'ಮೇಕ್ ಇನ್ ಇಂಡಿಯಾ'ಘೋಷಣೆಗೆ ಮಾತ್ರ ಸೀಮಿತವಾಗದಿರಲಿ
ಮೈಸೂರು, ಜನವರಿ, 05: 'ಮೇಕ್ ಇನ್ ಇಂಡಿಯಾ' ಘೋಷಣೆಯನ್ನು 'ಭಾರತದಲ್ಲಿಯೇ ಸಂಶೋಧಿಸಿ' ಎಂದು ಬದಲಿಸಿ. ಬಳಿಕ ಭಾರತದಲ್ಲಿಯೇ ತಂತ್ರಜ್ಞಾನ ಅಭಿವೃದ್ಧಿಗೊಳಿಸಿ, ಭಾರತದಲ್ಲಿಯೇ ವಸ್ತುಗಳು ತಯಾರಾಗುವ ದಿನಗಳು ಬರಬೇಕು ಎಂದು ಭಾರತೀಯ ಮೂಲದ ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊ. ಮಂಜುಲ್ ಭಾರ್ಗವ್ ಹೇಳಿದ್ದಾರೆ.
ಜನವರಿ 3 ರಿಂದ ಆರಂಭವಾದ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ ಐವರು ನೊಬೆಲ್ ಪುರಸ್ಕೃತ ವಿಜ್ಞಾನಿಗಳ ಜತೆ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಭಾರತದಲ್ಲಿ ಮೂಲ ವಿಜ್ಞಾನಕ್ಕೆ ಹೆಚ್ಚಿನ ಅವಕಾಶಗಳಿವೆ. ಆದರೆ ಹೆಚ್ಚಿನ ವಿದ್ಯಾರ್ಥಿಗಳು ಇಂಜಿನಿಯರ್ ಗಳಾಗಲು ಬಯಸುತ್ತಿದ್ದಾರೆಯೇ ಹೊರತು ಮೂಲವಿಜ್ಞಾನದ ಕಡೆ ಒಲವು ತೋರುತ್ತಿಲ್ಲ. ಪರಿಣಿತರು ರೂಪುಗೊಳ್ಳುತ್ತಿಲ್ಲ' ಎಂದು ವಿಷಾದ ವ್ಯಕ್ತಪಡಿಸಿದರು.[ದೇಶದ ಅತಿದೊಡ್ಡ ವಿಜ್ಞಾನ ಹಬ್ಬ ಮೈಸೂರಲ್ಲಿ]
ಸಂವಾದದಲ್ಲಿ ಪಾಲ್ಗೊಂಡಿದ್ದ ಇತರೆ ನೊಬೆಲ್ ಪುರಸ್ಕೃತ ವಿಜ್ಞಾನಿಗಳು ಮಾತನಾಡಿ, ದೇಶ ವಿಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಬೇಕಾದರೆ ಆರ್ಥಿಕ ಕ್ಷೇತ್ರದ ಬೆಳವಣಿಗೆಗೆ ಅನುಗುಣವಾಗಿ ವೈಜ್ಞಾನಿಕ ಕ್ಷೇತ್ರದಲ್ಲಿ ಹಣ ಹೂಡುವ ಅಗತ್ಯತೆ ಇದೆ.
ಕಳೆದ ಹತ್ತು ವರ್ಷಗಳಲ್ಲಿ ಭಾರತದ ಜಿಡಿಪಿ ದ್ವಿಗುಣಗೊಂಡಿದೆ. ಆದರೆ ವೈಜ್ಞಾನಿಕ ಕ್ಷೇತ್ರಕ್ಕೆ ತೊಡಗಿಸಿದ ಬಂಡವಾಳದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಮೂಲ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸಬೇಕಾದ ಅನಿವಾರ್ಯತೆ ಇದೆ' ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟರು.[ಮೋದಿ ಕಾರಿಗೆ ಅಡ್ಡ ಬಂದವನು ಯಾರು ಗೊತ್ತಾ?]
ರಾಜಕೀಯ ನಾಯಕರು ಕಡಿಮೆ ಅವಧಿಯಲ್ಲಿ ಹೆಚ್ಚು ಫಲಿತಾಂಶ ತರುವ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಬದಲು ವೈಜ್ಞಾನಿಕ ಸಂಶೋಧನೆಗೆ ಒತ್ತು ನೀಡಬೇಕು. ನಾಯಕರುಗಳ ಮನೋಭಾವ ಬದಲಾಗಬೇಕಿದೆ. ಅವಕಾಶ ನೀಡುವ ಮೂಲಕ ಪ್ರತಿಭಾಪಲಾಯನ ತಡೆಗಟ್ಟಬೇಕು ಎಂದರು.
ಶಾಲಾ ಹಂತದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಹೆಚ್ಚಿನ ಆದ್ಯತೆ ದೊರೆಯಬೇಕು. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಹಣ ತೊಡಗಿಸಬೇಕು. ಇದರಿಂದ ಮಧ್ಯದಲ್ಲಿಯೇ ಶಾಲೆ ಬಿಟ್ಟು ಕೆಲಸ ಹುಡುಕಿಕೊಂಡು ಹೋಗುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದರು.[ವಿಜ್ಞಾನ, ತಂತ್ರಜ್ಞಾನ ಬಡತನ ತೊಲಗಿಸಬೇಕು: ಮೋದಿ]
ಪ್ರೊ. ದೇವಿಡ್ ಗ್ರಾಸ್, ಜಾನ್ ವಿ.ಗುರ್ದಾನ್, ಪ್ರೊ. ಸೆರ್ಜೆ ಹೆಡೋಚ್, ಡಾನ್ ದಚ್ ಮನ್ ಸಂವಾದದಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ, ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಉಪಸ್ಥಿತರಿದ್ದರು.