ಅನುದಾನ ಪಡೆಯುವ ಮಠಗಳು ಕಾನೂನಿಗೂ ಒಳಪಡಲಿ: ನಿಡುಮಾಮಿಡಿ
ಮೈಸೂರು, ಫೆಬ್ರವರಿ 09 : ಸರ್ಕಾರಕ್ಕೆ ಮಠ, ಮಂದಿರಗಳನ್ನು ಸ್ವಾಧೀನಕ್ಕೆ ಪಡೆಯುವ ಉದ್ದೇಶವಿಲ್ಲ. ಸರ್ಕಾರದ ವಸ್ತು ಸ್ಥಿತಿಯನ್ನು ಸರಿಯಾಗಿ ಆಲಿಸದೆ ಮಠಾಧೀಶರು ತಪ್ಪಾ ಗ್ರಹಿಸಿದ್ದಾರೆ. ಆದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರಗತಿಪರ ಸ್ವಾಮೀಜಿಗಳ ವೇದಿಕೆ ಅಧ್ಯಕ್ಷರಾದ ನಿಡುಮಾಮಿಡಿ ಸ್ವಾಮೀಜಿ ಹೇಳಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ಸರ್ಕಾರದ ಅನುದಾನ ಬೇಕು, ಸರ್ಕಾರದ ಜಮೀನು ಬೇಕು ಅದೇ ರೀತಿ ಸರ್ಕಾರದ ನಿಲುವನ್ನೂ ಕೂಡ ಒಪ್ಪಬೇಕು. ಮಠಮಾನ್ಯಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಸರ್ಕಾರದ ನಿಲುವಿಗೆ ಬರಬೇಕು. ಸರ್ಕಾರ ಯಾವುದೇ ಕಾರಣಕ್ಕೂ ಮಠ ಮಾನ್ಯಗಳ ಒಪ್ಪಿಗೆ ಇಲ್ಲದೆ ವಶಕ್ಕೆ ಪಡೆಯುವಂತಿಲ್ಲ ಎಂದರು.
ಒಂದು ವೇಳೆ ಮಠಾಧೀಶರು ಒಪ್ಪಿದರೆ ಮಠ ಮಾನ್ಯಗಳನ್ನು ವಶಕ್ಕೆ ಪಡೆಯಬಹುದು. ಇದೀಗ ಮಠ ಮಾನ್ಯಗಳು ಕಪ್ಪು ಹಣದ ಕೇಂದ್ರವಾಗಿದೆ. ಕೆಲವು ಮಠಗಳ ಅಧಿಕಾರ ವಂಶಪರಂಪರೆಯಾಗಿ ಸಾಗುತ್ತಿದೆ. ಇದು ಸಮಾಜದ ಮೇಲೆ ಪರಿಣಾಮ ಬೀರುತ್ತಿದೆ. ಧರ್ಮ ಸಂಸತ್ ಎಂಬುದೇ ತಪ್ಪು. ಅದು ಒಂದು ಪಕ್ಷಕ್ಕೆ ಒಂದು ಧರ್ಮಕ್ಕೆ ಸೀಮಿತವಾದದ್ದು, ಯಾರೋ ನಾಲ್ಕು ನಾಯಕರು ಮುಖಂಡರು ಕುಳಿತು ತೀರ್ಮಾನಗಳನ್ನು ಒಪ್ಪಿಕೊಳ್ಳಬೇಕೆ ಎಂದು ಮಠಾಧೀಶರ ವಿರುದ್ಧ ಸ್ವಾಮೀಜಿ ಹರಿಹಾಯ್ದರು.