ಕೆ.ಆರ್.ಪೇಟೆಯಲ್ಲಿ ವಿಷ ಸೇವಿಸಿ ನವವಿವಾಹಿತ ಆತ್ಮಹತ್ಯೆ
ಮಂಡ್ಯ, ಆಗಸ್ಟ್ 25: ನವವಿವಾಹಿತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಕೈಗೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ.
ಕೈಗೋನಹಳ್ಳಿ ಗ್ರಾಮದ ಧನೇಂದ್ರಣ್ಣ ಅವರ ಪುತ್ರ ಪ್ರಸನ್ನ(27) ಆತ್ಮಹತ್ಯೆ ಮಾಡಿಕೊಂಡಿರುವ ನವ ವಿವಾಹಿತ. ಈತನ ವಿವಾಹವು ಆ.2ರಂದು ಪಾಂಡವಪುರ ತಾಲೂಕಿನ ನಳ್ಳೇನಹಳ್ಳಿ ಗ್ರಾಮದ ಯುವತಿಯೊಂದಿಗೆ ನಡೆದಿತ್ತು.
ಮದುವೆಯಾಗಿ ಮೊದಲ ಗೌರಿ ಗಣೇಶೋತ್ಸವ ಆಚರಿಸಿಕೊಳ್ಳಬೇಕಾಗಿತ್ತು. ಆದರೆ ಹಬ್ಬಕ್ಕೆ ಮೊದಲೇ ಮದುವೆಯಾದ ಮೂರೇ ವಾರಕ್ಕೆ ವರ ಪ್ರಸನ್ನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕಿದೆ.
ಪ್ರಸನ್ನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನುವಿನಕಟ್ಟೆ ಗ್ರಾಮದ ರೈಸ್ ಮಿಲ್ ಬಳಿ ಚಿಲ್ಲರೆ ಅಂಗಡಿಯನ್ನು ನಡೆಸುತ್ತಿದ್ದರು. ಆದರೆ ಕಳೆದ ಮಂಗಳವಾರ ಅಂಗಡಿಯ ಬಾಗಿಲು ಹಾಕಿ ಮನೆಗೆ ಹೋಗಿರುವ ಪ್ರಸನ್ನ ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದನು.
ವಿಷಯ ತಿಳಿದು ಪೋಷಕರು ತಕ್ಷಣ ಕೆ.ಆರ್.ಪೇಟೆ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾನೆ.
ಘಟನೆ ಕುರಿತು ಮೃತ ಪ್ರಸನ್ನ ಅವರ ತಂದೆ ಧನೇಂದ್ರಣ್ಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆ ಬಳಿಕವಷ್ಟೆ ಪ್ರಸನ್ನ ಆತ್ಮಹತ್ಯೆ ಏಕೆ ಮಾಡಿಕೊಂಡ ಎಂಬುದರ ಬಗ್ಗೆ ಮಾಹಿತಿ ಸಿಗಬೇಕಿದೆ.