರಷ್ಟು ಕಡಿಮೆಯಾಗಬಹುದು ಎಂದು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹೇಳುತ್ತಾರೆ.
ಮಾಲಾಧಾರಿಗಳ ಸಂಖ್ಯೆ ಹೆಚ್ಚಬಹುದು
ಶಬರಿಮಲೆಗೆ ಹೋಗಿ ಬಂದವರ ಅಭಿಪ್ರಾಯ ಪಡೆದ ನಂತರ ತೀರ್ಮಾನಿಸೋಣ ಎಂಬುದು ಹಲವರ ನಿಲುವು. ನ.30ರವರೆಗೆ ಸ್ಥಳೀಯವಾಗಿ ಕರ್ನಾಟಕ ರಾಜ್ಯೋತ್ಸವ, ಗ್ರಾಮೀಣ ಪ್ರದೇಶಗಳಲ್ಲಿ ಕಿರು ದೀಪಾವಳಿಗಳಿವೆ. ಡಿಸೆಂಬರ್ 1ರ ನಂತರ ಮಾಲಾಧಾರಿಗಳ ಸಂಖ್ಯೆ ಹೆಚ್ಚಬಹುದು ಎಂಬುದು ಅಯ್ಯಪ್ಪ ಭಕ್ತರ ವಿಶ್ವಾಸ.
ತೆರಿಗೆ ದರ ಹೆಚ್ಚಳ
"ಶಬರಿಮಲೆಯಲ್ಲಿ ನಡೆಯುತ್ತಿರುವ ಘಟನೆಗಳು ಮನಸ್ಸಿಗೆ ನೋವು ತಂದಿವೆ. ಕೇರಳದಲ್ಲಿ ಈಚೆಗೆ ಸಂಭವಿಸಿದ ಪ್ರವಾಹದಿಂದಾಗಿ ದೇಗುಲಕ್ಕೆ ತೆರಳುವ ರಸ್ತೆ ಮಾರ್ಗಗಳು ಹಾಳಾಗಿವೆ. ಈ ಬಾರಿ ಕರ್ನಾಟಕವಷ್ಟೇ ಅಲ್ಲದೆ, ದೇಶದ ವಿವಿಧ ರಾಜ್ಯಗಳಿಂದ ಹೋಗುವ ವಾಹನಗಳಿಂದ ಸಿಕ್ಕಾಪಟ್ಟೆ ಟೋಲ್ ಸಂಗ್ರಹಿಸಲಾಗುತ್ತಿದೆ. ತೆರಿಗೆ ದರವನ್ನೂ ಹೆಚ್ಚಿಸಲಾಗಿದ್ದು, ಇದರಿಂದಾಗಿ ಖಾಸಗಿ ವಾಹನಗಳಲ್ಲಿ ಹೋಗುವವರಿಗೆ ತುಂಬಾ ಕಷ್ಟವಾಗುತ್ತಿದೆ" ಎನ್ನುತ್ತಾರೆ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ನಿರ್ದೇಶಕ ಹಾಗೂ ಅರ್ಚಕ ಗಣೇಶ್.
'ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರಿಗಿಂತ ಹೆಚ್ಚು ಪೊಲೀಸರೇ ಕಾಣುತ್ತಾರೆ'
ಭಕ್ತರಿಂದ ಹೆಚ್ಚುವರಿ ಹಣ
"ಮಾಲಾಧಾರಿಗಳು ಅಯ್ಯಪ್ಪಸ್ವಾಮಿ ದೇಗುಲದಿಂದ ಸುಮಾರು 30 ಕಿ.ಮೀ ದೂರದಲ್ಲಿ ವಾಹನ ನಿಲ್ಲಿಸಬೇಕಾಗಿದೆ. ಅಲ್ಲಿಂದ ಸರ್ಕಾರ ವ್ಯವಸ್ಥೆ ಮಾಡಿದ ವಾಹನಗಳಲ್ಲಿ ದೇಗುಲಕ್ಕೆ ಹೋಗಬೇಕು. ಇದಕ್ಕೆ ಭಕ್ತರು ಹೆಚ್ಚುವರಿ ಹಣ ತೆರಬೇಕು. ಅಲ್ಲದೇ, ರಾತ್ರಿ 10ರ ನಂತರ ಸ್ವಾಮಿಯ ಸನ್ನಿಧಾನದಲ್ಲಿ ಇರಲು ಯಾರನ್ನೂ ಬಿಡುತ್ತಿಲ್ಲ" ಎನ್ನುತ್ತಾರೆ ಅರ್ಚಕ ಗಣೇಶ್.
ಡಿಸೆಂಬರ್ ಕೊನೆ ವಾರದವರೆಗೆ ಕಾಯಬೇಕಿದೆ
ಸ್ವಾಮಿಯ ದರ್ಶನ ಪಡೆದು ಬೆಟ್ಟದಿಂದ ಕೆಳಗೆ ಇಳಿಯಲು 24 ಗಂಟೆಯ ಕಾಲಾವಕಾಶವನ್ನು ಕೇರಳ ಸರ್ಕಾರ ನೀಡಿದೆ. ಭಕ್ತರ ವಾಸ್ತವ್ಯಕ್ಕೂ ವ್ಯವಸ್ಥೆ ಇಲ್ಲ ಎಂಬ ವದಂತಿಗಳು ಹರಿದಾಡುತ್ತಿವೆ. ಜಿಲ್ಲೆಯ ನಂಜನಗೂಡು, ಕೆ.ಆರ್ ನಗರ ಭಾಗದಿಂದ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಮಾಲಾಧಾರಿಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತದೆ. ಈ ಬಾರಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಆ ಸಂಖ್ಯೆಯಲ್ಲಿ ಇಳಿಮುಖ ಆಗದು ಎನ್ನುತ್ತಾರೆ ಹಲವರು.
ಕೇರಳದ ಕನ್ಯಾ ಗಣಪತಿ ದೇಗುಲದ ಕೆಳ ಭಾಗದವರೆಗೂ ಪ್ರವಾಹದಿಂದಾಗಿ ಮರಳು ತುಂಬಿದೆ. ಭಕ್ತರಿಗೆ ಅಲ್ಲಿ ಮಲಗಲಿಕ್ಕೂ ಸ್ಥಳಾವಕಾಶದ ಸಮಸ್ಯೆ ಉಂಟಾಗಿದೆ. ಸಾಕಷ್ಟು ಮೂಲ ಸೌಕರ್ಯದ ಕೊರತೆಗಳಿವೆ. ಡಿಸೆಂಬರ್ ಕೊನೆ ವಾರದ ಹೊತ್ತಿಗೆ ಸರಿಹೋದರೆ ಭಕ್ತರ ಸಂಖ್ಯೆ ಹೆಚ್ಚಲಿದೆ ಎಂಬುದು ಕೆಲವರ ಅಭಿಪ್ರಾಯ.