ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ಬಂಧನದ ವಾರಂಟ್ ಜಾರಿ
ಮೈಸೂರು, ಡಿಸೆಂಬರ್ 7:- ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದ ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ಮೈಸೂರು ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿ ಆದೇಶ ನೀಡಿದೆ.
ಮೈಸೂರಿನ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ. ಶಾಸಕ ಸೋಮಶೇಖರ್ ಅವರು ಸುಳ್ಳು ಮಾಹಿತಿ ನೀಡಿ ಗ್ಯಾಸ್ ಏಜೆನ್ಸಿ ಪಡಿದಿರುವ ವಿಚಾರವಾಗಿ ಮಾಜಿ ಕಾರ್ಪೊರೇಟರ್ ಎಂ.ಸಿ.ಚಿಕ್ಕಣ್ಣ ಅವರು 2008ರ ಮೇ ತಿಂಗಳಲ್ಲಿ ದಾಖಲೆಗಳ ಸಹಿತ ಪತ್ರಿಕಾ ಹೇಳಿಕೆ ನೀಡಿದ್ದರು. ಇದಕ್ಕೆ ಎಂ.ಕೆ.ಸೋಮಶೇಖರ್ ಅವರು ಎಂ.ಸಿ.ಚಿಕ್ಕಣ್ಣ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು.
ಎಂ.ಕೆ.ಸೋಮಶೇಖರ್ ಅವರ ಈ ಹೇಳಿಕೆಯಿಂದ ನೊಂದ ಎಂ.ಸಿ.ಚಿಕ್ಕಣ್ಣ ಅವರು ಎಂ.ಕೆ.ಸೋಮಶೇಖರ್ ವಿರುದ್ಧ ಮೈಸೂರಿನ ಜೆ.ಎಂ.ಎಫ್.ಸಿ ಮೂರನೆಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿನ್ನೆಲೆ ಶಾಸಕ ಎಂ.ಕೆ.ಸೋಮಶೇಖರ್ ಅವರು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನ್ಯಾಯಾಲಯವು ಶಾಸಕರ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿ ಆದೇಶಿಸಿದೆ.